ಪಾಕಿಸ್ತಾನ ಸೇನೆಯಿಂದ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಯಶಸ್ವಿ..!
ಇಸ್ಲಾಮಾಬಾದ್, ಮಾರ್ಚ್ 28: ನೆರೆ ದೇಶಗಳ ಜೊತೆ ಕಾಲು ಕೆರೆದು ಜಗಳಕ್ಕೆ ಸಿದ್ಧವಾಗುವ ಪಾಕಿಸ್ತಾನ ಇದೀಗ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಮಾಡಿದೆ. 900 ಕಿಲೋ ಮೀಟರ್ ಗುರಿಯನ್ನು ತಲುಪಬಲ್ಲ ಕ್ಷಿಪಣಿ ಪರೀಕ್ಷೆಯನ್ನು ಪಾಕ್ ಯಶಸ್ವಿಯಾಗಿ ಪೂರೈಸಿದೆ.
ಭಾರತದ ಜೊತೆ ಸಂಬಂಧ ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಪಾಕ್ ಈ ಕ್ರಮ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ. ಫೆಬ್ರವರಿ ತಿಂಗಳಲ್ಲೂ ಇಂಥದ್ದೇ ಸಾಹಸ ಮಾಡಿತ್ತು ಪಾಕಿಸ್ತಾನ. ಆಗ 450 ಕಿಲೋ ಮೀಟರ್ ಸಾಮರ್ಥ್ಯದ ಕ್ಷಿಪಣಿ ಪ್ರಯೋಗ ಮಾಡಿತ್ತು.
ಇದೀಗ 900 ಕಿಲೋ ಮೀಟರ್ ಸಾಮರ್ಥ್ಯದ ಕ್ಷಿಪಣಿಯನ್ನ ಅದರಲ್ಲೂ ಅಣ್ವಸ್ತ್ರ ಹೊತ್ತಯ್ಯಬಲ್ಲ ಮಿಸೈಲ್ ಟೆಸ್ಟ್ ಮಾಡಿರುವುದು ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ.
ಕ್ಷಿಪಣಿ ಪ್ರಯೋಗ ಯಶಸ್ವಿಯಾದ ನಂತರ ಪಾಕಿಸ್ತಾನಿ ಅಧಿಕಾರಿಗಳು ಈ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಿದ್ದಾರೆ. ಸುಧಾರಿತ ನೇವಿಗೇಷನ್ ಸಿಸ್ಟಮ್ ಸೇರಿದಂತೆ ಆತ್ಯಾಧುನಿಕ ವ್ಯವಸ್ಥೆ ಹಾಗೂ ವಿವಿಧ ವಿನ್ಯಾಸವನ್ನ ಕ್ಷಿಪಣಿ ಹೊಂದಿದೆ ಎಂದು ಪಾಕಿಸ್ತಾನದ ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರ ಕಿರಿಕ್ ನಡುವೆಯೇ ಪಾಕ್ ಇಂತಹ ಹೆಜ್ಜೆ ಇಟ್ಟಿರುವುದು ಏಕೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಮೈತುಂಬಾ ಸಾಲ, ಆದರೂ ಶೋಕಿ..!
ನೆಮ್ಮದಿಯಾಗಿದ್ದ ದೇಶವನ್ನು ಭಯೋತ್ಪಾದಕರು, ಕಿರಾತಕರ ಕೈಯಲ್ಲಿ ಕೊಟ್ಟು ಬೀದಿಗೆ ಬಿದ್ದಿರುವ ಪಾಕಿಸ್ತಾನ ಸಾಲ ವಾಪಸ್ ಕೊಡುವ ಯೋಗ್ಯತೆಯನ್ನ ಕಳೆದುಕೊಂಡಿದೆ. ಕೈಯಲ್ಲಿ ಕಾಸಿಲ್ಲದೆ ಊರೆಲ್ಲಾ ಸಾಲ ಮಾಡಿದ ಪಾಕಿಸ್ತಾನ ಸರ್ಕಾರ ಜಗತ್ತಿನ ಮುಂದೆ ಭಿಕ್ಷೆ ಬೇಡುತ್ತಿದೆ. ಆದರೂ ವೆಪನ್ಗಳ ಶೋಕಿ ಬಿಟ್ಟಿಲ್ಲ, ಬೇರೆಯವರ ಮಾತು ಕೇಳುತ್ತಾ ಭಾರತದ ಜೊತೆ ಕಾಲು ಕೆರೆದು ಜಗಳಕ್ಕೆ ಬರುವ ಪಾಕ್ ಇದೀಗ ಮಿಸೈಲ್ ಪರೀಕ್ಷೆ ಮಾಡುವ ಮೂಲಕ ತಾನು ಬದಲಾಗುವುದಿಲ್ಲ ಅಂತಾ ಸಾರಿ ಹೇಳಿದಂತಿದೆ. ಪಾಕಿಸ್ತಾನದಲ್ಲಿ ಪ್ರಜೆಗಳು ಹಸಿವು ಮತ್ತು ಬಡತನದಿಂದ ನರಳುವಾಗ ಪಾಕ್ ಸರ್ಕಾರಕ್ಕೆ ವೆಪನ್ ಶೋಕಿ ಬೇಕಾಗಿರುವುದು ವಿಪರ್ಯಾಸ.
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ..!
ಇದು ಕೆಲ ತಿಂಗಳ ಹಿಂದೆ ನಡೆದಿದ್ದ ಘಟನೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೊರೊನಾ ಕುರಿತಾದ ವಿಶೇಷ ಚರ್ಚೆ ನಡೆಯುತ್ತಿತ್ತು. ಆಗ ಜಾಗತಿಕ ಸಮುದಾಯದ ಎದುರು ಅಕ್ಷರಶಃ ಭಿಕ್ಷೆ ಬೇಡಿದ್ದರು ಪಾಕ್ನ ಪ್ರಧಾನಿ ಇಮ್ರಾನ್ ಖಾನ್. ಕೊರೊನಾ ಪರಿಸ್ಥಿತಿಯನ್ನೇ ನೆಪಮಾಡಿಕೊಂಡು ಪಾಕ್ನ ಇಮ್ರಾನ್ ಖಾನ್ ಸರ್ಕಾರ, ಕಡಿಮೆ ಆದಾಯವಿರುವ ಬಡರಾಷ್ಟ್ರಗಳ ಸಾಲಮನ್ನಾ ಮಾಡಿ ಎಂದಿತ್ತು. ಕಡಿಮೆ ಆದಾಯವಿರುವ ರಾಷ್ಟ್ರಗಳು ಪಡೆದುಕೊಂಡ ಸಾಲವನ್ನು ಕೊರೊನಾ ಪಿಡುಗು ಅಂತ್ಯಗೊಳ್ಳುವವರೆಗೂ ಅಮಾನತು ಮಾಡಿ. ಅಲ್ಲದೆ ತೀರಾ ಹಿಂದುಳಿದಿರುವ ರಾಷ್ಟ್ರಗಳು ಪಡೆದಿರುವ ಸಾಲವನ್ನು ಮನ್ನಾ ಮಾಡಿ ಎಂದು ಜಾಗತಿಕ ಸಮುದಾಯದ ಬಳಿ ಪಾಕ್ ಪಿಎಂ ಇಮ್ರಾನ್ ಖಾನ್ ಬೇಡಿಕೊಂಡಿದ್ದರು. ತೀರಾ ಹಿಂದುಳಿದಿರುವ ರಾಷ್ಟ್ರಗಳು ಎನ್ನುವ ಮೂಲಕ ಪರೋಕ್ಷವಾಗಿ ತನ್ನ ಬಳಿ ಸಾಲ ವಾಪಸ್ ಕೊಡುವುದಕ್ಕೂ ತಾಕತ್ತಿಲ್ಲ ಎಂದು ಇಮ್ರಾನ್ ಹೇಳಿಕೊಂಡಿದ್ದರು.
ಸಾಲ ವಾಪಸ್ ಕೊಡಲು ಮತ್ತೆ ಸಾಲ..!
ಒಂದು ರಾಷ್ಟ್ರ ಹಾಳಾಗುವುದಕ್ಕೆ ಏನೆಲ್ಲಾ ಮಾಡಬೇಕು ಎಂಬುದನ್ನ ಪಾಕಿಸ್ತಾನದ ನಾಯಕರನ್ನು ನೋಡಿಯೇ ಕಲಿಯಬೇಕು. ನೆಮ್ಮದಿಯಾಗಿದ್ದ ಪಾಕಿಸ್ತಾನವನ್ನ ಅಲ್ಲಿನ ನಾಯಕರು ಹಾಳು ಮಾಡಿದ್ದಾರೆ. ಆದರ್ಥಿಕತೆಯನ್ನ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸದ್ಯಕ್ಕೆ ಪಾಕಿಸ್ತಾನದ ಸ್ಥಿತಿ ಹೇಗಿದೆ ಎಂದರೆ, ಈಗ ಇರುವ ಸಾಲಕ್ಕೆ ಬಡ್ಡಿ ಕಟ್ಟಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಆ ಸಾಲ ವಾಪಸ್ ಕೊಡಲು ಮತ್ತೆ ಸಾಲ ಮಾಡಬೇಕಿದೆ. ಹೀಗಾಗಿ ಸಾಲದ ಮೇಲೆ ಸಾಲ ಮಾಡುತ್ತಾ ಬೀದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಈ ಸಂಕೋಲೆಯಿಂದ ಹೊರಗೆ ಬರಲು ಯಾವುದೇ ದಾರಿ ಕಾಣದಾಗಿದೆ. ಈ ಕಾರಣಕ್ಕೆ ಭಿಕ್ಷೆ ಪಾತ್ರೆ ಹಿಡಿದು, ಜಗತ್ತಿನ ಮುಂದೆ ಕೈಮುಗಿದು ಕೇಳಿಕೊಳ್ಳುತ್ತಿದೆ. ಆದರೆ ಜಾಗತಿಕ ನಾಯಕರು ಮಾತ್ರ ಪಾಕ್ ಮಾತಿಗೆ ಕೇರ್ ಮಾಡುತ್ತಿಲ್ಲ.
ಪಾಕ್ ಪ್ರಜೆಗಳ ಪರದಾಟ
ಪಾಕಿಸ್ತಾನದಲ್ಲಿ ಪರಿಸ್ಥಿತಿ ಮೊದಲೇ ಹದಗೆಟ್ಟು ಹೋಗಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರವಂತೂ ಅಲ್ಲಿ ಜನರು ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟಕರವಾಗಿದೆ. ಪಾಕಿಸ್ತಾನಿ ನಾಯಕರು ಮಾಡಿಕೊಂಡಿರುವ ತಪ್ಪಿಗೆ ಅಲ್ಲಿನ ಪ್ರಜೆಗಳು ನಿತ್ಯ ನರಕ ಕಾಣುತ್ತಿದ್ದಾರೆ. ಒಂದು ಕಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಗ್ರರ ಉಪಟಳ ಹಾಗೂ ಸರ್ಕಾರದ ಕೆಲಸದಲ್ಲಿ ಅಡ್ಡ ಬರುತ್ತಿರುವ 'ಐಎಸ್ಐ' ಏಜೆಂಟರುಗಳಿಂದ ಇಡೀ ಪಾಕ್ ದಿವಾಳಿಯಾಗಿದೆ. ಕೋಟಿ ಕೋಟಿ ಜನರು ತುತ್ತು ಅನ್ನಕ್ಕೂ ನರಳಾಡುವ ಸ್ಥಿತಿ ಇದೆ. ಆದರೆ ಇದನ್ನು ಪಾಕ್ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದಿಷ್ಟು ಸಾಲ ಮಾಡಿ, ಅದರಲ್ಲೇ ವೆಪನ್ ಖರೀದಿಸಿ ಶೋಕಿ ಮಾಡುತ್ತಿದೆ. ಇನ್ನಷ್ಟು ಉಗ್ರರನ್ನು ಬೆಳೆಸುವ ಮೂಲಕ ಜಗತ್ತಿಗೆ ಕಂಟಕವಾಗುತ್ತಿದೆ.