ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನದ 6ನೇ ಪತ್ರ
ಇಸ್ಲಾಮಾಬಾದ್, ನವೆಂಬರ್ 19: ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನ ಆರನೇ ಪತ್ರ ಬರೆದಿದೆ.
ಭಾರತ ಸರಕಾರವು ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರವಾಗಿ ಮತ್ತೊಮ್ಮೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಪತ್ರ ಬರೆದಿದ್ದಾರೆ.
ಭಾರತದ ಪರ ನಿಲ್ಲುವ ದೇಶಗಳ ಮೇಲೂ ಅಣುಯುದ್ಧ: ಪಾಕಿಸ್ತಾನದ ಬೆದರಿಕೆ
ಸಂದರ್ಭ ದೊರೆತಾಗಲೆಲ್ಲಾ ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಯ ಮುಂದೆ ತರಲು ಪಾಕಿಸ್ತಾನ ಪ್ರಯತ್ನ ಮಾಡುತ್ತಲೇ ಇದೆ.
ಪತ್ರದಲ್ಲೇನಿದೆ?
ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರೆಸ್ಗೆ ಬರೆದ ಪತ್ರದಲ್ಲಿ 370ನೇ ವಿಧಿ ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಭಾರತದ ಅಕ್ರಮ ಆದೇಶ ತಿರಸ್ಕರಿಸಿ ಎಂದು ಖುರೇಷಿ ಒತ್ತಾಯಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಚಾರ ಚರ್ಚೆಯಾಗಬೇಕು
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ವಿಚಾರ ಚರ್ಚೆಯಾಗಬೇಕೆಂದು ಪತ್ರದಲ್ಲಿ ಪಾಕಿಸ್ತಾನ ಮನವಿ ಕೂಡ ಮಾಡಿಕೊಂಡಿದೆ. ಅದಕ್ಕಾಗಿ ಚೀನಾದ ಮೂಲಕ ಲಾಬಿಯನ್ನೂ ಮಾಡಿಸಿತ್ತು. ಚೀನಾದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೊನೆಗೂ ಕ್ಲೋಸ್ಡ್ ಡೋರ್ ಕನ್ಸಲ್ಟೇಷನ್ಸ್ ಸಭೆಯೂ ನಡೆಯಿತು.
ಎರಡು ಕೇಂದ್ರಾಡಳಿತವಾಗಿ ಪ್ರದೇಶವಾಗಿ ವಿಂಗಡಣೆ
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 35ಎ ಮತ್ತು 370ನೇ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಹಾಗೆಯೇ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಇವುಗಳಿಗೆ ಸಂಸತ್ನ ಎರಡೂ ಸದನಗಳಲ್ಲಿ ಅನುಮೋದನೆಯೂ ಸಿಕ್ಕಿದೆ. ಈಗಾಗಲೇ ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಧಿಕೃತವಾಗಿ ಚಾಲನೆಗೆ ಬಂದಿದೆ.
ಪರಿಸ್ಥಿತಿ ಕೈಮೀರಿದೆ
ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಹದಗೆಡಿಸುವ ಚಟುವಟಿಕೆಗಳನ್ನ ನಡೆಸಬಾರದು. ವಿಶ್ವಸಂಸ್ಥೆ ನಿಯಮದ ಪ್ರಕಾರ ರಚನೆಯಾದ ದ್ವಿಪಕ್ಷೀಯ ಒಪ್ಪಂದದ ಆಶಯದಂತೆ ನೇರ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ಮತ್ತು ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಈಗಾಗಲೇ ಆದೇಶಿಸಿತ್ತು.