ಇಮ್ರಾನ್ ಖಾನ್ಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪಾಕ್ ಪ್ರಧಾನಿ!
ಇಸ್ಲಾಮಾಬಾದ್, ಮೇ 9: ದೇಶದಲ್ಲಿ ನಾಗರಿಕ ಕಲಹಕ್ಕೆ ಪ್ರಚೋದನೆ ನೀಡಲು ಯತ್ನಿಸಿದ್ದೇ ಆದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಹಾಲಿ ಪ್ರಧಾನಿ ಶಾಹಬಾಜ್ ಷರೀಫ್ ಎಚ್ಚರಿಕೆ ನೀಡಿದ್ದಾರೆ.
ಖೈಬರ್ ಪಕ್ತುಂಕ್ವ ಪ್ರಾಂತ್ಯದ ಆಬಟಾಬಾದ್ ನಗರದಲ್ಲಿ ಇಮ್ರಾನ್ ಖಾನ್ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಿ ಷರೀಫ್, "ಇದು ಪಾಕಿಸ್ತಾನ ವಿರುದ್ಧ ನಡೆದ ಸಂಚು" ಎಂದು ಗಂಭೀರ ಆರೋಪ ಮಾಡಿದರು.
ಪಾಕಿಸ್ತಾನದಲ್ಲಿ ರಂಜಾನ್ ಮುಗಿಯುತ್ತಿದ್ದಂತೆಯೇ ಆಹಾರ ಬೆಲೆ ದುಬಾರಿ; ಜನರು ಕಂಗಾಲು
"ಪಾಕಿಸ್ತಾನದ 22 ಕೋಟಿ ಜನರು, ದೇಶದ ಸಂವಿಧಾನ ಮತ್ತು ಸಂಸ್ಥೆಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರತಿಷ್ಠೆಯ ಕೈಗೊಂಬೆಗಳಲ್ಲ. ಜನರನ್ನು ಗುಲಾಮರಾಗಿ ಮಾಡಲು ಇಮ್ರಾನ್ ನಿಯಾಜಿ ಪ್ರಯತ್ನಿಸುತ್ತಿದ್ದಾರೆ. ಆತ ಪಾಕಿಸ್ತಾನದ ಹಿಟ್ಲರ್ ಆಗಲು ನಾವು ಅವಕಾಶ ಕೊಡಲ್ಲ" ಎಂದು ಪ್ರಧಾನಿ ಶಾಹಬಾಜ್ ಷರೀಫ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.
ನಾನೊಬ್ಬ ಕತ್ತೆ; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಯಲ್ಲಿ ಇದೆಂಥಾ ಮಾತು!?
ಇಮ್ರಾನ್ಗೆ ವಾಸ್ತವ ದರ್ಶನ
"ಇಮ್ರಾನ್ ನಿಯಾಜಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಈತ ಅವರು ವಾಸ್ತವವನ್ನು ಎದುರಿಸಬೇಕು" ಎಂದ ಪ್ರಧಾನಿಗಳು, ಪಾಕಿಸ್ತಾನವನ್ನು ಈಗಿನ ಲಿಬಿಯಾ ಮತ್ತು ಇರಾಕ್ ರೀತಿ ಪರಿಸ್ಥಿತಿಗೆ ತಳ್ಳಬೇಕೆಂಬುದು ಇಮ್ರಾನ್ ಖಾನ್ ಉದ್ದೇಶ ಎಂದು ಕುಟುಕಿದರು. ಇದೇ ವೇಳೆ, ಇಮ್ರಾನ್ ಖಾನ್ರನ್ನು ಐತಿಹಾಸಿಕ ವಿಲನ್ಗಳೆನಿಸಿದ ಮೀರ್ ಜಾಫರ್ ಮತ್ತು ಮೀರ್ ಸಾದಿಕ್ಗೆ ಹೋಲಿಕೆ ಮಾಡಿದರು.
ಮೀರ್ ಸಾದಿಕ್ ಯಾರು?
ಕನ್ನಡಿಗರಿಗೆ ಮೀರ್ ಸಾದಿಕ್ ಯಾರೆಂದು ಹೆಸರು ಪರಿಚಿತವಿರುತ್ತದೆ. ಮೈಸೂರು ಸಂಸ್ಥಾನದ ಅರಸರಾಗಿದ ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಮೀರ್ ಸಾದಿಕ್ ಮಂತ್ರಿಯಾಗಿದ್ದರು. 1798-99 ನಾಲ್ಕನೇ ಆಂಗ್ಲ-ಮೈಸೂರು ಕದನದಲ್ಲಿ ಬ್ರಿಟಿಷರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಂಡಾಗ ಟಿಪ್ಪು ಸುಲ್ತಾನ್ಗೆ ದ್ರೋಹ ಎಸಗಿ ಶತ್ರುಗಳ ಗೆಲುವಿಗೆ ನೆರವಾದವ ಇದೇ ಮೀರ್ ಸಾದಿಕ್. ಹೀಗಾಗಿ, ದ್ರೋಹಿಗಳಿಗೆ ಇನ್ನೊಂದು ಹೆಸರು ಹೇಳುವಾಗ ಮೀರ್ ಸಾದಿಕ್ ಹೆಸರು ಪ್ರಸ್ತಾಪಿಸುತ್ತಾರೆ.
ಮೀರ್ ಜಾಫರ್ ಯಾರು?
ಬಂಗಾಳದ ನವಾಬ ಸಿರಾಜುದ್ ದೌಲಾ ಸೈನ್ಯದಲ್ಲಿ ಮೀರ್ ಜಾಫರ್ ಕಮಾಂಡರ್ ಆಗಿದ್ದವರು. ಐತಿಹಾಸಿಕ ಮತ್ತು ಬ್ರಿಟಿಷರ ಪ್ರಾಬಲ್ಯಕ್ಕೆ ಬಹಳ ನಿರ್ಣಾಯಕವಾಗಿದ್ದ ಪ್ಲಾಸಿ ಕದನದಲ್ಲಿ ನವಾಬರಿಗೆ ದ್ರೋಹ ಮಾಡಿ ಬ್ರಿಟಿಷರಿಗೆ ಸಹಾಯ ಮಾಡಿದ್ದು ಇದೇ ಮೀರ್ ಜಾಫರ್. 1757 ರಲ್ಲಿ ಬಂಗಾಳ ನವಾಬ ಮತ್ತು ಫ್ರೆಂಚರ ವಿರುದ್ಧ ಬ್ರಿಟಿಷರು ಪ್ಲಾಸಿ ಯುದ್ಧದಲ್ಲಿ ಗೆಲ್ಲಲು ಮೀರ್ ಜಾಫರ್ ಸಹಾಯ ಪ್ರಮುಖ ಪಾತ್ರ ವಹಿಸಿದ್ದರು. ಈ ಯುದ್ಧ ಗೆದ್ದ ಬಳಿಕ ಬ್ರಿಟಿಷರು ಒಂದೊಂದಾಗಿ ಭಾರತದ ಪ್ರಾಂತ್ಯಗಳನ್ನ ವಶಪಡಿಸಿಕೊಳ್ಳುತ್ತಾ ಹೋಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ತುತ್ತು ಕೊಟ್ಟ ಕೈಯನ್ನೇ ಕಡಿದರು
ಇಬ್ಬರು ಐತಿಹಾಸಿಕ ರಾಜ್ಯದ್ರೋಹಿಗಳಿಗೆ ಇಮ್ರಾನ್ ಖಾನ್ ಹೋಲಿಕೆ ಮಾಡಿ ಟೀಕಿಸಿದ ಪಾಕಿಸ್ತಾನ್ ಪ್ರಧಾನಿ ಶಾಹಬಾಜ್ ಷರೀಫ್, "ಇವರು ತನಗೆ ತುತ್ತು ತಿನಿಸಿದ ಕೈಯನ್ನೇ ಕಚ್ಚಿದ್ದಾರೆ" ಎಂದು ಬೇಸರ ಹೊರಹಾಕಿದರು. ಅಂದರೆ, ತನ್ನನ್ನು ಪೋಷಿಸಿದ ದೇಶಕ್ಕೆ ಇಮ್ರಾನ್ ಖಾನ್ ದ್ರೋಹ ಎಸಗುತ್ತಿದ್ದಾರೆಂಬುದು ಷರೀಫ್ ಆರೋಪ. ಆಬಟಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಇಮ್ರಾನ್ ಖಾನ್ ಮಾಡಿದ ಭಾಷಣದ ಕೆಲ ಅಂಶಗಳನ್ನು ಉಲ್ಲೇಖಿಸುತ್ತಾ, "ಇವತ್ತು ಪಾಕಿಸ್ತಾನ ದೇಶ, ಸಂವಿಧಾನ ಮತ್ತು ರಾಷ್ಟ್ರೀಯ ಸಂಸ್ಥೆಗಳಿಗೆ ಸವಾಲು ಹಾಕಲಾಗಿದೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಜಾರಿ ಮಾಡಬೇಕಾಗುತ್ತದೆ" ಎಂದು ಹೇಳಿದರು.
ಇಮ್ರಾನ್ ಖಾನ್ ಹೇಳಿದ್ದು ಏನು?
ನಿನ್ನೆ ಅಬಟಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಮತ್ತವರ ಕುಟುಂಬದ ಮೇಲೆ ಇಮ್ರಾನ್ ಖಾನ್ ವಾಗ್ದಾಳಿ ಮಾಡಿದ್ದರು. ಶಾಹಬಾಜ್ ಷರೀಪ್ ಒಬ್ಬ ಭಿಕ್ಷುಕ, ಕಳ್ಳ ಎಂದು ಟೀಕಿಸಿದ ಅವರು, "ಷರೀಫ್ ಕುಟುಂಬ ಹೇಳಿರುವ ಸುಳ್ಳನ್ನು ಬೇರಾರೂ ಮೀರಿಸಲು ಸಾಧ್ಯವಿಲ್ಲ" ಎಂದರು.
ಆಮದು ಸರಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ಸಾಮಾನುಗಳ ಬೆಲೆ ಹೆಚ್ಚಾಗಿ ಹೋಗಿದೆ. ಕದ್ದ ಹಣವನ್ನು ವಿದೇಶಕ್ಕೆ ಕಳುಹಿಸಿದಾಗ ಅಮೆರಿಕನ್ ಡಾಲರ್ ಎದುರು ಪಾಕಿಸ್ತಾನೀ ಕರೆನ್ಸಿ ಮೌಲ್ಯ ಕಡಿಮೆ ಆಗುತ್ತದೆ. ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನೀ ರೂಪಾಯಿ ಮೌಲ್ಯ ಕಡಿಮೆ ಆಗುತ್ತಿದೆ" ಎಂದು ಇಮ್ರಾನ್ ಖಾನ್ ಲೇವಡಿ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)