ಭಾರತದಿಂದ ಸಕ್ಕರೆ, ಹತ್ತಿ ಆಮದು; ಇದ್ದಕ್ಕಿದ್ದಂತೆ ಯು-ಟರ್ನ್ ಹೊಡೆದ ಪಾಕಿಸ್ತಾನ
ಇಸ್ಲಾಮಾಬಾದ್, ಏಪ್ರಿಲ್ 1: ಶೀಘ್ರವೇ ಭಾರತದಿಂದ ಸಕ್ಕರೆ, ಗೋಧಿ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ ಇದೀಗ ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದಿದೆ. ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪಾಕ್ ಸರ್ಕಾರದ ನಡೆಗೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲೇ ಈ ನಿರ್ಧಾರ ಪ್ರಕಟಿಸಿದೆ.
ಪಾಕಿಸ್ತಾನಕ್ಕೆ ಭಾರತದ ಸಕ್ಕರೆ, ಹತ್ತಿ ಬೇಕೇ ಬೇಕಂತೆ, ನಿಷೇಧ ರದ್ದಾಗಲಿದೆಯೇ?
ಕಳೆದ ಎರಡು ವರ್ಷಗಳಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದಿಗೆ ನಿಷೇಧ ಹೇರಿದ್ದ ಪಾಕಿಸ್ತಾನ, ಶೀಘ್ರದಲ್ಲೇ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲಿದೆ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ಹೇಳಿದ್ದರು. ಭಾರತದಿಂದ ಸಕ್ಕರೆ ಮತ್ತು ಹತ್ತಿ ವ್ಯಾಪಾರವನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದೇವೆ. ಜೂನ್ ನಿಂದ ಆಮದು ಮಾಡಿಕೊಳ್ಳುತ್ತೇವೆ ಎಂದು ಹಮ್ಮದ್ ಅಜರ್ ತಿಳಿಸಿದ್ದರು. ಆದರೆ ಈ ನಡೆಗೆ ಟೀಕೆ ವ್ಯಕ್ತವಾಗಿತ್ತು. ಕಾಶ್ಮೀರ ಸಮಸ್ಯೆ ಇನ್ನೂ ಇತ್ಯರ್ಥಗೊಳ್ಳದ ಕಾರಣ ಭಾರತದೊಂದಿಗೆ ವ್ಯಾಪಾರ ವಹಿವಾಟು ಆರಂಭಿಸುವ ಕುರಿತು ವಿರೋಧ ಕೇಳಿಬಂದಿತ್ತು. ಈ ಕಾರಣದಿಂದಾಗಿ ನಿರ್ಧಾರ ಬದಲಿಸಿರುವುದಾಗಿ ತಿಳಿದುಬಂದಿದೆ.
ಗುರುವಾರ ಸಚಿವ ಶೇಖ್ ರಶೀದ್ ಅಹ್ಮದ್, ಭಾರತ-ಪಾಕ್ ನಡುವೆ ಕಾಶ್ಮೀರ ವಿಷಯದಲ್ಲಿ ಪರಿಹಾರ ಕಂಡುಕೊಳ್ಳುವವರೆಗೂ ಈ ನಿರ್ಧಾರವನ್ನು ಮುಂದೂಡಲಾಗುವುದು ಎಂದು ತಿಳಿಸಿದ್ದಾರೆ.
2019ರಲ್ಲಿ ಪಾಕಿಸ್ತಾನ ಭಾರತದೊಂದಿಗಿನ ವ್ಯಾಪಾರ ವ್ಯವಹಾರವನ್ನು ನಿಲ್ಲಿಸಿತ್ತು.