ಪಾಕಿಸ್ತಾನದಲ್ಲಿ ಅಫ್ಘನ್ ನಿರಾಶ್ರಿತರಿಗೆ ನೂತನ ಶಿಬಿರ ಸ್ಥಾಪಿಸಿಲ್ಲ
ಇಸ್ಲಾಮಾಬಾದ್, ಸೆಪ್ಟೆಂಬರ್ 07: ಪಾಕಿಸ್ತಾನದಲ್ಲಿ ಅಫ್ಘನ್ ನಿರಾಶ್ರಿತರಿಗೆ ನೂತನ ಶಿಬಿರ ಸ್ಥಾಪಿಸಿಲ್ಲ ಎಂದು ಪಾಕಿಸ್ತಾನ ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ.
ತಾಲಿಬಾನ್ ಪಾಕಿಸ್ತಾನ ತನ್ನ ಎರಡನೇ ಮನೆ ಎಂದು ಹೇಳಿತ್ತು, ಇದೀಗ ಅಫ್ಘಾನಿಸ್ತಾನದಿಂದ ಬಂದವರಿಗೆ ನೆಲೆ ನೀಡದಿರುವುದು ತಾಲಿಬಾನ್ಗೆ ಪಾಕಿಸ್ತಾನದ ಬೆಂಬಲ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.
ತಜಿಕಿಸ್ತಾನಕ್ಕೆ ಹಾರಿದ್ದಾರೆ ಅಮ್ರುಲ್ಲಾ ಸಾಲೇಹ್ ಎಂದ ತಾಲಿಬಾನ್
ಪಾಕಿಸ್ತಾನದಲ್ಲಿ 30 ಲಕ್ಷ ಅಫ್ಘನ್ ನಿರಾಶ್ರಿತರಿದ್ದಾರೆ, ಅಲ್ಲದೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಗಡಿ ಬಳಿ ಜನರು ಗುಂಪುಗೂಡಿದ್ದಾರೆ. ಈ ನಡುವೆ ಅಫ್ಘಾನ್ನೊಂದಿಗಿನ ಟಾರ್ಕಮ್ ಗಡಿ ಪ್ರದೇಶಕ್ಕೆ ರಶೀದ್ ಅವರು ಭಾನುವಾರ ಭೇಟಿ ನೀಡಿದ್ದರು. ಆ ಬಳಿಕ ಮಾತನಾಡಿದ್ದ ಅವರು, ಟಾರ್ಕಮ್ ಗಡಿ ಪ್ರದೇಶದಲ್ಲಿ ಯಾವುದೇ ಅಫ್ಘನ್ ನಿರಾಶ್ರಿತರಿಲ್ಲ, ನಾವು ಇಲ್ಲಿ ಹೊಸ ಶಿಬಿರಗಳನ್ನು ಸ್ಥಾಪಿಸಿಲ್ಲ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಇನ್ನು ಮುಂದೆ ನಾವು ಅಫ್ಘನ್ ನಿರಾಶ್ರಿತರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಸಚಿವರುಗಳು ಅಫ್ಘನ್ ನಿರಾಶ್ರಿತರಿಗೆ ಉಳಿಯಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಪಾಕಿಸ್ತಾನವನ್ನು ಪ್ರವೇಶಿಸಲು ಅಫ್ಘಾನಿಸ್ತಾನದ 4 ಸಾವಿರ ಜನರಿಗೆ ವೀಸಾ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕೃತವಾಗಿ ಪಾಕಿಸ್ತಾನ ಮಂಜೂರು ಮಾಡಿದೆ.
ಪಾಕಿಸ್ತಾನದಲ್ಲಿ ಅರ್ಧದಷ್ಟು ಅಫ್ಘನ್ ನಿರಾಶ್ರಿತರು ಕಾನೂನು ಬಾಹಿರವಾಗಿ ವಾಸವಿದ್ದಾರೆ. ಅವರು ಈವರೆಗೆ ದೇಶದಲ್ಲಿ ತಮ್ಮ ಹೆಸರನ್ನುನೋಂದಾಯಿಸಿಕೊಂಡಿಲ್ಲ. ಅಧಿಕೃತವಾಗಿ ನೋಂದಾಯಿಸಿಕೊಂಡಿರುವ 15 ಲಕ್ಷ ಜನರು ಮಾತ್ರ ಇಲ್ಲಿ ಉಳಿಯಲು, ಓಡಾಡಲು ಮತ್ತು ವ್ಯವಹಾರ ನಡೆಸುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಅಫ್ಘಾನಿಸ್ತಾನ ರಾಷ್ಟ್ರದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಬುಲ್ ನಲ್ಲಿ ಪ್ರತಿಭಟನೆ ರ್ಯಾಲಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಪ್ರತಿಭಟನೆಯಲ್ಲಿ 70 ಮಂದಿ ಜನರು ಭಾಗಿಯಾಗಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವವರ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಕಾಬುಲ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ನಡೆಯುತ್ತಿದ್ದು, ಪಾಕ್ ವಿರುದ್ಧ ಪ್ರತಿಭಟನಾಕಾರರು ಬ್ಯಾನರ್ ಹಾಗೂ ಘೋಷಣಾ ವಾಕ್ಯಗಳನ್ನು ಕೂಗುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್ ಉಗ್ರರು ಗುಂಡು ಹಾರಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.