ಮಾನವೀಯತೆ ಮರೆತ ಪೊಲೀಸರು ನಾಲ್ವರನ್ನು ಗುಂಡಿಕ್ಕಿ ಕೊಂದರು
ಇಸ್ಲಾಮಾಬಾದ್, ಜನವರಿ 21: ಕಾರೊಂದನ್ನು ಅಡ್ಡಗಟ್ಟಿದ ಪೊಲೀಸರು ಮನಬಂದಂತೆ ಗುಂಡುಹಾರಿಸಿ ಮಗು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಪಾಕಿಸ್ತಾನದ ಮುಲ್ತಾನ್ನಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದು, ಅದೀಗ ಪಾಕಿಸ್ತಾನದಾದ್ಯಂತ ವೈರಲ್ ಆಗಿದೆ. ಪೊಲೀಸರ ಅಮಾನವೀಯ ವರ್ತನೆಗೆ ದೇಶದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿ
ದಂಗೆಕೋರರ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ, ಅವರೆಲ್ಲರೂ ಅಮಾಯಕರು ಎನ್ನುವುದು ದೃಢಪಟ್ಟಿದ್ದು, ಘಟನೆ ಸಂಬಂಧ ಭಯೋತ್ಪಾದನಾ ನಿಗ್ರಹ ದಳದ 16 ಪೊಲೀಸರನ್ನು ಬಂಧಿಸಲಾಗಿದೆ.
ದಿನಸಿ ಅಂಗಡಿ ಮಾಲೀಕ ಮೊಹಮ್ಮದ್ ಖಲೀಲ್, ಅವರ ಪತ್ನಿ ನಬೀಲಾ, 13 ವರ್ಷದ ಮಗಳು ಅರೀಬಾ ಮತ್ತು ಅವರ ಕುಟುಂಬದ ಸ್ನೇಹಿತ ಜೀಶಾನ್ ಜಾವೇದ್ ಎಂಬುವವರನ್ನು ಶನಿವಾರ ಪೊಲೀಸರು ಕಾರು ಅಡ್ಡಗಟ್ಟಿ ಹತ್ಯೆ ಮಾಡಿದ್ದರು. ಜಾವೇದ್ ಒಬ್ಬ ಭಯೋತ್ಪಾದಕನಾಗಿದ್ದು, ಉಳಿದವರನ್ನು ಆತ ಮಾನವ ಬಾಂಬ್ ದಾಳಿಕೋರರನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
#WATCH: पाकिस्तान में ‘रक्षक ही बना ‘भक्षक’ pic.twitter.com/fF9XqmWggd
— ANI (@ANI) 21 January 2019
ಕುಟುಂಬದ ಸದಸ್ಯರು ಮತ್ತು ಪ್ರತ್ಯಕ್ಷದರ್ಶಿಗಳು ಇದು ಅತ್ಯಂತ ಅಮಾನವೀಯ, ಕ್ರೂರ ಕೃತ್ಯ ಎಂದು ಆರೋಪಿಸಿದ್ದಾರೆ. ಕಾರನ್ನು ಹಿಂಬಾಲಿಸಿಕೊಂಡು ಬಂದ ಪೊಲೀಸರು ಅದನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರ್ನಲ್ಲಿ ಮೂವರು ಚಿಕ್ಕ ಮಕ್ಕಳನ್ನು ಹೊರಗೆ ಎಳೆದು ಹಾಕಿದ್ದಾರೆ. ನಂತರ ವಾಹನದ ಮೇಲೆ ಅಡ್ಡಾದಿಡ್ಡಿ ಗುಂಡಿನ ದಾಳಿ ನಡೆಸಿ ಒಳಗಿದ್ದ ಎಲ್ಲರನ್ನೂ ಕೊಂದು ಹಾಕಿದ್ದಾರೆ. ಇದನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಮಾಧ್ಯಮಕ್ಕೆ ನೀಡಿದ್ದಾರೆ.
ಉಗ್ರರನ್ನು 'ಮಣ್ಣಿನ ಮಕ್ಕಳು' ಎಂದ ಮೆಹಬೂಬಾ ಮುಫ್ತಿ!
ಘಟನಾ ಸ್ಥಳದಲ್ಲಿ, ಮೃತ ವ್ಯಕ್ತಿಗಳ ಬಳಿ ಎಲ್ಲಿಯೂ ಶಸ್ತ್ರಾಸ್ತ್ರ ಪತ್ತೆಯಾಗಿಲ್ಲ. ಈ ಘಟನೆ ಪೊಲೀಸರ ವಿರುದ್ಧ ಭಾರಿ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿದೆ.
ಮೃತದೇಹಗಳನ್ನು ರಸ್ತೆಯಿಂದ ಹೊರತೆಗೆಯಲು ಒಪ್ಪದ ಸ್ಥಳೀಯರು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.