ಮೊದಲ ಭಾಷಣದಲ್ಲೇ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ ಪ್ರಧಾನಿ
ಇಸ್ಲಾಮಾಬಾದ್, ಏಪ್ರಿಲ್ 11; ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಸೋಮವಾರ ಆಯ್ಕೆಯಾದರು. ಮೊದಲ ಭಾಷಣದಲ್ಲಿಯೇ ಅವರು ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶೆಹಬಾಜ್ ಷರೀಫ್ ಅಭಿನಂದಿಸಿದ್ದಾರೆ.
ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!
ನರೇಂದ್ರ ಮೋದಿ ಟ್ವೀಟ್ ಮಾಡಿ, "ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್ಗೆ ಅಭಿನಂದನೆಗಳು. ಭಾರತವು ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಮುಕ್ತ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಗಮನ ಕೇಂದ್ರೀಕರಿಸಬಹುದು" ಎಂದು ಹೇಳಿದ್ದಾರೆ.
Breaking news; ಶೆಹಬಾಜ್ ಷರೀಫ್ ಪಾಕ್ ನೂತನ ಪ್ರಧಾನಿ
ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಚೊಚ್ಚಲ ಭಾಷಣ ಮಾಡಿದ ಶೆಹಬಾಜ್ ಷರೀಫ್, ಕಾಶ್ಮೀರದ ಜನರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುವ ಜೊತೆಗೆ ಈ ವಿಚಾರವನ್ನು ಎಲ್ಲಾ ಅಂತರಾಷ್ಟ್ರೀಯ ವೇದಿಕೆಗಳಿಗೆ ತೆಗೆದುಕೊಂಡು ಹೋಗುವ ಸುಳಿವು ನೀಡಿದರು.
Congratulations to H. E. Mian Muhammad Shehbaz Sharif on his election as the Prime Minister of Pakistan. India desires peace and stability in a region free of terror, so that we can focus on our development challenges and ensure the well-being and prosperity of our people.
— Narendra Modi (@narendramodi) April 11, 2022
"ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶವಿದೆ. ಆದರೆ ಕಾಶ್ಮೀರ ವಿಷಯ ಇತ್ಯರ್ಥವಾಗದಿದ್ದರೆ ಇದು ಸಾಧ್ಯವಿಲ್ಲ. ದೇಶ ಉದಯವಾದ ದಿನದಿಂದಲೂ ಭಾರತದ ಜೊತೆ ಪಾಕಿಸ್ತಾನ ಸಂಬಂಧ ಉತ್ತಮವಾಗಿಲ್ಲದಿರುವುದು ದುರಾದೃಷ್ಟಕರ ವಿಚಾರ" ಎಂದರು.
ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ?
"ಭಾರತ 370ನೇ ವಿಧಿ ರದ್ದುಗೊಳಿಸಿದಾಗ ಇಮ್ರಾನ್ ಖಾನ್ ಭಾರತದ ವಿರುದ್ಧ ಯಾವುದೇ ಗಂಭೀರವಾದ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಲಿಲ್ಲ. ನಮ್ಮ ದೇಶದ ಪಕ್ಕದಲ್ಲಿಯಾರಿರಬೇಕು ಎಂದು ಆಯ್ಕೆ ಮಾಡಲಾಗದು. ನಾವು ನೆರೆಹೊರೆಯವರಾಗಿ ಉತ್ತಮ ಸಂಬಂಧ ಹೊಂದಿರಬೇಕು" ಎಂದು ಶೆಹಬಾಜ್ ಷರೀಫ್ ಹೇಳಿದರು.
"ಬಲವಂತದ ಆಕ್ರಮಣಗಳು ನಡೆದಾಗ ನಾವು ಏನೂ ಮಾಡಲಾಗಲಿಲ್ಲ. ಕಾಶ್ಮೀರದಲ್ಲಿ ಜನರ ರಕ್ತ ಹರಿಯಿತು. ಕಣಿವೆ ರಕ್ತದಿಂದ ಕೆಂಪಾಯಿತು. ಪ್ರಧಾನಿ ಮೋದಿ ಕಣಿವೆ ರಾಜ್ಯದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು" ಎಂದು ಕರೆ ನೀಡಿದರು.
ಪ್ರತಿಭಟನೆ; ಪಾಕಿಸ್ತಾನದ ರಾಜಕೀಯ ಬೆಳವಣಿಗೆ, ಇಮ್ರಾನ್ ಖಾನ್ ಅವಿಶ್ವಾಸ ಮತದಲ್ಲಿ ಸೋಲು ಕಾಣುತ್ತಿದ್ದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್ ನಿವಾಸದ ಮುಂದೆ ಪ್ರತಿಭಟನೆ ನಡೆದಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಹಾಗೂ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ನವಾಜ್ ಷರೀಫ್ ಬೆಂಬಲಿಗರು ಬಂದಿದ್ದು, ಆಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಲಂಡನ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಸಹೋದರ ಶೆಹಬಾಜ್ ಷರೀಫ್ ಪ್ರಧಾನಿಯನ್ನಾಗಿ ಮಾಡಲು ನವಾಜ್ ಷರೀಫ್ ರಾಜಕೀಯ ಹುನ್ನಾರ ಮಾಡಿದ್ದಾರೆ. ಪಾಕಿಸ್ತಾನದ ರಾಜಕೀಯ ಬೆಳವಣಿಗೆಗಳಿಗೆ ನವಾಜ್ ಷರೀಫ್ ಕಾರಣ ಎಂದು ಪಿಟಿಐ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
ಶನಿವಾರ ತಡರಾತ್ರಿ ನಡೆದ ರಾಜಕೀಯ ಹೈಡ್ರಾಮದಲ್ಲಿ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡಿದ್ದರು. ಸೋಮವಾರ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.
ವಿರೋಧ ಪಕ್ಷಗಳು ಮಂಡನೆ ಮಾಡಿದ್ದ ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಸೋಲಾಗಿತ್ತು. ಶಾ ಮಹಮೂದ್ ಖುರೇಷಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಇಮ್ರಾನ್ ಖಾನ್ ಪಕ್ಷ ಘೋಷಣೆ ಮಾಡಿತ್ತು.