ಟಿಪ್ಪು ಸುಲ್ತಾನ್ ಸಾವನ್ನಪ್ಪಿದ ದಿನವನ್ನು ಸ್ಮರಿಸಿದ ಪಾಕ್ ಪ್ರಧಾನಿ ಇಮ್ರಾನ್
ಇಸ್ಲಾಮಾಬಾದ್ (ಪಾಕಿಸ್ತಾನ), ಮೇ 5: 'ಗುಲಾಮನಾಗಿ ಬದುಕುವ ಬದಲು' ಜೀವವನ್ನೇ ತ್ಯಜಿಸಿದ ಸ್ವಾತಂತ್ರ್ಯ ಹೋರಾಟಗಾರ, ಹದಿನೆಂಟನೇ ಶತಮಾನದ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ ಎಂದು ಹೊಗಳುವ ಮೂಲಕ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೌರವ ಸಲ್ಲಿಸಿದ್ದಾರೆ. ಹದಿನೆಂಟನೇ ಶತಮಾನದ ಮೈಸೂರು ಸಂಸ್ಥಾನದ ಆಡಳಿತಗಾರನನ್ನು ಟ್ವಿಟ್ಟರ್ ನಲ್ಲಿ ಸ್ಮರಿಸಿದ್ದಾರೆ.
ಇಂದು ಮೇ ನಾಲ್ಕನೇ ತಾರೀಕು ಟಿಪ್ಪು ಸುಲ್ತಾನ್ ಸಾವನ್ನಪ್ಪಿದ್ದ ದಿನ- ನಾನು ಗೌರವಿಸುವ ವ್ಯಕ್ತಿ. ಏಕೆಂದರೆ, ಜೀವನ ಪೂರ್ತಿ ಗುಲಾಮನಾಗಿ ಬಾಳುವುದಕ್ಕಿಂತ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿ, ಹೋರಾಟದಲ್ಲಿ ಸಾವನ್ನಪ್ಪಿದ ವ್ಯಕ್ತಿ ಎಂದು ಇಮ್ರಾನ್ ಖಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ನನ್ನು ಇಮ್ರಾನ್ ಖಾನ್ ಹೊಗಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ಸಂಸತ್ ನಲ್ಲಿ ಜಂಟಿ ಅಧಿವೇಶನದಲ್ಲಿ ಮಾತನಾಡುವಾಗಲೂ ಇಮ್ರಾನ್ ಖಾನ್ ಟಿಪ್ಪು ಸುಲ್ತಾನ್ ನನ್ನು ಸ್ಮರಿಸಿದ್ದರು. ಹಲವಾರು ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದ ಟಿಪ್ಪು ಸುಲ್ತಾನ್, ಮೈಸೂರು ರೇಷ್ಮೆ ಉದ್ಯಮ ಬೆಳವಣಿಗೆಗೂ ಮಹತ್ತರವಾದ ಕೊಡುಗೆ ನೀಡಿದ್ದಾನೆ.