ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ
ಇಸ್ಲಮಾಬಾದ್, ಏಪ್ರಿಲ್.13: ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದ ಪಾಕಿಸ್ತಾನ ತತ್ತರಿಸಿ ಹೋಗಿದೆ. ದೇಶದಲ್ಲಿ ಸೃಷ್ಟಿಯಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಂತಾರಾಷ್ಟ್ರೀಯ ಒಕ್ಕೂಟಗಳ ಎದುರಿಗೆ ಕೈವೊಡ್ಡಿ ನಿಂತಿದೆ.
ಕೊರೊನಾ ವೈರಸ್ ನಿಯಂತ್ರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ಪರದಾಡುತ್ತಿದ್ದು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಆರ್ಥಿಕ ನೆರವನ್ನು ನೀಡಬೇಕು ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ಇದೊಂದು ಸಹಾಯ ಮಾಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯುವುದಿಲ್ಲ: ಭಾರತಕ್ಕೆ ಪಾಕ್ ಕ್ರಿಕೆಟಿಗನ ಕೋರಿಕೆ
ಭಾನುವಾರ ಒಂದೇ ದಿನ ಪಾಕಿಸ್ತಾನದಲ್ಲಿ 450 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 5,230ಕ್ಕೆ ಏರಿಕೆಯಾಗಿದೆ. ಇನ್ನು, ದೇಶದಲ್ಲಿ ಇದುವರೆಗೂ ಮಹಾಮಾರಿಯ ಅಟ್ಟಹಾಸಕ್ಕೆ 91ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.
|
ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮನವಿ
ವಿಶ್ವದಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳು ಪರದಾಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಇದನ್ನು ನಿಭಾಯಿಸಲು ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ನೆರವು ನೀಡಬೇಕು. ಉಭಯ ಸಂಕಟದ ಮಧ್ಯೆ ನರಳುತ್ತಿರುವ ರಾಷ್ಟ್ರಕ್ಕೆ ಹಣ ನೀಡುವಂತೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಆರ್ಥಿಕ ಮುಗ್ಗಟ್ಟು ಎದುರಿಸಲಾಗದ ಸ್ಥಿತಿ
ಮೊದಲೇ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದ ರಾಷ್ಟ್ರಗಳು ಈ ಹೊರೆಯನ್ನು ಇಳಿಸಿಕೊಳ್ಳುವ ಮೊದಲೇ ಕೊರೊನಾ ವೈರಸ್ ಎಂಬ ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿದೆ. ಇದರಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪ್ರಜೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡಾ ಕಷ್ಟವಾಗುತ್ತಿದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಕೊರೊನಾ ಪಿಡುಗು ಹೋಗಲಾಡಿಸಲು ಒಗ್ಗಟ್ಟಿನ ಸೂತ್ರ
ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಎಂಬ ಜಾಗತಿಕ ಪಿಡುಗನ್ನು ಹೋಗಲಾಡಿಸಲು ಒಗ್ಗಟ್ಟು ಹಾಗೂ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯವೆಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಸಾಲ ಪರಿಹಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ರಿಲೀಫ್ ಪ್ಯಾಕೇಜ್ ಘೋಷಿಸಿದ ಐಎಂಎಫ್ ಮತ್ತು ವಿಶ್ವಬ್ಯಾಂಕ್
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಗಳು ಪರಿಹಾರದ ಪ್ಯಾಕೇಜ್ ಗಳನ್ನು ಘೋಷಿಸಿದ್ದವು. ಅಂತಾರಾಷ್ಟ್ರೀಯ ಪರಿಹಾರ ನಿಧಿಯಿಂದ 980 ಕೋಟಿ ಹಾಗೂ ವಿಶ್ವಬ್ಯಾಂಕ್ ನಿಂದ 700 ಕೋಟಿ ರೂಪಾಯಿ ಹಣವನ್ನು ಘೋಷಿಸಲಾಗಿತ್ತು. ದುರ್ಬಲ ರಾಷ್ಟ್ರಗಳಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಈ ಹಣವನ್ನು ಬಳಸುವುದಕ್ಕೆ ತೀರ್ಮಾನಿಸಲಾಗಿತ್ತು.