ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೈನಿಕರ ಬಳಿ ಆಯುಧವೂ ಇರಲಿಲ್ಲ: ನವಾಜ್ ಷರೀಫ್
ಇಸ್ಲಾಮಾಬಾದ್, ಅಕ್ಟೋಬರ್ 26: ಭಾರತದ ವಿರುದ್ಧ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನದ ಸೈನಿಕ ಬಳಿ ಸರಿಯಾಗಿ ಶಸ್ತ್ರಾಸ್ತ್ರಗಳೂ ಇರಲಿಲ್ಲ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಕೆಲವೇ ಜನರಲ್ಗಳು ಯುದ್ಧದ ಹಿಂದೆ ಇದ್ದರೇ ಹೊರತು ಸೇನೆಯಲ್ಲ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಮುಖ್ಯಸ್ಥರೂ ಆಗಿರುವ ಷರೀಫ್ ಹೇಳಿದ್ದಾರೆ.
'ನಮ್ಮ ಧೈರ್ಯಶಾಲಿ ಯೋಧರ ಸಾವನ್ನು ಕಂಡ ಮತ್ತು ಜಗತ್ತಿನ ಮುಂದೆ ಪಾಕಿಸ್ತಾನ ತಲೆತಗ್ಗಿಸುವಂತೆ ಅವಮಾನಿಸಿದ ಕಾರ್ಗಿಲ್ ಯುದ್ಧವನ್ನು ಆರಂಭಿಸುವ ತೀರ್ಮಾನವನ್ನು ಸೇನೆ ತೆಗೆದುಕೊಂಡಿರಲಿಲ್ಲ, ಬದಲಾಗಿ ಕೆಲವೇ ಜನರಲ್ಗಳು ತೆಗೆದುಕೊಂಡಿದ್ದರು' ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 11 ವಿರೋಧಪಕ್ಷಗಳ ಮೈತ್ರಿಕೂಟ ನಡೆಸುತ್ತಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಚಳವಳಿಯ ಸಮಾವೇಶದಲ್ಲಿ ಷರೀಫ್ ತಿಳಿಸಿದ್ದಾರೆ.
ನ.24ರೊಳಗೆ ಕೋರ್ಟ್ಗೆ ಹಾಜರಾಗದಿದ್ದರೆ ಷರೀಫ್ ಘೋಷಿತ ಅಪರಾಧಿ
'ಎಂತಹ ಸನ್ನಿವೇಶದಲ್ಲಿ ಅವರು ಸೇನೆಯನ್ನು ಮಾತ್ರವಲ್ಲ, ಇಡೀ ದೇಶ ಮತ್ತು ಸಮುದಾಯವನ್ನು ಯುದ್ಧಕ್ಕೆ ದೂಡಿದ್ದರೆಂದರೆ ಅದರಿಂದ ಏನನ್ನೂ ಸಾಧಿಸುವುದು ಸಾಧ್ಯವಿರಲಿಲ್ಲ. ಎತ್ತರದ ಪರ್ವತ ಪ್ರದೇಶಗಳಿಗೆ ನಮ್ಮ ಧೈರ್ಯಶಾಲಿ ಸೈನಿಕರನ್ನು ಕಳುಹಿಸಿದಾಗ ಅವರು ಬಳಲಿ ಹೋಗಿದ್ದರು, ಏಕೆಂದರೆ ಅವರಿಗೆ ಆಹಾರವೇ ಇರಲಿಲ್ಲ' ಎಂದು ಆರೋಪಿಸಿದ್ದಾರೆ.
'ಸೈನಿಕರ ಬಳಿ ಆಯುಧಗಳೂ ಇರಲಿಲ್ಲ. ಅವರು ತಮ್ಮ ಜೀವಗಳನ್ನು ತ್ಯಾಗ ಮಾಡಿದರು. ಆದರೆ ಅದರಿಂದ ದೇಶ ಅಥವಾ ಸಮುದಾಯ ಸಾಧಿಸಿದ್ದೇನು? ಎಂದು ಪ್ರಶ್ನಿಸಿದ್ದಾರೆ. ಪರ್ವೇಜ್ ಮುಷರಫ್ ಮತ್ತು ಅವರ ಸಹವರ್ತಿಗಳು ತಮ್ಮ ವೈಯಕ್ತಿಕ ಲಾಭಗಳಿಗಾಗಿ ಸೇನೆಯನ್ನು ಬಳಸಿಕೊಂಡು ಅವರನ್ನು ಅವಮಾನಿಸಿದರು ಎಂದು ಲಂಡನ್ನಿಂದ ಕಳುಹಿಸಿರುವ ವಿಡಿಯೋ ಭಾಷಣದಲ್ಲಿ ಹೇಳಿದ್ದಾರೆ.