ಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳು
ಇಸ್ಲಾಮಾಬಾದ್, ಜುಲೈ 25: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥ ನವಾಜ್ ಷರೀಫ್ ಮತ್ತು ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ನಡುವಣ ಚುನಾವಣಾ ಜಿದ್ದಾಜಿದ್ದಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಈ ಐತಿಹಾಸಿಕ ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೂ, ನೆರೆಯ ದೇಶದಲ್ಲಿ ಭಾರಿ ರಾಜಕೀಯ ಸ್ಥಿತ್ಯಂತರಕ್ಕೆ ಎಡೆಮಾಡಿಕೊಡಲಿದೆ.
ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯ
ಬುಧವಾರ ಬೆಳಿಗ್ಗೆ ಮತದಾನ ಆರಂಭವಾಗಿದ್ದು, ರಾತ್ರಿ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಗುರುವಾರ ಅಥವಾ ಶುಕ್ರವಾರ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಈ ಮಹತ್ವದ ಚುನಾವಣೆಯ ಹತ್ತು ಪ್ರಮುಖ ಅಂಶಗಳು ಇಲ್ಲಿವೆ.
106 ಮಿಲಿಯನ್ ಮತದಾರರು
ಪಾಕಿಸ್ತಾನದಲ್ಲಿ 106 ಮಿಲಿಯನ್ ನೋಂದಾಯಿತ ಮತದಾರರಿದ್ದಾರೆ. 85,000 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಸಂಜೆ ಆರರವರೆಗೂ ಮತದಾನ ನಡೆಯಲಿದೆ. ಮತದಾನ ಮುಗಿದ ತಕ್ಷಣವೇ ಎಣಿಕೆ ಕಾರ್ಯ ಆರಂಭವಾಗಲಿದೆ.
ಇಮ್ರಾನ್ ಖಾನ್ಗೆ ಸೇನೆ ಬೆಂಬಲ
ಈ ಚುನಾವಣೆಯು ಪಾಕಿಸ್ತಾನದಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ. ಮಾಧ್ಯಮಗಳಲ್ಲಿ ತೀವ್ರ ಕೆಸರೆರಚಾಟ ನಡೆದಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರನ್ನು ರಹಸ್ಯವಾಗಿ ಬೆಂಬಲಿಸುತ್ತಿರುವ ಸೇನೆ, ಅವರ ರಾಜಕೀಯ ವಿರೋಧಿಗಳನ್ನು ಗುರಿಮಾಡುತ್ತಿದೆ ಎಂಬ ಆರೋಪವಿದೆ.
ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ
ಸೇನಾಪಡೆ ನಿಯೋಜನೆ
ಚುನಾವಣೆಯಲ್ಲಿ ಸೇನಾಪಡೆಗಳ ಪಾತ್ರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಎಲ್ಲ ಮತಗಟ್ಟೆಗಳ ಒಳಗೆ ಮತ್ತು ಹೊರಗೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನು ಅಲ್ಲಿನ ಚುನಾವಣಾ ಆಯೋಗ ಟೀಕಿಸಿದೆ. ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸಲು ಸೇನೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಸೇನೆಯ ಆಡಳಿತವೇ ಹೆಚ್ಚು
1947ರಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ಸಂದರ್ಭದಿಂದಲೂ ವಿವಿಧ ದಂಗೆಗಳನ್ನು ನಡೆಸುವ ಮೂಲಕ ಅರ್ಧದಷ್ಟು ಅವಧಿಯಲ್ಲಿ ದೇಶದ ಆಡಳಿತವನ್ನು ಸೇನೆಯೇ ನಡೆಸಿದೆ. ನಾಗರಿಕ ಆಡಳಿತದ ಸಂದರ್ಭದಲ್ಲಿಯೂ ದೇಶದ ವಿದೇಶ ಮತ್ತು ಭದ್ರತಾ ನೀತಿಗಳ ನಿರ್ಣಯದಲ್ಲಿ ಸೇನೆಯೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪಡೆದುಕೊಂಡಿದೆ.
ಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರ
ನೀತಿ ಸಂಹಿತೆ ಕಾಪಾಡಲು ಸೇನೆ
ಚುನಾವಣಾ ಆಯೋಗ ಸೂಚಿಸಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಚುನಾವಣಾ ಕರ್ತವ್ಯಗಳಿಗೆ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಖಮರ್ ಬಾಜ್ವಾ ಹೇಳಿದ್ದಾರೆ.
ಮತದಾನದಲ್ಲಿ ಸೇನೆಯು ನೆರವಾಗುವ ಪಾತ್ರವನ್ನು ಮಾತ್ರ ನಿಭಾಯಿಸಲಿದೆ. ಆದರೆ, ಚುನಾವಣಾ ಪ್ರಕ್ರಿಯೆಯು ಚುನಾವಣಾ ಆಯೋಗದ ನಿಯಂತ್ರಣ ಮತ್ತು ಅಧಿಕಾರದಲ್ಲಿಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಮೇಲೆ ಸೇನೆ ಸಂಚು: ಷರೀಫ್
2013ರಲ್ಲಿ ಮೊದಲ ಬಾರಿಗೆ ನಾಗರಿಕ ಸರ್ಕಾರವೊಂದು ಐದು ವರ್ಷದ ಸಂಪೂರ್ಣ ಆಡಳಿತವನ್ನು ಪೂರ್ಣಗೊಳಿಸಿತ್ತು. ದೇಶದ ಮುಂದಿನ ಸರ್ಕಾರವನ್ನು ನಿರ್ಧರಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿರುವ ಪಂಜಾಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಮತ್ತು ಪಿಟಿಐಗಳ ನಡುವೆ ಭಾರಿ ಕದನ ನಡೆಯುವ ನಿರೀಕ್ಷೆಯಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ನವಾಜ್ ಷರೀಫ್, ತಮ್ಮನ್ನು ಶಿಕ್ಷೆಗೆ ಒಳಪಡಿಸುವಂತೆ ನ್ಯಾಯಾಂಗದ ಮೇಲೆ ಸೇನೆ ಒತ್ತಡ ಹೇರಿತ್ತು ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಹಣೆಬರಹ ಬದಲಾಯಿಸಿ
ಜೈಲಿನಲ್ಲಿರುವ ನವಾಜ್ ಷರೀಫ್ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಅವರ ಸಹೋದರ ಷಹಬಾಜ್ ಷರೀಫ್, ಮನೆಯಿಂದ ಹೊರಬನ್ನಿ, ಪಾಕಿಸ್ತಾನದ ಹಣೆಬರಹ ಬದಲಾಯಿಸಿ ಎಂದು ಪಾಕಿಸ್ತಾನದ ಮತದಾರರಿಗೆ ಕರೆ ನೀಡಿದರು. ಬಳಿಕ ಅವರು ಲಾಹೋರ್ನಲ್ಲಿ ಮತ ಚಲಾಯಿಸಿದರು.
ಭಯೋತ್ಪಾದಕರೂ ಭಾಗಿ
ಚುನಾವಣೆಯಲ್ಲಿ ಭಯೋತ್ಪಾದನಾ ಸಂಘಟನೆಗಳಿಗೆ ಭಾಗವಹಿಸಲು ಅವಕಾಶ ನೀಡಿರುವುದು ವಿವಾದ ಸೃಷ್ಟಿಸಿದೆ. ಭಯೋತ್ಪಾದಕರು ಚುನಾವಣೆಯಲ್ಲಿ ಸ್ಪರ್ಧಿಸಿರುವ ನೂರಾರು ಅಭ್ಯರ್ಥಿಗಳ ನಡುವೆ ಧಾರ್ಮಿಕ ದ್ವೇಷ ಮತ್ತು ಪಂಥೀಯ ಹಿಂಸಾಚಾರಕ್ಕೆ ಪ್ರಚೋಚನೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸಯೀದ್ ಮಗ, ಅಳಿಯ ಸ್ಪರ್ಧೆ
ಪಾಕಿಸ್ತಾನವನ್ನು ಇಸ್ಲಾಂನ ಕೇಂದ್ರವನ್ನಾಗಿಸುವ ಗುರಿ ಹೊಂದಿರುವ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯ್ಯದ್ ನೇತೃತ್ವದ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ರಾಜಕೀಯ ವೇದಿಕೆಯಿಂದ ಸಯೀದ್ ಮಗ ಮತ್ತು ಅಳಿಯ ಸ್ಪರ್ಧಿಸುತ್ತಿದ್ದಾರೆ.
ಸರಣಿ ದಾಳಿಗಳು
ಅಭ್ಯರ್ಥಿಗಳನ್ನು ಹಾಗೂ ಚುನಾವಣಾ ಸಮಾವೇಶಗಳನ್ನು ಗುರಿಯಾಗಿರಿಸಿಕೊಂಡು ಸರಣಿ ದಾಳಿಗಳು ನಡೆದಿವೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ 151 ಮಂದಿ ಮೃತಪಟ್ಟಿದ್ದರು.
ಬುಧವಾರ ಮತದಾನದ ಪ್ರಕ್ರಿಯೆ ನಡೆದಿರುವಾಗಲೇ ಖ್ವೆಟ್ಟಾದಲ್ಲಿ ಬಾಂಬ್ ಸ್ಫೋಟ ನಡೆದಿದೆ.