ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ
ಪಾಕಿಸ್ತಾನದಲ್ಲಿ ಇದೇ ಜುಲೈ 25ನೇ ತಾರೀಕು ಚುನಾವಣೆ ನಡೆಯಲಿದೆ. ಭಾರತದ ಜತೆಗೆ ಆ ದೇಶದ ಸಂಬಂಧ ಹೇಗಿರಲಿದೆ ಎಂಬ ನಿಟ್ಟಿನಲ್ಲಿ ಆ ದೇಶದ ಪ್ರಧಾನಿ ಯಾರಾಗಲಿದ್ದಾರೆ ಎಂಬ ಬಗ್ಗೆ ಬಹಳ ಕುತೂಹಲವಿದೆ.
"ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಾವು ಒಪ್ಪಬೇಕಾ? ಅವೆಲ್ಲವನ್ನೂ ಸಹಿಸಿಕೊಂಡು ಸುಮ್ಮನಿರಬೇಕಾ?" ಎಂದು ಪತ್ರಿಕೆ ಸಂದರ್ಶನವೊಂದರಲ್ಲಿ ಹೇಳಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಮಗಳು ಮರ್ಯಾಮ್ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದಾರೆ.
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಮಗಳು ಮರ್ಯಾಮ್ ಬಂಧನ
ಪಿಎಂಎಲ್- ಎನ್ ಎಂಬ ಪಕ್ಷಕ್ಕೆ ಎಲ್ಲವೂ ಆಗಿರುವ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೇಲೆ ಬಲವಾದ ಹಿಡಿತ ಹೊಂದಿರುವ, ಈ ಬಾರಿ ಚುನಾವಣೆಯನ್ನು ಸ್ಪರ್ಧಿಸಲು ಸಾಧ್ಯವಿಲ್ಲದಂಥ ನವಾಜ್ ಷರೀಫ್ ತಮ್ಮ ಬಂಧನದ ಬಗ್ಗೆ ಗೊತ್ತಿದ್ದರೂ ಲಂಡನ್ ನಿಂದ ಪಾಕಿಸ್ತಾನಕ್ಕೆ ವಾಪಸಾಗಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿನ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಇನ್ನು ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರ ಇರುವಾಗ ನಡೆದಿರುವ ಬಾಂಬ್ ದಾಳಿ, ಆತ್ಮಾಹುತಿ ದಾಳಿ, ಹಿಂಸಾಚಾರ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ಒಂದು ಕ್ಷಣ, ಇದೆಂಥ ದೇಶ ಎಂದೆನಿಸಿದೆ ಇರದು. ಇನ್ನು ಮೊನ್ನೆಯ ಒಂದು ಘಟನೆ ಹೇಳ್ತೀನಿ ಕೇಳಿ.
ಬಿಲಾವಲ್ ಭುಟ್ಟೋ ಹಾಗೂ ಇಮ್ರಾನ್ ಖಾನ್ ತಮ್ಮ ತಮ್ಮ ಪಕ್ಷದ ಪರ ಚುನಾವಣೆ ಪ್ರಚಾರದ ಸಲುವಾಗಿ ಲಾಹೋರ್ ನಿಂದ ಖಾಸಗಿ ವಿಮಾನದಲ್ಲಿ ಹೊರಡಬೇಕಿತ್ತು. ಅರ್ಧ ಗಂಟೆ ವ್ಯತ್ಯಾಸ ಇರಬಹುದು ಅಷ್ಟೇ, ಇಮ್ರಾನ್ ಖಾನ್ ಗೆ ಅನುಮತಿ ಸಿಕ್ಕಿತು. ಬಿಲಾವಲ್ ಗೆ ಸಿಗಲಿಲ್ಲ. ಈ ತೀರ್ಮಾನದ ಹಿಂದೆ ಅಲ್ಲಿನ ಹಂಗಾಮಿ ಸರಕಾರದ ನಿರ್ಧಾರ ಇರಬಹುದು. ಆದರೆ ಆ ನಿರ್ಧಾರದ ಹಿಂದೆ ಇನ್ಯಾರದೋ ಇಶಾರೆ ಇದೆ ಎಂಬುದು ಗುಮಾನಿ.
ಪಾಕಿಸ್ತಾನದ ಚುನಾವಣೆ ಭಾರತವೂ ಸೇರಿದಂತೆ ಆಫ್ಘಾನಿಸ್ತಾನ, ಚೀನಾ, ಬಾಂಗ್ಲಾದೇಶ, ಇರಾನ್, ಅಮೆರಿಕ, ರಷ್ಯಾ ಮತ್ತಿತರ ರಾಷ್ಟ್ರಗಳಿಗೆ ಬಹು ಮುಖ್ಯವಾದದ್ದು. ಏಕೆಂದರೆ, ಅಲ್ಲಿ ಅಧಿಕಾರಕ್ಕೆ ಬರುವ ಪಕ್ಷ- ವ್ಯಕ್ತಿಯ ನಿಲುವುಗಳು ಹೇಗಿರುತ್ತವೆ ಎಂಬುದರ ಆಧಾರದಲ್ಲಿ ಬಹಳ ದೇಶಗಳ ನೆಮ್ಮದಿ ನಿರ್ಧಾರವಾಗುತ್ತದೆ.
ಇನ್ನು ಒಂಬತ್ತು ದಿನಕ್ಕೆ ಪಾಕಿಸ್ತಾನದಲ್ಲಿ ಚುನಾವಣೆ ನಡೆಯುತ್ತದೆ. ಈ ಸಲ ಪರಿಸ್ಥಿತಿ ಮೇಲ್ನೋಟಕ್ಕೆ ಮಾಮೂಲಿಗಿಂತ ಭಿನ್ನವಾಗಿದೆ. ನವಾಜ್ ಷರೀಫ್ ಗೆ ಲಂಡನ್ ನಿಂದ ಪಾಕ್ ಗೆ ಹಿಂತಿರುಗುವ ಧೈರ್ಯ ಬಂದಿದೆ. ಇಮ್ರಾನ್ ಖಾನ್ ಗೆ ದೇಶದ ಸೈನ್ಯದ ಮೇಲೆ ಪ್ರೀತಿ ಬಂದಿದೆ. ಆಸಿಫ್ ಅಲಿ ಜರ್ದಾರಿಗೂ ಜೈಲು ಸೇರುವ ಸಂದರ್ಭ ಬಂದರೂ ಅಚ್ಚರಿಯಿಲ್ಲ.