Video: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಇಮ್ರಾನ್ ಖಾನ್ ಬೆಂಬಲಿಗರು!
ಇಸ್ಲಮಾಬಾದ್, ಮೇ 26: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಜಾಥಾ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಮೇ 26ರಂದು ದೇಶದಲ್ಲಿ ಹಿಂಸಾಚಾರ ಪ್ರಾರಂಭಿಸಿರುವ ಅವರ ಬೆಂಬಲಿಗರು ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ಇಮ್ರಾನ್ ಖಾನ್, ಹೊಸ ಚುನಾವಣೆಗೆ ಒತ್ತಾಯಿಸಲು 'ಶಾಂತಿಯುತ' ಪ್ರತಿಭಟನೆಗಾಗಿ ಇಸ್ಲಾಮಾಬಾದ್ನ ಡಿ-ಚೌಕ್ನಲ್ಲಿ ಸೇರಲು ಬೆಂಬಲಿಗರಿಗೆ ಕರೆ ನೀಡಿದರು.
ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ಇಮ್ರಾನ್ ಖಾನ್
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಅನುಮತಿ ನೀಡುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇಸ್ಲಾಮಾಬಾದ್ನ ಡಿ-ಚೌಕ್ನಲ್ಲಿ ಪ್ರತಿಭಟನಾಕಾರರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಬ್ಯಾರಿಕೇಡ್ಗಳನ್ನು ತೆಗೆದುಹಾಕಲು ಪ್ರಾರಂಭಿಸಿದರು.
ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಗೆ ಕಾರಣವಾಯಿತು. ಪಾಕಿಸ್ತಾನದಲ್ಲಿ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಹೇಗೆ? ಎಂಬುದನ್ನು ಈ ವರದಿಯಲ್ಲಿ ವಿಡಿಯೋ ಮತ್ತು ಚಿತ್ರಗಳ ಸಮೇತ ವಿವರಿಸಲಾಗಿದೆ.
|
ಪಾಕಿಸ್ತಾನದಲ್ಲಿ ಆಡಳಿತ ಪಕ್ಷದಿಂದಲೂ ಪ್ರತಿಭಟನೆಗೆ ಕರೆ
ಡಿ-ಚೌಕ್ನಲ್ಲಿ ಪ್ರತಿಭಟನೆ ನಡೆಸುವ ಇಮ್ರಾನ್ ಖಾನ್ ನಿರ್ಧಾರವು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಆಡಳಿತ ಪಕ್ಷವು ದೂಷಿಸಿದೆ. ಇದರ ವಿರುದ್ಧ ರಾಜಧಾನಿ ನಗರದ H-9 ಸೆಕ್ಟರ್ನಲ್ಲಿರುವ ಮೈದಾನದಲ್ಲಿ ತಮ್ಮ ಪಕ್ಷ ಪ್ರತಿಭಟನೆ ನಡೆಸಲು ಸೂಚಿಸಿದೆ.
ಘರ್ಷಣೆ ಭುಗಿಲೆದ್ದ ಕೂಡಲೇ, ನೂರಾರು ಪಿಟಿಐ ಕಾರ್ಯಕರ್ತರು ಮತ್ತು ಅದರ ಕೆಲವು ಮುಖಂಡರನ್ನು ಪೊಲೀಸರು ಬಂಧಿಸಿ 'ಆಜಾದಿ ಮಾರ್ಚ್' ಎಂದು ಕರೆಯಲಾಗುತ್ತಿರುವ ಪ್ರತಿಭಟನೆಗೆ ಸೇರುವುದನ್ನು ತಡೆದರು. ಪಂಜಾಬ್ ಪ್ರಾಂತ್ಯದಲ್ಲಿ ಪೊಲೀಸರು ಅಶ್ರುವಾಯು ಸಿಡಿಸುವುದನ್ನು ಮತ್ತು ಪಿಟಿಐ ಬೆಂಬಲಿಗರನ್ನು ಥಳಿಸುವುದನ್ನು ಟಿವಿ ಚಾನೆಲ್ಗಳು ತೋರಿಸಿದವು. ಲಾಹೋರ್ನ ಲಿಬರ್ಟಿ ಚೌಕ್ ಪ್ರದೇಶದಲ್ಲಿ ಪೊಲೀಸರ ಗುಂಡಿನ ದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
|
ಇಮ್ರಾನ್ ಖಾನ್ ಬೆಂಬಲಿಗರಿಂದ ಮೆಟ್ರೋ ನಿಲ್ದಾಣಕ್ಕೆ ಬೆಂಕಿ
ಪಿಟಿಐ ಬೆಂಬಲಿಗರ ಗುಂಪು ಚೀನಾ ಚೌಕ್ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿತು. ಇದಲ್ಲದೇ ಜಿನ್ನಾ ಅವೆನ್ಯೂ ಉದ್ದಕ್ಕೂ ಹಲವಾರು ಮರಗಳು ಮತ್ತು ಗಿಡಗಳನ್ನು ಕಿತ್ತುಹಾಕಿತು. ಇದು ಡಿ-ಚೌಕ್ನಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಲು ಕಾರಣವಾಯಿತು.
|
ಪಾಕಿಸ್ತಾನದಲ್ಲಿ ಗಿಡ-ಮರಕ್ಕೂ ಬೆಂಕಿ ಹಚ್ಚಿ ಆಕ್ರೋಶ
ಒಂದು ದಿಕ್ಕಿನಲ್ಲಿ ಮೆಟ್ರೋ ನಿಲ್ದಾಣಕ್ಕೆ ಒಂದು ಗುಂಪು ಬೆಂಕಿ ಹಚ್ಚಿದರೆ, ಇನ್ನೊಂದು ಕಡೆಯಲ್ಲಿ ಮರಗಳಿಗೂ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಮರಗಳು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಯಂತೆ ಹರಡುತ್ತಿದೆ.
ಪಾಕಿಸ್ತಾನ ಹಿಂಸಾಚಾರದಲ್ಲಿ ಪಿಟಿಐ ಕಾರ್ಯಕರ್ತನೊಬ್ಬ ಸಾವು
ಫೈಸಲ್ ಅಬ್ಬಾಸ್ ಚೌಧರಿ ಎಂದು ಗುರುತಿಸಲಾದ ಪಿಟಿಐ ಕಾರ್ಯಕರ್ತ ಲಾಹೋರ್ನ ಬಟ್ಟಿ ಚೌಕ್ ಬಳಿ ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ತನ್ನನ್ನು ಸೇತುವೆಯಿಂದ ತಳ್ಳಿದ್ದಾರೆ ಎಂದು ಪಕ್ಷದ ನಾಯಕ ಶಫ್ಕತ್ ಮೆಹಮೂದ್ ಹೇಳಿದ್ದಾರೆ. ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂಬ ವರದಿಗಳು ಕೂಡ ಹೊರಬಂದಿದ್ದು, ಅವರು ಹಿಂಸಾಚಾರವನ್ನು ಯೋಜಿಸಿದ್ದಾರೆ ಎಂಬ ಊಹಾಪೋಹವನ್ನು ಆಡಳಿತ ಪಕ್ಷದ ನಾಯಕರಲ್ಲಿ ಹುಟ್ಟುಹಾಕಿದೆ.