ಮತ್ತೆ 55 ಉಗ್ರರನ್ನು ಗಲ್ಲಿಗೇರಿಸಲು ಪಾಕ್ ಸಜ್ಜು
ಇಸ್ಲಾಮಾಬಾದ್, ಡಿ. 22: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತು ಪಾಕಿಸ್ತಾನಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಉಗ್ರರನ್ನು ರಕ್ಷಿಸಿ, ಪೋಷಿಸಿ, ಪ್ರೋತ್ಸಾಹಿಸುತ್ತಿದ್ದ ಪಾಕಿಸ್ತಾನ ಈಗ ತನ್ನ ಮಕ್ಕಳೇ ಬಲಿಯಾದ ಮೇಲೆ ಎಚ್ಚೆತ್ತುಕೊಂಡಿದೆ.
ಪೇಶಾವರದಲ್ಲಿ ಮಕ್ಕಳ ಹತ್ಯಾಕಾಂಡ ನಡೆದ ಮೇಲೆ ಕೆಲವು ಉಗ್ರರನ್ನು ಈಗಾಗಲೇ ಪಾಕ್ ಸರ್ಕಾರ ನೇಣಿಗೇರಿಸಿದೆ. ಈಗ ಮತ್ತೆ 55 ಉಗ್ರರಿಗೆ ಗಲ್ಲು ಜಾರಿ ಮಾಡಲು ಸಜ್ಜಾಗಿದೆ.
ಗಲ್ಲು ಶಿಕ್ಷೆ ಘೋಷಣೆಯಾಗಿರುವ ಸುಮಾರು 500 ಉಗ್ರರು ಪಾಕಿಸ್ತಾನ ಜೈಲಿನಲ್ಲಿದ್ದಾರೆ. ಆದರೂ ರಾಷ್ಟ್ರಪತಿ ಹತ್ತಿರ ಕ್ಷಮೆಗಾಗಿ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಇನ್ನೂ ಜೈಲಿನಲ್ಲಿ ಜೀವಂತವಾಗಿದ್ದಾರೆ. ಆದರೆ, ಈಗ ರಾಷ್ಟ್ರಪತಿ ಮನ್ಮೂನ್ ಹುಸೇನ್ 55 ಉಗ್ರರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವ ಕಾರಣ ಶಿಕ್ಷೆ ಜಾರಿಗೊಳಿಸಲು ಸೇನೆ ಸಜ್ಜಾಗಿದೆ. [ಮಕ್ಕಳ ಹತ್ಯಾಕಾಂಡ : ಅಲ್ ಖೈದಾ ದುಃಖದಲ್ಲಿದೆಯಂತೆ]
ಜರ್ದಾರಿ ಕ್ರಮ ಕೈಗೊಂಡಿರಲಿಲ್ಲ : ಹಿಂದಿನ ರಾಷ್ಟ್ರಪತಿ ಆಸಿಫ್ ಅಲಿ ಜರ್ಧಾರಿ ಎದುರು ಅನೇಕ ಕ್ಷಮಾದಾನ ಅರ್ಜಿಗಳು ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈಗಿನ ರಾಷ್ಟ್ರಪತಿ ಈ ಎಲ್ಲ ಅರ್ಜಿಗಳ ವಿಲೇವಾರಿ ಆರಂಭಿಸಿದ್ದಾರೆ. ಆದರೆ, ಮಕ್ಕಳ ಮಾರಣಹೋಮದ ಹಿನ್ನೆಲೆಯಲ್ಲಿ ಯಾವುದೇ ಉಗ್ರರ ಮೇಲೆ ಕನಿಕರ ತೋರಿಸಲು ನಿರಾಕರಿಸಿದ್ದಾರೆ.
ಪ್ರತಿಕ್ರಿಯೆ ಎದುರಿಸಲು ಸಿದ್ಧ : ಪ್ರಸ್ತುತ ಜೈಲಿನಲ್ಲಿರುವ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ನಿಸಾರ್ ಅಲಿ ಖಾನ್ ತಿಳಿಸಿದ್ದಾರೆ. "ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ 500ಕ್ಕಿಂತ ಹೆಚ್ಚು ಉಗ್ರರು ಇದ್ದಾರೆ. ಅವರೆಲ್ಲರನ್ನೂ ಗಲ್ಲಿಗೇರಿಸುವ ಕುರಿತು ಯೋಚಿಸಲಾಗುತ್ತಿದೆ. ಪೇಶಾವರದಲ್ಲಿ ನೂರಾರು ಮಕ್ಕಳು ಸೇರಿದಂತೆ 148 ಜನರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ನಿಸಾರ್ ಅಲಿ ಖಾನ್ ತಿಳಿಸಿದ್ದಾರೆ. [ಪಾಕಿಸ್ತಾನದಲ್ಲಿ ನೂರಾರು ಮಕ್ಕಳ ಬಲಿ]
ಇಷ್ಟೇ ಅಲ್ಲ, ಇವರೆಲ್ಲರನ್ನೂ ನೇಣಿಗೇರಿಸಿದಾಗ ಉಗ್ರರು ನೀಡುವ ಯಾವುದೇ ಪ್ರತಿಕ್ರಿಯೆ ಎದುರಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
11 ವರ್ಷಗಳ ಹಿಂದೆ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹತ್ಯೆಗೆ ಯತ್ನಿಸಿದ್ದ ನಾಲ್ವರು ಉಗ್ರರನ್ನು ಭಾನುವಾರವಷ್ಟೇ ನೇಣಿಗೇರಿಸಲಾಗಿತ್ತು. ಈ ಮೂಲಕ ಇಲ್ಲಿಯವರೆಗೆ ನೇಣಿಗೇರಿಸಲ್ಪಟ್ಟ ಉಗ್ರರ ಸಂಖ್ಯೆ ಆರಕ್ಕೇರಿದೆ.