ಧ್ವಂಸಗೊಂಡಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಿದೆ ಪಾಕಿಸ್ತಾನ!
ಇಸ್ಲಮಾಬಾದ್, ಜನವರಿ 01: ಉದ್ರಿಕ್ತರ ಗುಂಪಿನಿಂದ ಧ್ವಂಸಗೊಂಡಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸುವುದಾಗಿ ಪಾಕಿಸ್ತಾನದ ಪ್ರಾಂತೀಯ ಸರ್ಕಾರ ಪ್ರಕಟಿಸಿದೆ.
ಪಾಕಿಸ್ತಾನದ ಖೈಬರ್ ಫಂಖ್ತುಕ್ವಾ ಪ್ರಾಂತ್ಯದಲ್ಲಿ ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ದೇವಾಲಯ ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಪರಿಣಾಮ ಭಾರತ ಸೇರಿದಂತೆ ಹಲವೆಡೆ ಕೃತ್ಯದ ಕುರಿತು ಆಕ್ರೋಶ ವ್ಯಕ್ತವಾಗಿತ್ತು.
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ರಕ್ಷಣೆ ನಮ್ಮ ಹೊಣೆ ಎಂದ ಪಾಕ್
ಆದರೆ ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಖೈಬರ್ ಫಂಖ್ತುಕ್ವಾ ಪ್ರಾಂತೀಯ ಮುಖ್ಯಮಂತ್ರಿ ಮಹಮೂದ್ ಖಾನ್ ಅವರು ನಿರ್ಮಾಣಕ್ಕೆ ಅಗತ್ಯವಾದ ಹಣವನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.
''ದೇವಾಲಯವನ್ನು ನೆಲಸಮ ಮಾಡಿದ್ದರಿಂದ ತೀವ್ರ ದುಃಖವಾಗಿದೆ. ಹಿಂದೂ ದೇವಾಲಯವನ್ನು ವಿಳಂಬವಿಲ್ಲದೆ ಪುನರ್ನಿರ್ಮಿಸಲು ತಮ್ಮ ಸರ್ಕಾರ ಖಚಿತಪಡಿಸುತ್ತದೆ. ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ'' ಎಂದು ಖೈಬರ್ ಫಂಖ್ತುಕ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇವಾಲಯ ಮತ್ತು ಹತ್ತಿರದ ಮನೆಗಳನ್ನು ದುರಸ್ತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಂತೀಯ ಸಚಿವರು ಕೂಡ ತಿಳಿಸಿದ್ದಾರೆ. ಈ ಮೂಲಕ ಹಿಂದೂಗಳ ಸಹಾಯದಿಂದ ಶೀಘ್ರದಲ್ಲೇ ನಿರ್ಮಾಣ ಪ್ರಾರಂಭವಾಗಲಿದೆ. ಜೊತೆಗೆ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಇನ್ನು ಈ ದಾಳಿ ಕುರಿತಾಗಿ ಜಮಿಯತ್ ಉಲೆಮಾ-ಇ-ಇಸ್ಲಾಂ ನಾಯಕ ರೆಹಮತ್ ಸಲಾಮ್ ಖಟ್ಟಕ್ ಸೇರಿದಂತೆ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಎಫ್ಐಆರ್ನಲ್ಲಿ 350 ಕ್ಕೂ ಹೆಚ್ಚು ಜನರನ್ನು ಹೆಸರಿಸಲಾಗಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಕೆಪಿಕೆ ಸನಾವುಲ್ಲಾ ಅಬ್ಬಾಸಿ ಪಿಟಿಐಗೆ ಹೇಳಿದ್ದಾರೆ.
ಜೊತೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ದೇವಾಲಯ ನೆಲಸಮಕ್ಕೆ ಕಾರಣವೇನು ಎಂಬುದರ ಕುರಿತು ಸರ್ಕಾರದಿಂದ ವರದಿ ಕೇಳಿದೆ.