ಧ್ವಂಸಗೊಂಡಿದ್ದ ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶ
ಇಸ್ಲಮಾಬಾದ್, ಜನವರಿ 05: ಕೆಲವು ದಿನಗಳ ಹಿಂದೆ ಉದ್ರಿಕ್ತರ ಗುಂಪಿನಿಂದ ಧ್ವಂಸಗೊಂಡಿದ್ದ ಹಿಂದೂ ದೇವಾಲಯವನ್ನು ಎರಡು ವಾರದೊಳಗೆ ಪುನರ್ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಜೊತೆಗೆ ಈ ದಾಳಿಯು ದೇಶಕ್ಕೆ ''ಅಂತರರಾಷ್ಟ್ರೀಯ ''ಅಂತರರಾಷ್ಟ್ರೀಯ ಮುಜುಗರವನ್ನುಂಟುಮಾಡಿದೆ'' ಎಂದು ಕೋರ್ಟ್ ಹೇಳಿದೆ.
ಪಾಕಿಸ್ತಾನದ ಖೈಬರ್ ಫಂಖ್ತುಕ್ವಾ ಪ್ರಾಂತ್ಯದಲ್ಲಿ ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ದೇವಾಲಯ ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ದೇವಾಲಯ ಪುನರ್ ನಿರ್ಮಾಣಕ್ಕೆ ಆದೇಶಿಸಿದ್ದಲ್ಲದೆ, ದೇಶದಲ್ಲಿರುವ ಎಲ್ಲಾ ದೇವಸ್ಥಾನಗಳ ಕುರಿತು ವಿವರವಾದ ಮಾಹಿತಿ ಸಲ್ಲಿಸುವಂತೆ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ಗೂ ನಿರ್ದೇಶನ ನೀಡಿದೆ. ದೊಂಬಿಕೋರರು ದೇವಾಲಯದ ಆವರಣ ಪ್ರವೇಶಿಸುವವರೆಗೆ ಪೊಲೀಸರು ಏನು ಮಾಡುತ್ತಿದ್ದರು? ಎಂದು ಖಾರವಾಗಿ ಪ್ರಶ್ನಿಸಿದೆ.
ಈ ಘಟನೆ ಸಂಬಂಧ ಈಗಾಗಲೇ ಸುಮಾರು 350 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.