ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!
ಇಸ್ಲಮಾಬಾದ್, ಏಪ್ರಿಲ್ 8: ಭಾರತದ ವಿದೇಶಾಂಗ ನೀತಿಯನ್ನು ಯಾವುದೇ ಸೂಪರ್ ಪವರ್ ನಿಯಂತ್ರಿಸಲು ಹಾಗೂ ನಿರ್ದೇಶಿಸುವುದಕ್ಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಕೆಲವೇ ಗಂಟೆಗಳ ಮೊದಲು ತಮ್ಮ ರಾಜೀನಾಮೆಯನ್ನು ಇಮ್ರಾನ್ ಖಾನ್ ತಳ್ಳಿ ಹಾಕಿದರು. ಪಾಕಿಸ್ತಾನದ ಮಾಧ್ಯಮಗಳೇ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿದರು.
ಪಾಕಿಸ್ತಾನ ಸುಪ್ರೀಂಕೋರ್ಟ್ನಲ್ಲೂ ಇಮ್ರಾನ್ ಖಾನ್ಗೆ ಹಿನ್ನಡೆ
"ನನಗೆ ಭಾರತದ ಬಗ್ಗೆ ಇತರರಿಗಿಂತ ಹೆಚ್ಚು ಚೆನ್ನಾಗಿ ತಿಳಿದಿದೆ. ಯಾವುದೇ ಸೂಪರ್ ಪವರ್ ಭಾರತದ ವಿದೇಶಾಂಗ ನೀತಿಯನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಆರ್ಎಸ್ಎಸ್ ಸಿದ್ಧಾಂತದಿಂದಾಗಿ ಭಾರತ-ಪಾಕಿಸ್ತಾನ ಬಾಂಧವ್ಯದಲ್ಲಿ ಬಿರುಕು ಉಂಟಾಗಿದೆ," ಎಂದು ಇಮ್ರಾನ್ ಖಾನ್ ತಿಳಿಸಿದರು. ಸ್ವಾತಂತ್ರ್ಯ ವಿದೇಶಾಂಗ ನೀತಿಯನ್ನು ಹೊಂದಿರಬೇಕು ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಬೇಸರ:
ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸರ್ಕಾರದ ಕ್ರಮಗಳನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ಏಪ್ರಿಲ್ 9ರಂದು ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆದೇಶಿಸಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. "ಸುಪ್ರೀಂ ಕೋರ್ಟ್ ಕನಿಷ್ಠ ವಿದೇಶಿ ಪಿತೂರಿಯ ಸಾಕ್ಷ್ಯವನ್ನು ನೋಡಬೇಕಿತ್ತು" ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, ವಿರೋಧ ಪಕ್ಷದ ಪಾಳಯದಲ್ಲಿ ಕುದುರೆ ವ್ಯಾಪಾರ ಜೋರಾಗಿದೆ. "ಯಾವ ದೇಶದ ಪ್ರಜಾಪ್ರಭುತ್ವವು ಈ ರೀತಿಯ ಕೃತ್ಯಗಳನ್ನು ಅನುಮತಿಸುತ್ತದೆ," ಎಂದು ಪ್ರಶ್ನಿಸಿದರು.
ತಾವು ಮಾಸ್ಕೋಗೆ ಹೋಗಬಾರದಿತ್ತು ಎಂದ ಅಮೆರಿಕ:
ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ವೇಳೆ ಇಮ್ರಾನ್ ಖಾನ್ ಮಾಸ್ಕೋಗೆ ಹೋಗಬಾರದಿತ್ತು ಎಂದು ಅಮೆರಿಕದ ರಾಯಭಾರಿ ಪಾಕಿಸ್ತಾನದ ಸಹವರ್ತಿಗಳಿಗೆ ತಿಳಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. "ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನ ತೊಂದರೆ ಎದುರಿಸಬೇಕಾಗಿತ್ತು ಎಂದು ವಾಷಿಂಗ್ಟನ್ ತಿಳಿಸಿತ್ತು. ಈ ಯೋಜನೆಯ ಬಗ್ಗೆ ನಿಧಾನವಾಗಿ ನಮಗೆ ಅರ್ಥವಾಗುತ್ತಿದೆ. ಇದು ಪೂರ್ವ ನಿಯೋಜಿತ ಯೋಜನೆ ಆಗಿದೆ. ನಾವು ಸ್ವಾತಂತ್ರ್ಯರಾಗಿರಬೇಕೇ ಅಥವಾ ಗುಲಾಮರಾಗಿರಬೇಕೇ ಎಂಬುದನ್ನು ನಿರ್ಧರಿಸುವುದು ಬಹಳ ಮುಖ್ಯವಾಗಿರುತ್ತದೆ," ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಸೇನೆಯಿಂದಲ್ಲ, ಜನರಿಂದ ಪ್ರಜಾಪ್ರಭುತ್ವದ ರಕ್ಷಣೆ:
ಪಾಕಿಸ್ತಾನದ ಜನರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಬಹುದೇ ವಿನಃ ಸೇನೆಯನ್ನಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. "ಜನರು ತಮ್ಮ ನಾಯಕತ್ವದೊಂದಿಗೆ ನಿಲ್ಲುವವರೆಗೂ, ಅವರು ಸ್ವತಂತ್ರ ವಿದೇಶಾಂಗ ನೀತಿಯನ್ನು ಬಯಸುತ್ತಾರೆ. ಇಮ್ರಾನ್ ಖಾನ್ ಅಮೇರಿಕನ್ ವಿರೋಧಿ ಅಲ್ಲ. ಆದರೆ ವಿದೇಶಗಳು ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಾರದು," ಎಂದು ಅವರು ಉಲ್ಲೇಖಿಸಿದರು.
ಏಪ್ರಿಲ್ 9ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ:
ರಾಷ್ಟ್ರೀಯ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯವನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠ ವಜಾಗೊಳಿಸುವ ಕುರಿತು ಗುರುವಾರವೇ ಸರ್ವಾನುಮತದ ತೀರ್ಪು ನೀಡಿದೆ. ಸಂಸತ್ತು ಮತ್ತು ಪ್ರಾಂತೀಯ ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷ ಆರಿಫ್ ಅಲ್ವಿ ನಿರ್ಧಾರವನ್ನು ನ್ಯಾಯಾಧೀಶರು "ಶೂನ್ಯ ಮತ್ತು ಅನೂರ್ಜಿತ" ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನ ಕೆಳಮನೆಯಲ್ಲಿ ಏಪ್ರಿಲ್ 9ರಂದು ಬೆಳಿಗ್ಗೆ 10 ಗಂಟೆಗೆ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ಮತ ಚಲಾಯಿಸುವುದಕ್ಕೆ ಪ್ರತಿಪಕ್ಷಗಳಿಗೆ ಅವಕಾಶ ನೀಡಲಾಗುವುದು ಎಂದು ಪೀಠ ಹೇಳಿದೆ.
ಅವಿಶ್ವಾಸ ನಿರ್ಣಯವಾದರೆ ಹೊಸ ಪ್ರಧಾನಿ:
Recommended Video
ರಾಷ್ಟ್ರೀಯ ಸಂಸತ್ತಿನಲ್ಲಿ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮತ ಚಲಾಯಿಸಲು ಸಾಧ್ಯವಾಗುತ್ತದೆ, ಈ ಅವಿಶ್ವಾಸ ನಿರ್ಣಯ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಹೊಸ ಪ್ರಧಾನಮಂತ್ರಿ ಅನ್ನು ಆಯ್ಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಇನ್ನು ಸದನದಲ್ಲಿ ಅವಿಶ್ವಾಸ ಮತವನ್ನು ಮಂಡಿಸುವವರೆಗೆ ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಅಧಿವೇಶನವನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಐವರು ನ್ಯಾಯಾಧೀಶರ ಪಂಚ ಪೀಠ ಹೇಳಿದೆ.