ನಾನು ಭಾರತ ವಿರೋಧಿಯಲ್ಲ ಎಂದ ಇಮ್ರಾನ್ ಖಾನ್!
ಇಸ್ಲಾಮಾಬಾದ್, ಏಪ್ರಿಲ್ 05: ಇತ್ತೀಚೆಗೆ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ, "ನಾನು ಭಾರತ ವಿರೋಧಿಯಲ್ಲ, ನನಗೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೇಕು," ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸಾಂವಿಧಾನಿಕ ಬಿಕ್ಕಟ್ಟಿನ ಮಧ್ಯೆ, ನಿನ್ನೆಯಷ್ಟೇ ಪಾಕ್ ಪ್ರಧಾನಿ ಸ್ಥಾನದಿಂದ ಕೆಳಗಿಳಿದು ಹಂಗಾಮಿ ಪ್ರಧಾನಿಯನ್ನು ನೇಮಕ ಮಾಡಿದ ಇಮ್ರಾನ್ ಖಾನ್ ಈಗ ಭಾರತದ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿಕೊಂಡಿದ್ದಾರೆ. "ನಾನು ಭಾರತದ ಅಥವಾ ಅಮೆರಿಕದ ವಿರೋಧಿ ಅಲ್ಲ ಅಥವಾ ಯಾವುದೇ ದೇಶದ ವಿರೋಧಿ ಅಲ್ಲ. ಪರಸ್ಪರ ಗೌರವದ ಆಧಾರದ ಮೇಲೆ ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ನಾನು ಬಯಸುತ್ತೇನೆ," ಎಂದು ಹೇಳಿಕೊಂಡಿದ್ದಾರೆ.
ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ!
ದೂರದರ್ಶನದ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಈ ಹೇಳಿಕೆಯನ್ನು ನೀಡಿದ್ದಾರೆ. "ನಾನು ಯಾವುದೇ ದೇಶದ ವಿರುದ್ಧ ಅಲ್ಲ. ನಾನು ಭಾರತೀಯ ಅಥವಾ ಅಮೇರಿಕನ್ಗಳ ವಿರೋಧಿ ಅಲ್ಲ. ಆದರೆ ನಾವು ನೀತಿಗಳ ವಿರುದ್ಧ ಇರಬಹುದು," ಎಂದಿದ್ದಾರೆ. ಹಾಗೆಯೇ, "ನಾನು ಅವರೊಂದಿಗೆ ಸ್ನೇಹವನ್ನು ಬಯಸುತ್ತೇನೆ ಮತ್ತು ಗೌರವ ಇರಬೇಕು," ಎಂದು ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
2018 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕಠಿಣ ರಾಜಕೀಯ ಪರೀಕ್ಷೆಯನ್ನು ಎದುರಿಸುತ್ತಿರುವ ಖಾನ್, ತನ್ನನ್ನು ಪದಚ್ಯುತಗೊಳಿಸಲು "ವಿದೇಶಿ ಪಿತೂರಿ" ಇದೆ ಎಂದು ಹಲವಾರು ಬಾರಿ ಆರೋಪಿಸಿದ್ದರು. ಯುಎಸ್ ಅನ್ನು ಉಲ್ಲೇಖ ಮಾಡಿ ಕೂಡಾ ಹೇಳಿಕೆ ನೀಡಿದ್ದರು. ಈಗ ಮತ್ತೆ ಯುಎಸ್ ವಿರೋಧಿಯಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಭಾರತದ ಜೊತೆ ಮಾತುಕತೆ; ಪಾಕ್ ಸೇನಾ ಮುಖ್ಯಸ್ಥರ ಅಚ್ಚರಿ ಹೇಳಿಕೆ
ಈ ಹಿಂದೆ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದ ಇಮ್ರಾನ್ ಖಾನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್ಡಿಎ ಸರ್ಕಾರದ ಕಟು ಟೀಕಾಕಾರರಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಮೆರಿಕದ ನಿರ್ಬಂಧವಿದ್ದರೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಕ್ಕೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೊಗಳಿದ್ದಾರೆ ಎಂದು ವರದಿ ಹೇಳಿದೆ.
ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, "ನೆರೆಯ ಭಾರತವು ಉತ್ತಮವಾದ ವಿದೇಶಾಂಗ ನೀತಿ ಹೊಂದಿದೆ. ಭಾರತ ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವುದರಿಂದ ಅದನ್ನು ಹೊಗಳಲು ಬಯಸುತ್ತೇನೆ," ಎಂದು ಹೇಳಿದ್ದು, ಕ್ವಾಡ್ ನ ಭಾಗವಾಗಿರುವ ಭಾರತವು ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.
"ಭಾರತದ ವಿದೇಶಾಂಗ ನೀತಿಯೂ ಪಾಕಿಸ್ತಾನದ ಜನರಿಗೆ ಅನುಕೂಲವಾಗಲಿದೆ. ನಾನು ಯಾರ ಮುಂದೆಯೂ ತಲೆಬಾಗಿಲ್ಲ ಮತ್ತು ನನ್ನ ರಾಷ್ಟ್ರವನ್ನು ಬಗ್ಗಿಸಲು ಬಿಡುವುದಿಲ್ಲ," ಎಂದು ಸಂಸತ್ತಿನಲ್ಲಿ ತಮ್ಮ ವಿರುದ್ಧ ಅವಿಶ್ವಾಸ ಮತಕ್ಕೆ ಮುಂಚಿತವಾಗಿ ಸಾರ್ವಜನಿಕ ಬೆಂಬಲವನ್ನು ಸಂಗ್ರಹಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನ ಹಂಗಾಮಿ ಪ್ರಧಾನ ಮಂತ್ರಿ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದಾರೆ. ಅವಿಶ್ವಾಸ ಗೊತ್ತುವಳಿ ವಜಾಗೊಂಡ ನಂತರ ಇಮ್ರಾನ್ ಖಾನ್ ಈ ಕ್ರಮ ಕೈಗೊಂಡಿದ್ದಾರೆ. ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇಮ್ರಾನ್ ಮನವಿಯನ್ನು ರಾಷ್ಟ್ರಪತಿ ಆರಿಫ್ ಅಲ್ವಿ ಮನ್ನಿಸಿದ್ದು, ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿದ್ದು, ದೇಶ ಚುನಾವಣೆಗೆ ಸಜ್ಜಾಗಬೇಕಾದ ಅನಿವಾರ್ಯತೆ ಮೂಡಿದೆ. ಈ ನಡುವೆ ಪಾಕಿಸ್ತಾನಕ್ಕೆ ಹಂಗಾಮಿ ಪ್ರಧಾನಿಯಾಗಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ರನ್ನು ನೇಮಿಸಲಾಗಿದೆ.