ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಉಸ್ತುವಾರಿ ಎಂದ ಅಮ್ರುಲ್ಲಾ ಸಾಲೇಹ್
ಪಂಜ್ಶೀರ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಉಸ್ತುವಾರಿ ನಡೆಯುತ್ತಿದೆ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಾಲೇಹ್ ಹೇಳಿದ್ದಾರೆ.
ಅಮ್ರುಲ್ಲಾ ಸಲೇಹ್ ತಾಲೀಬಾನ್ ವಿರುದ್ಧ ಪಂಜ್ ಶೀರ್ ನಲ್ಲಿ ಹೋರಾಟ ಕಟ್ಟುತ್ತಿದ್ದು, ತಾಲೀಬಾನ್ ನ ವಕ್ತಾರರು ಪ್ರತಿ ಗಂಟೆಗೊಮ್ಮೆ ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ನಿರ್ದೇಶನಗಳನ್ನು ಪಡೆಯುತ್ತಿರುತ್ತಾರೆ ಎಂದು ಹೇಳಿದ್ದಾರೆ.
ತಾಲಿಬಾನ್ ಜನತೆಯ ಹೃದಯ ಗೆದ್ದಿಲ್ಲ. ದಣಿದ ಅಮೆರಿಕ ಅಧ್ಯಕ್ಷರ ದೋಷಯುಕ್ತ ನೀತಿಯನ್ನು ಬಳಸಿಕೊಂಡಿದೆ ಎಂದು ಅಮ್ರುಲ್ಲಾ ಸಲೇಹ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಲು ಪಾಕಿಸ್ತಾನದ ಐಎಸ್ಐ ಸಹಕಾರ ನೀಡಿದೆ ಎಂದೂ ಅಮ್ರುಲ್ಲಾ ಸಲೇಹ್ ಹೇಳಿದ್ದು, ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸರ್ಕಾರವನ್ನು ತೆಗೆಯುವುದರಲ್ಲಿಯೂ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನದ ಗುಪ್ತಚರ ಇಲಾಖೆ-ಐಎಸ್ಐ ಅಫ್ಘಾನಿಸ್ತಾನವನ್ನು ವಸಾಹತು ಮಾಡಿಕೊಂಡಿದೆ ಎಂದು ಸಲೇಹ್ ಡೈಲಿ ಮೇಲ್ ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಸಾಹತು ಶಕ್ತಿಯಾಗಿದೆ. ಆದರೆ ಅದು ದೀರ್ಘಾವಧಿ ಬಾಳುವುದಿಲ್ಲ. ಪ್ರಾದೇಶಿಕವಾಗಿ ಪಾಕಿಸ್ತಾನಿಯರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಬಹುದು ಆದರೆ ಜನತೆ ಅಥವಾ ಭದ್ರತೆಯ ಮೇಲೆ ನಿಯಂತ್ರಣ ಸಾಧ್ಯತೆ ಇಲ್ಲ ಎಂದು ಸಲೇಹ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಮುಲ್ಲಾ ಬರಾದರ್ ಹಾಗೂ ಹಕ್ಕಾನಿ ನಡುವೆ ಪೈಪೋಟಿ ನಡೆಯುತ್ತಿದೆ.
ಶನಿವಾರವೇ ಬರಾದರ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಬೇಕಿತ್ತು ಆದರೆ, ಈ ಸಂಬಂಧ ಮಾತುಕತೆ ಇನ್ನೂ ಪೂರ್ಣಗೊಳ್ಳದ ಕಾರಣ ಮುಂದಿನ ವಾರ ಸರ್ಕಾರ ಸ್ಥಾಪಿಸುವುದಾಗಿ ತಾಲಿಬಾನ್ ಸ್ಪಷ್ಟಪಡಿಸಿದೆ.
ಹಕ್ಕಾನಿ ಗುಂಪನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ. ಈ ಗುಂಪು ಅತ್ಯಂತ ಸಾಂಪ್ರದಾಯಿಕ ಸುನ್ನಿ ಪಶ್ತೂನ್ ಸರ್ಕಾರ ರಚನೆಯಾಗಬೇಕು ಎಂದು ಹಠ ಹಿಡಿದಿದೆ.
ದೋಹಾ ಶಾಂತಿ ಮಾತುಕತೆಯ ವೇಳೆ ತಾಲಿಬಾನ್ ಸಹ ಸಂಸ್ಥಾಪಕ, ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಕೈಗೊಂಡ ನಿರ್ಣಯದ ವಿರುದ್ದ ಅದು ವ್ಯವಹರಿಸುತ್ತಿದೆ.
ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆಯಬೇಕೆಂದರೆ, ಅಲ್ಪಸಂಖ್ಯಾತರು ಸರ್ಕಾರದ ಭಾಗವಾಗಬೇಕೆಂದು ಬರಾದರ್ ಬಯಸಿದ್ದಾರೆ. ಆದರೆ ಹಕ್ಕಾನಿ ಮುಖ್ಯಸ್ಥ, ತಾಲಿಬಾನ್ ಉಪ ನಾಯಕ ಸಿರಾಜುದ್ದೀನ್ ಹಾಗೂ ಅವರ ಬಂಡಕೋರ ಮಿತ್ರರು ಮಾತ್ರ ಯಾರೊಂದಿಗೂ ಸರ್ಕಾರ ಹಂಚಿಕೊಳ್ಳಲು ಬಯಸುತ್ತಿಲ್ಲ.
ನೂರಕ್ಕೆ ನೂರರಷ್ಟು ತಾಲಿಬಾನ್ ಸರ್ಕಾರ ರಚನೆಯಾಗಬೇಕು ಎಂದು ಹೇಳುತ್ತಿದ್ದಾರೆ. ತಾವು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಫ್ಘಾನ್ ರಾಜಧಾನಿಯ ಮೇಲೆ ತಮ್ಮ ಪ್ರಾಬಲ್ಯವಿದೆ ಹಾಗಾಗಿ ಉಳಿದರವರು ಹಿಂದೆ ಸರಿಯಬೇಕು ಎಂದು ಬರದರ್ ಕೋರಿದ್ದಾರೆ.
ಅಮೆರಿಕಾದ ಸೇನೆ ಆಫ್ಘಾನಿಸ್ತಾನವನ್ನು ತೊರೆದು ಐದು ದಿನಗಳು ಗತಿಸಿದ್ದರೂ ಕೂಡ ತಾಲಿಬಾನ್ ಇನ್ನೂ ಹೊಸ ಸರ್ಕಾರವನ್ನು ರಚಿಸಿಲ್ಲ. ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ನಾಯಕರು ಇದೀಗ ಅಧಿಕಾರ ಹಂಚಿಕೆಗಾಗಿ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಮತ್ತು ಹಕ್ಕಾನಿ ಬಣದ ನಡುವೆ ಶೂಟೌಟ್ ನಡೆದಿದೆ ಎಂದು ವರದಿಯಾಗಿದೆ. ಅಫ್ಘಾನ್ ಪತ್ರಿಕೆ ಪಂಜ್ಶಿರ್ ಅಬ್ಸರ್ವರ್ ಪ್ರಕಾರ, ಅನಸ್ ಹಕ್ಕಾನಿ ಕಡೆಯಿಂದ ಗುಂಡು ಹಾರಿಸಲಾಗಿದ್ದು, ಇದರಲ್ಲಿ ಮುಲ್ಲಾ ಬರಾದರ್ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಪ್ರಸ್ತುತ ಬರಾದರ್ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ. ಆದರೆ, ಸದ್ಯಕ್ಕೆ ಈ ಕುರಿತಾದ ಯಾವುದೇ ಮಾಹಿತಿ ದೃಢಪಟ್ಟಿಲ್ಲ.
ಏತನ್ಮಧ್ಯೆ, ಪಾಕಿಸ್ತಾನವು ತನ್ನ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕಾಬೂಲ್ಗೆ ಕಳುಹಿಸಿದೆ. ಜಗಳವನ್ನು ಇತ್ಯರ್ಥಗೊಳಿಸಲು ಆತನನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.