ಸಂಜೋತಾ ಎಕ್ಸ್ ಪ್ರೆಸ್ ಸೇವೆ ಶಾಶ್ವತವಾಗಿ ರದ್ದು! ಯುದ್ಧದ ಮುನ್ಸೂಚನೆಯೇ?
ಇಸ್ಲಾಮಾಬಾದ್, ಆಗಸ್ಟ್ 08: ಇಸ್ಲಾಮಾಬಾದಿನಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಗೆ ಹಾಕಿದ ಬೆನ್ನಲ್ಲೇ ಇದೀಗ ಸಂಜೋತಾ ಎಕ್ಸ್ ಪ್ರೆಸ್ ಸೇವೆಯನ್ನು ಪಾಕಿಸ್ತಾನ ರದ್ದುಗೊಳಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಭಾರತ ಘೋಷಿಸಿದ್ದು, ಇದು ಪಾಕಿಸ್ತಾನಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ. ತನ್ನಿಮಿತ್ತ ಭಾರತದ ನಡೆಯ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಎಲ್ಲಾ ಪ್ರಯತ್ನವನ್ನೂ ಪಾಕಿಸ್ತಾನ ಮಾಡುತ್ತಿದ್ದು, ಅದಕ್ಕೆ ಸಂಜೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದು ಮಾಡಿದ್ದೂ ಸಾಕ್ಷಿಯಾಗಿದೆ.
ಭಾರತ-ಪಾಕಿಸ್ತಾನ ನಡುವಿನ ವಾಘಾ ಗಡಿಯಲ್ಲಿ ಈ ರೈಲನ್ನು ನಿಲ್ಲಿಸಿ, ಮುಂದೆ ತೆರಳದಂತೆ ಸೂಚಿಸಲಾಯಿತು.
"ರೈಲ್ವೇ ಸಚಿವಾಲಯದ ನಿರ್ಧಾರದ ಮೇರೆಗೆ ಸಂಜೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಿದ್ದೇವೆ. ಇದು ವಾರಕ್ಕೆ ಎರಡು ಬಾರಿ ಉಭಯ ದೇಶಗಳ ನಡುವೆ ಚಲಿಸುಸತ್ತಿತ್ತು. ಈಗಾಗಲೇ ಟಿಕೆಟ್ ಕಾಯ್ದಿರಿಸಿರುವವರಿಗೆ ಅವರ ಹಣವನ್ನು ವಾಪಸ್ ನೀಡಲಾಗುವುದು" ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ತಿಳಿಸಿದ್ದಾರೆ.
'ಸಂಜೋತಾ' ಎಂದರೆ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಒಪ್ಪಂದ, ಹೊಂದಾಣಿಕೆ ಎಂದರ್ಥ. ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ದೇಶಗಳ ನಡುವೆ ಸೌಹಾರ್ದ ವಾತಾವರಣ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ 1976 ರ ಜುಲೈ 22 ರಿಂದ ಈ ರೈಲ್ವೇ ಸಂಪರ್ಕವನ್ನು ಆರಂಭಿಸಲಾಗಿತ್ತು. ಅಮೃತಸರ ಮತ್ತು ಲಾಹೋರ್ ನಡುವೆ ಸಂಪರ್ಕ ಕಲ್ಪಿಸಿದ್ದ ಈ ರೈಲು ಸೇವೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದಾಗಲೆಲ್ಲ ರದ್ದುಗೊಳಿಸಲಾಗುತ್ತದೆ.
ಇದು ಭಾರತದ ಅಟ್ಟಾರಿ ಮತ್ತು ಪಾಕಿಸ್ತಾನದ ವಾಘಾ ಗಡಿಯ ಮೂಲಕ ಚಲಿಸುತ್ತದೆ. 2007ರ ಫೆಬ್ರವರಿ 19 ರಂದು ಈ ರೈಲಿನ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನ ಮೃತರಾಗಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರದಾಳಿ ಮತ್ತು ನಂತರ ಭಾರತವು ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಂತರ ಫೆಬ್ರವರಿ 28 ರಂದು ಈ ರೈಲು ಸೇವೆಯನ್ನು ರದ್ದುಗೊಳಿಸಿ, ಕೆಲ ದಿನಗಳ ನಂತರ ಮತ್ತೆ ಆರಂಭಿಸಲಾಗಿತ್ತು.