ಲಡಾಖ್ ಬಳಿ ಪಾಕ್ ಯುದ್ಧ ವಿಮಾನ, ಎದುರಿಸಲು ಭಾರತವೂ ಸಿದ್ಧ
ಶ್ರೀನಗರ, ಆಗಸ್ಟ್ 12: ಸಂವಿಧಾನದ 370 ನೇ ವಿಧಿಯನ್ನು ಭಾರತ ರದ್ದು ಮಾಡಿದ ನಂತರ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಬಿಗುಡಾಯಿಸಿದ್ದು, ಪಾಕಿಸ್ತಾನ ಲಡಾಖ್ ಬಳಿಯ ಸ್ಕರ್ಡು ಪ್ರದೇಶದಲ್ಲಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಪ್ರತಿ ಚಲನವಲನವನ್ನೂ ಭಾರತ ಹದ್ದಿನ ಕಣ್ಣಿಟ್ಟು ವೀಕ್ಷಿಸುತ್ತಿದ್ದು, ಈಗಾಗಲೇ ಗಡಿಯ ಬಳಿ ಪಾಕಿಸ್ತಾನ ಯುದ್ಧ ಸಾಮಾಗ್ರಿಗಳನ್ನು ಕಳಿಸುತ್ತಿದೆ ಎನ್ನಲಾಗಿದೆ.
ಲಷ್ಕರ್, ಜೈಷೆ ಸಂಭಾವ್ಯ ದಾಳಿ, ಕಾಶ್ಮೀರದಲ್ಲೇ ಉಳಿದ ಅಜಿತ್
"ಶನಿವಾರದಂದು ಪಾಕಿಸ್ತಾನಿ ವಾಯುಸೇನೆಗೆ ಸೇರಿದ ಮೂರು ಜೆಎಫ್ -17 ಫೈಟರ್ ಯುದ್ಧ ವಿಮಾನಗಳು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಗೊಂಡ ಲಡಾಖ್ ಗೆ ಮುಖವಾಗಿ ನಿಂತಿವೆ. ಪಾಕಿಸ್ತಾನ ಯಾವುದೇ ರೀತಿಯ ಆತುರದ ಕ್ರಮಕ್ಕೆ ಮುಂದಾದರೆ ಸೂಕ್ತ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಾಗಿದೆ" ಎಂದು ಸರ್ಕಾರ ಹೇಳಿಕೆ ನೀಡಿರುವುದಾಗಿ ಎ ಎನ್ ಐ ನ್ಯೂಸ್ ಏಜೆನ್ಸಿ ತಿಳಿಸಿದೆ.
ಅಮೆರಿಕ ಪೂರೈಸಿದ್ದ C-130 ಟ್ರಾನ್ಸ್ ಪೂರ್ಟ್ ವಿಮಾನದ ಹಳೆಯ ಆವೃತ್ತಿಯನ್ನು ಹೊಂದಿರುವ ಪಾಕಿಸ್ತಾನ, ಜೆಅಫ್ -17 ಫೈಟರ್ ವಿಮಾನಗಳನ್ನು ಸ್ಕರ್ದು ಪ್ರದೇಶದಲ್ಲಿ ನಿಯೋಜನೆ ಮಾಡಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಭಾರತ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.
ಭಾರತದಿಂದಲೂ ಸಂಝೌತ ಎಕ್ಸ್ ಪ್ರೆಸ್ ರೈಲು ಸೇವೆ ರದ್ದು
ಭಾರತದ ಈ ಕ್ರಮದಿಂದಾಗಿ ಉಭಯ ದೇಶಗಳ ನಡುವೆ ಯುದ್ಧದಂಥ ಸನ್ನಿವೇಶ ಏರ್ಪಾಡಾಗಿದ್ದು, ಭಾರತವೂ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ.
ಭಾರತ ಅಮೃತಸರದಿಂದ ಪಾಕಿಸ್ತಾನದ ಲಾಹೋರ್ ಗೆ ಅಟ್ಟಾರಿ ಮತ್ತು ವಾಘಾ ಗಡಿಯಿಂದ ತೆರಳುತ್ತಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನೂ ಉಭಯ ದೇಶಗಳೂ ರದ್ದುಗೊಳಿಸಿವೆ.