ಭಾರತವನ್ನು ಕಂಡರೆ ಭಯವಾಗುತ್ತಿದೆ, ನಮ್ಮನ್ನು ಕಾಪಾಡಿ ಎಂದ ಪಾಕಿಸ್ತಾನ..!
ಪಾಪಿ ಪಾಕ್ ಮಾಡಿಕೊಳ್ಳುವ ಅವಾಂತರಗಳು ಒಂದೆರಡಲ್ಲ. ಈಗ ಆ ಅವಾಂತರಗಳ ಲಿಸ್ಟ್ಗೆ ಮತ್ತೊಂದು ಮಿಸ್ಟೇಕ್ ಸೇರ್ಪಡೆಯಾಗಿದೆ. ಅಂದಹಾಗೆ ಸುಮಾರು 2 ವರ್ಷಗಳ ಹಿಂದೆ ಭಾರತದ ಕೈಯಲ್ಲಿ ಸರಿಯಾಗೇ ಪೆಟ್ಟು ತಿಂದಿದ್ದ ಪಾಕಿಸ್ತಾನಕ್ಕೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ಭಯ ಕಾಡುತ್ತಿದೆಯಂತೆ. ಖುದ್ದಾಗಿ ಪಾಕ್ನ ವಿದೇಶಾಂಗ ಸಚಿವರೇ ಈ ಹೇಳಿಕೆ ನೀಡಿದ್ದಾರೆ.
ಯುಎಇ ರಾಜಧಾನಿ ಅಬುಧಾಬಿಯಲ್ಲಿ ಈ ರೀತಿ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ, ಭಾರತ ಮತ್ತೆ ಸರ್ಜಿಕಲ್ ಸ್ಟ್ರೈಕ್ಗೆ ಸಿದ್ಧತೆ ನಡೆಸಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ದಾಳಿಯ ಭಯ
ಈ ಬಾರಿ ನಮ್ಮ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇ ಆದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದೇವೆ. ಕಳೆದ ಬಾರಿ ನಮ್ಮ ಮೇಲೆ ದಾಳಿಯಾದಾಗ ಸರಿಯಾದ ತಿರುಗೇಟು ಕೊಟ್ಟಿದ್ದೇವೆ, ಅದೇ ರೀತಿ ಮತ್ತೆ ಪೆಟ್ಟು ನೀಡಲಿದ್ದೇವೆ ಎಂದು ಪಾಕಿಸ್ತಾನ ತನ್ನ ಬೆನ್ನು ತಾನೇ ತಟ್ಟಿಕೊಂಡಿದೆ.
2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ಅಟ್ಯಾಕ್ ಆದ ನಂತರ, 26ರಂದು ಭಾರತ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿ ಉಗ್ರರ ಕೋಟೆ ಉಡಾಯಿಸಿತ್ತು. ಸರ್ಜಿಕಲ್ ಸ್ಟ್ರೈಕ್ ನಡೆದು ಸರಿಸುಮಾರು 2 ವರ್ಷ ತುಂಬುತ್ತಾ ಬಂದಿದೆ.
ಪಾಕ್ಗೆ ಸಿಕ್ಕಿದೆಯಂತೆ ಗುಪ್ತಚರ ಮಾಹಿತಿ..!
ಅಷ್ಟಕ್ಕೂ ಪಾಕ್ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ಇಷ್ಟೆಲ್ಲಾ ಆರೋಪಗಳನ್ನ ಮಾಡಿದ್ದು ಪಾಕ್ನ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಅಂತೆ. ನಮ್ಮ ಗುಪ್ತಚರರು ಮಾಹಿತಿ ನೀಡಿದ್ದಾರೆ, ನಮ್ಮ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ಭಾರತದ ಹೊಂಚು ಹಾಕಿದೆ. ಈಗಾಗಲೇ ವಿಶ್ವಸಂಸ್ಥೆಯ ವಾಹನವನ್ನೂ ಟಾರ್ಗೆಟ್ ಮಾಡಿ ಭಾರತೀಯ ಸೇನೆ ದಾಳಿ ಮಾಡಿದೆ. ಸಧ್ಯದಲ್ಲೇ ನಮ್ಮ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಯಲಿದೆ. ಹೀಗೆ ದಾಳಿ ನಡೆದು ಹೋದರೆ ನಾವು ದಿಟ್ಟವಾಗಿ ಹೋರಾಡುತ್ತೇವೆ, ಹೀಗಾದರೆ ಪಾಕಿಸ್ತಾನಕ್ಕೆ ವಿಶ್ವ ಸಮುದಾಯ ಸಪೋರ್ಟ್ ಮಾಡಬೇಕು ಎಂದು ಪಾಕ್ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ಅಂಗಲಾಚಿದ್ದಾರೆ.
‘ಅಫ್ಘಾನ್ ನೆಮ್ಮದಿ ಹಾಳು ಮಾಡ್ತೀವಿ’
ಪಾಕಿಸ್ತಾನದ ನೀಚ ಬುದ್ಧಿ ಅದೆಷ್ಟು ಎಲ್ಲೆಮೀರಿ ಹೋಗಿದೆ ಎಂದರೆ, ತಾನು ನೆಮ್ಮದಿಯಾಗಿ ಇರಲ್ಲ. ಅಕ್ಕಪಕ್ಕದ ದೇಶಗಳನ್ನೂ ನೆಮ್ಮದಿಯಾಗಿರಲು ಬಿಡಲ್ಲ ಎಂದು ನೇರವಾಗಿ ವಾರ್ನಿಂಗ್ ನೀಡಿದೆ. ಅಕಸ್ಮಾತ್ ನಮ್ಮ ಮೇಲೆ ಭಾರತ ದಾಳಿ ನಡೆಸಿದರೆ, ಇದು ಅಫ್ಘಾನಿಸ್ತಾನದ ಶಾಂತಿ ಮಾತುಕತೆ ಮೇಲೆ ಪ್ರಭಾವ ಬೀರಲಿದೆ. ಭಾರತ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಲಿ, ಇಲ್ಲವಾದರೆ ಮುಂದೆ ಇದರ ಘೋರ ಪರಿಣಾಮವನ್ನು ಭಾರತವೇ ಎದುರಿಸಬೇಕಾಗುತ್ತದೆ ಎಂದು ಮಹಮ್ಮದ್ ಖುರೇಷಿ ಅಬುಧಾಬಿಯಲ್ಲಿ ಎಗರಾಡಿದ್ದಾರೆ. ಜೊತೆಗೇ ಉಗ್ರರ ಕೂಪವಾಗಿ ನರಳುತ್ತಿರುವ ಅಫ್ಘಾನ್ ಜನರಿಗೂ ವಾರ್ನಿಂಗ್ ನೀಡಿದ್ದಾರೆ.
ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!
ಸಹಾಯಕ್ಕೆ ಅಂಗಲಾಚಿದ ಪಾಕಿಸ್ತಾನ..!
ಪಾಕಿಸ್ತಾನಕ್ಕೆ ಭಾರತದ ಸರ್ಜಿಕಲ್ ಸ್ಟ್ರೈಕ್ ಭಯ ಅದೆಷ್ಟರಮಟ್ಟಿಗೆ ಕಾಡ್ತಿದೆ ಎಂದರೆ, ತಮ್ಮ ಮೇಲೆ ಇನ್ನೇನು ದಾಳಿ ನಡೆದೇ ಬಿಡುತ್ತೆ ಎಂದು ಡಿಸೈಡ್ ಆದಂತೆ ಕಾಣುತ್ತಿದೆ. ಅಲ್ಲದೆ ಅಕಸ್ಮಾತ್ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ವಿಶ್ವ ಸಮುದಾಯ ನಮ್ಮ ನೆರವಿಗೆ ಬರಬೇಕು. ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಬೆಂಬಲ ನೀಡಲಿ ಎಂದು ಪಾಕ್ನ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ಅಂಗಲಾಚಿದ್ದಾರೆ. ಈ ಮೂಲಕ ನಾವೊಬ್ಬರೇ ಭಾರತವನ್ನು ಎದುರಿಸಲು ಸಾಧ್ಯವಾಗದು ಎಂದು ಪಾಕಿಸ್ತಾನ ಪರೋಕ್ಷವಾಗಿ ಒಪ್ಪಿಕೊಂಡಿದೆ. ಭಾರತೀಯ ಸೇನೆಯ ಬಲ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಅರಿವಾದಂತೆ ಕಾಣ್ತಿದೆ.
ಅಬ್ಬಬ್ಬಾ.. ನೌಟಂಕಿ ಪಾಪಿ ಪಾಕ್..!
ಪಾಕಿಸ್ತಾನದ ಮಾತನ್ನು ನಂಬೋದು ಒಂದೇ ಗುಳ್ಳೆನರಿಯ ನೀತಿಪಾಠ ಕೇಳೋದು ಒಂದೇ. ತನ್ನ ಅಕ್ಕಪಕ್ಕದ ದೇಶಗಳ ಜೊತೆ ಸದಾ ಕಿರಿಕ್ ಮಾಡುವ ಪಾಕಿಸ್ತಾನ ಈಗ ಭಾರತದ ವಿರುದ್ಧ ಮಾಡಿರುವ ಆರೋಪ ಕೂಡ ಇದೇ ರೀತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಪಿ ಪಾಕ್ಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳಬೇಕಿದೆ. ಆದರೆ ಇದಕ್ಕೆ ದಾರಿ ಕಾಣದಾಗಿ ಪರದಾಡುತ್ತಿತ್ತು. ಇದೀಗ ಅದಕ್ಕೂ ಉಪಾಯ ಕಂಡುಕೊಂಡಿದ್ದು, ಭಾರತದ ಸರ್ಜಿಕಲ್ ಸ್ಟ್ರೈಕ್ ಭಯವನ್ನೇ ಎತ್ತಿ ತೋರಿಸುತ್ತಿದೆ. ಸಿಂಪತಿ ಜೊತೆ, ಸಹಾಯವನ್ನೂ ಗಿಟ್ಟಿಸಿಕೊಳ್ಳುವ ಐಡಿಯಾ ಪಾಕ್ನದ್ದಾಗಿದೆ. ಭಾರತ ಪಾಕಿಸ್ತಾನದ ಆರೋಪಕ್ಕೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ, ಆದರೆ ಮುಂದೆನಾಗುತ್ತೋ ಕಾದು ನೋಡಬೇಕು.