ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ರಕ್ಷಣೆ ನಮ್ಮ ಹೊಣೆ ಎಂದ ಪಾಕ್
ಕರಾಕ್, ಜನವರಿ 01: ಪಾಕಿಸ್ತಾನದಲ್ಲಿ ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆ ಗುರುವಾರ ನಡೆದಿದ್ದು, ಇದಕ್ಕೆ ಭಾರತದಲ್ಲಿ ವಿರೋಧ ವ್ಯಕ್ತಗೊಂಡಿದೆ. ಈ ದಾಳಿ ಖಂಡಿಸಿ ಪಾಕಿಸ್ತಾನ್ ಹಿಂದೂ ಸಮಿತಿ ಸದಸ್ಯರು ಕರಾಚಿಯಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು.
ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಾಕ್ ಜಿಲ್ಲೆಯಲ್ಲಿನ ಹಿಂದೂ ದೇವಾಲಯವನ್ನು ನಾಶಪಡಿಸಿ ಬೆಂಕಿ ಹಚ್ಚಿದ್ದರು. ಈ ದೇವಾಲಯವನ್ನು ವಿಸ್ತರಿಸಲು ಹಿಂದೂಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದ ಬೆನ್ನಲ್ಲೇ ಈ ದಾಳಿ ನಡೆಸಲಾಗಿತ್ತು.
ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿದ ಕಿಡಿಗೇಡಿಗಳು
ಈ ಘಟನೆ ಕುರಿತು ಪ್ರತಿಕ್ರಿಯಿಸಿ, ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತದ ಕಳವಳವನ್ನು ವ್ಯಕ್ತಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜಮಾಯಿತ್ ಉಲೇಮಾ ಇ ಇಸ್ಲಾಂ ಸಂಘಟನೆ ಮುಖಂಡ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 350ಕ್ಕೂ ಹೆಚ್ಚು ಜನರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಈ ದಾಳಿಗೆ ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ಹಿಂದೂ ಮುಖಂಡರು ಕಟುವಾಗಿ ಟೀಕಿಸಿದ್ದಾರೆ. ಅಪರಾಧಿಗಳನ್ನು ಬಂಧಿಸಿ, ಹಾನಿಗೊಳಗಾಗಿರುವ ದೇಗುಲವನ್ನು ಪುನರ್ ನಿರ್ಮಾಣ ಮಾಡುವಂತೆ ಪ್ರಾಂತೀಯ ಸರ್ಕಾರ ಆದೇಶಿಸಿದೆ. ಸರ್ಕಾರದ ಹಣದಿಂದಲೇ ಈ ದೇವಸ್ಥಾನವನ್ನು ಮರು ನಿರ್ಮಾಣ ಮಾಡುವುದಾಗಿ ತಿಳಿದುಬಂದಿದೆ. "ಈ ದಾಳಿಯಿಂದಾದ ಹಾನಿಗೆ ಕ್ಷಮೆ ಯಾಚಿಸುತ್ತೇವೆ. ಅತಿ ಶೀಘ್ರವೇ ನಿರ್ಮಾಣ ಕಾರ್ಯ ಆರಂಭಿಸುವುತ್ತೇವೆ" ಎಂದು ಪ್ರಾಂತೀಯ ಸಚಿವ ಕಮ್ರಾನ್ ಗಂಗಾಶ್ ತಿಳಿಸಿದ್ದಾರೆ.
ದೇವಸ್ಥಾನದ ಮೇಲಿನ ದಾಳಿ ಕುರಿತು ಮಾಹಿತಿ ಪಡೆದಿರುವ ಪಾಕಿಸ್ತಾನ ಸುಪ್ರೀಂ ಕೋರ್ಟ್, ಸ್ಥಳೀಯ ಆಡಳಿತಕ್ಕೆ ಜನವರಿ 5ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ. ಪಾಕಿಸ್ತಾನ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ಕೂಡ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದೇಶದ ಸಂವಿಧಾನದ ಪ್ರಕಾರ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ನಮ್ಮ ಹೊಣೆ ಎಂದಿದ್ದಾರೆ.
ಕರಾಕ್ ಜಿಲ್ಲೆಯಲ್ಲಿ 1919ರಲ್ಲಿ ಪರಮಹಂಸ ಜಿ ಮಹಾರಾಜ್ ಅವರ ಸಮಾಧಿಯನ್ನು ಸ್ಥಾಪಿಸಲಾಗಿದ್ದು, ಕೃಷ್ಣ ದ್ವಾರಾ ಮಂದಿರ ಕೂಡ ಇದೆ. ಹಲವು ದಶಕಗಳ ಹಿಂದಿನಿಂದಲೂ ದೇವಸ್ಥಾನದ ಬಗ್ಗೆ ವಿವಾದ ಮುಂದುವರೆಯುತ್ತಿದೆ.