ಅಲ್ಲಿನ ಸೇನೆಗೆ ಬೇಡದ ನಾಯಕ ಪಾಕಿಸ್ತಾನದ ಗದ್ದುಗೆಗೂ ಬೇಡ!
ಪಾಕಿಸ್ತಾನದಲ್ಲಿ ಈ ವರೆಗೆ ಆಗಿಹೋಗಿರುವ ಅಧ್ಯಕ್ಷರು ಮತ್ತು ಪ್ರಧಾನಿಗಳಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದವರು, ಅಧಿಕಾರದಿಂದ ಕೆಳಗೆ ಇಳಿದ ನಂತರ ತುಂಬ ನೆಮ್ಮದಿ- ಗೌರವಯುತ ಜೀವನ ನಡೆಸಿದವರು ಇದ್ದಾರಾ ಅಂತ ಹುಡುಕಿದರೆ, ಅಚ್ಚರಿ ಆಗೇ ಆಗುತ್ತದೆ. ಏಕೆಂದರೆ ಆ ಥರದವರು ವಿರಳ. ಇನ್ನು ಅಧಿಕಾರದಲ್ಲಿರುವ ಪ್ರಧಾನಿ ಅಲ್ಲಿಯ ಸೇನೆ ಪರವಾಗಿ ಇರುವವರೆಗೆ ಎಲ್ಲವೂ ಸರಿ ಇರುತ್ತದೆ.
ಆದರೆ, ಯಾವಾಗ ಅಲ್ಲಿನ ಸೇನೆಯ ಉದ್ದೇಶವನ್ನು ಮೀರಿ, ಅಲ್ಲಿನ ಪ್ರಧಾನಿ ಸ್ವತಂತ್ರವಾಗಿ ಆಲೋಚನೆ ಮಾಡಲು ಆರಂಭಿಸುತ್ತಾರೋ ಅಲ್ಲಿಗೆ ವಾತಾವರಣ ಬದಲಾಗಿಬಿಡುತ್ತದೆ. ಒಂದು ಕಾಲಕ್ಕೆ ಈ ನವಾಜ್ ಷರೀಫ್ ಕೂಡ ಅಲ್ಲಿನ ಸೇನೆಯ ಪಾಲಿಗೆ ಡಾರ್ಲಿಂಗ್ ಆಗಿದ್ದವರು. ಆ ನಂತರ ಏನೆಲ್ಲ ಬದಲಾವಣೆ ಆಯಿತು!
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಮಗಳು ಮರ್ಯಾಮ್ ಬಂಧನ
ಈಗ ನವಾಜ್ ಷರೀಫ್ ರ ಉದಾಹರಣೆಯೇ ತೆಗೆದುಕೊಳ್ಳಿ. ಎರಡು ವರ್ಷದ ಹಿಂದೆ ಪಾಕಿಸ್ತಾನ ಸೈನ್ಯಕ್ಕೆ ಪ್ರಧಾನಿ ನವಾಜ್ ಬೇಡವಾಗಿದ್ದರು. ಅದೇ ಸಮಯಕ್ಕೆ ಪನಾಮ ಪೇಪರ್ಸ್ ಹಗರಣ ಬಯಲಿಗೆ ಬಂತು. ತೆರಿಗೆ ವಂಚನೆ ಮಾಡಿ, ಆದಾಯಕ್ಕೂ ಮೀರಿ ವಿದೇಶಿಗಳಲ್ಲಿ ಆಸ್ತಿ ಮಾಡಿದ ವಿಶ್ವ ನಾಯಕರ ಪಟ್ಟಿಯಲ್ಲಿ ನವಾಜ್ ಷರೀಫ್, ಅವರ ಮಗಳು ಮರ್ಯಾಮ್ ಮತ್ತು ಅಳಿಯನ ಹೆಸರು ಕೇಳಿಬಂದಿತ್ತು.
ಅನಿವಾರ್ಯವಾಗಿ ರಾಜೀನಾಮೆ
ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಪ್ರಕರಣ ನವಾಜ್ ಮತ್ತಿತರ ಮೈ ಮೇಲೆ ಪ್ರಕರಣ ಬಿತ್ತು. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮೇಲ್ನೋಟಕ್ಕೆ ದೋಷಿಗಳು ಎಂದು ಪರಿಗಣಿಸಿದ್ದರಿಂದ ರಾಜೀನಾಮೆ ನೀಡುವುದು ಅನಿವಾರ್ಯ ಆಯಿತು. ಇನ್ನು ಈ ಜುಲೈ ಇಪ್ಪತ್ತೈದನೇ ತಾರೀಕಿಗೆ ಇರುವ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಳ ದಿನದ ಮುಂಚೆ ತೀರ್ಪು ಕೂಡ ಬಂತು.
ಜೈಲು ಶಿಕ್ಷೆ ಮತ್ತು ದಂಡ
ಆ ಮೂಲಕ ನವಾಜ್ ಷರೀಫ್ ಹಾಗೂ ಅವರ ಮಗಳು ಮರ್ಯಾಮ್ ಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು. ಚುನಾವಣೆಗೆ ಸ್ಪರ್ಧಿಸುವುದೊಂದೇ ಅಲ್ಲ, ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್) ಎಂಬ ತಮ್ಮದೇ ಪಕ್ಷದಲ್ಲಿ ಯಾವ ಹುದ್ದೆಯನ್ನು ಕೂಡ ಅವರು ಹೊಂದುವಂತಿಲ್ಲ ಎಂಬ ಸ್ಥಿತಿ ಎದುರಾಯಿತು.
ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ
ಬಂಧನವು ಖಾತ್ರಿ ಇತ್ತು
ಆದರೆ, ಲಂಡನ್ ನಲ್ಲಿದ್ದ ನವಾಜ್ ಷರೀಫ್ ಹಾಗೂ ಅವರ ಮಗಳು ಪಾಕಿಸ್ತಾನಕ್ಕೆ ವಾಪಸ್ ಬಂದರು. ಪಾಕ್ ಗೆ ಕಾಲಿಡುತ್ತಿದ್ದಂತೆಯೇ ತಮ್ಮ ಬಂಧನ ಆಗುತ್ತದೆ. ಜೈಲು ಕಾಣಬೇಕಾಗುತ್ತದೆ ಅಂತ ಗೊತ್ತಿದ್ದರೂ ಯಾಕೆ ವಾಪಸ್ ಬಂದರು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಅಲ್ಲಿನ ಕಾನೂನು ಪ್ರಕ್ರಿಯೆ.
ಜಾಮೀನಿಗೆ, ಮೇಲ್ಮನವಿ ಸಲ್ಲಿಸಲು ಈ ನಿರ್ಧಾರ ಅನಿವಾರ್ಯ
ಆರೋಪಿಗಳು ವಿದೇಶದಲ್ಲಿದ್ದರೆ ಅವರ ಪರವಾಗಿ ಜಾಮೀನು ಅರ್ಜಿ ಹಾಕಿಕೊಳ್ಳುವುದೋ ಮೇಲ್ಮನವಿ ಸಲ್ಲಿಸುವುದೋ ಅದಕ್ಕೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಪಾಕಿಸ್ತಾನದ ಕೋರ್ಟ್ ವೊಂದು ತೀರ್ಪು ನೀಡಿತ್ತು. ತಮ್ಮ ಪರವಾಗಿ ವಾದ ಮಂಡಿಸಲು, ಜಾಮೀನು ಪಡೆಯಲು, ಮೇಲ್ಮನವಿ ಸಲ್ಲಿಸಲು ನವಾಜ್ ಹಾಗೂ ಮರ್ಯಾಮ್ ಪಾಕಿಸ್ತಾನಕ್ಕೆ ಹಿಂತಿರುಗುವುದು ಅನಿವಾರ್ಯ ಆಗಿತ್ತು.
ಅನುಕಂಪವಾಗಿ ಬದಲಾಗುವ ಲೆಕ್ಕಾಚಾರ
ಈಗಲೂ ಈ ಅಪ್ಪ- ಮಗಳಿಗೆ ಇರುವ ನಂಬಿಕೆ ಏನೆಂದರೆ, ತಮ್ಮ ಬಂಧನದ ನಂತರ ಪಾಕಿಸ್ತಾನದ ಜನರಿಗೆ ಸೇನೆಯ ಮೇಲೆ ಸಿಟ್ಟು ಬಂದು, ಅದು ತಮ್ಮ ಪರವಾದ ಅನುಕಂಪವಾಗಿ ಪರಿವರ್ತನೆ ಆಗಬಹುದು. ಇದರಿಂದ ಪಿಎಂಎಲ್ (ಎನ್) ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನಕ್ಕೆ ತಿದ್ದುಪಡಿ ತಂದು ಸೇನೆಯನ್ನು ಹಣಿಯಬಹುದು. ಅದೇ ವೇಳೆ ತಮ್ಮ ವಿರುದ್ಧ ಆರೋಪಗಳಿಂದ ಮುಕ್ತವಾಗಲು ತಂತ್ರ ಹೆಣೆಯಬಹುದು ಎಂಬ ಲೆಕ್ಕಾಚಾರಗಳಿವೆ.