ಡೇನಿಯಲ್ ಪರ್ಲ್ ಹತ್ಯೆ: ಆರೋಪಿ ಒಮರ್ ತಕ್ಷಣ ಬಿಡುಗಡೆಗೆ ಪಾಕ್ ಕೋರ್ಟ್ ಆದೇಶ
ಇಸ್ಲಾಮಾಬಾದ್, ಡಿಸೆಂಬರ್ 24: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಒಮರ್ ಸಯೀದ್ ಶೇಖ್ ತಕ್ಷಣದ ಬಿಡುಗಡೆಗೆ ಪಾಕಿಸ್ತಾನದ ನ್ಯಾಯಾಲಯವೊಂದು ಆದೇಶಿಸಿದೆ. ಡೇನಿಯಲ್ ಹತ್ಯೆ ಪ್ರಕರಣವು ಸಯೀದ್ ಶೇಖ್ಗೆ ಯಾವುದೇ ರೀತಿ ಸಂಬಂಧ ಹೊಂದಿಲ್ಲ ಎಂದು ಕೋರ್ಟ್ ಹೇಳಿದೆ.
1999ರಲ್ಲಿ ಕಂದಹಾರ್ ಏರ್ ಇಂಡಿಯಾ ವಿಮಾನ ಅಪಹರಣ ಪ್ರಕರಣದಲ್ಲಿ ಒತ್ತೆಯಾಳುಗಳನ್ನು ಬಿಡಿಸಲು ಭಾರತವು ಬಿಡುಗಡೆ ಮಾಡಿದ ಭಯೋತ್ಪಾದಕರಲ್ಲಿ ಒಮರ್ ಸಯೀದ್ ಶೇಖ್ ಕೂಡ ಒಬ್ಬನಾಗಿದ್ದಾನೆ. ಡೇನಿಯಲ್ ಪರ್ಲ್ ಹತ್ಯೆ ಪ್ರಕರಣದಲ್ಲಿ ಒಮರ್ ಸಯೀದ್ ಶೇಖ್ ಹಾಗೂ ಇತರರ ಬಂಧನದ ಆದೇಶವು ಅನೂರ್ಜಿತ ಮತ್ತು ನಿರರ್ಥಕ ಎಂದು ಸಿಂಧ್ ಹೈಕೋರ್ಟ್ ತಿಳಿಸಿದೆ.
ಭಾರತದೊಂದಿಗೆ ಸದ್ಯಕ್ಕಂತೂ ಮಾತುಕತೆ ಸಾಧ್ಯವಿಲ್ಲ; ಖುರೇಶಿ
ಒಮರ್ ಸಯೀದ್ ಶೇಖ್, ಫಹಾದ್ ನಸೀಮ್, ಶೇಖ್ ಆದಿಲ್ ಮತ್ತು ಸಲ್ಮಾನ್ ಸಾಕಿಬ್ ಅವರ ತಕ್ಷಣದ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ. ಒಮರ್ ಸಯೀದ್ಗೆ ಈ ಮೊದಲು ಮರಣದಂಡನೆ ವಿಧಿಸಲಾಗಿತ್ತು. ಆದರೆ ಅದರ ವಿರುದ್ಧ ಒಮರ್ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಏಳು ವರ್ಷಗಳಿಗೆ ಶಿಕ್ಷೆಯನ್ನು ಇಳಿಸಿತ್ತು. ಒಮರ್ ಇದಕ್ಕಿಂತಲೂ ಹೆಚ್ಚಿನ ಅವಧಿ ಜೈಲಿನಲ್ಲಿ ಕಳೆದಿರುವುದರಿಂದ ಆತ ಈಗ ಶಿಕ್ಷೆಯಿಂದ ಮುಕ್ತನಾಗಿದ್ದಾನೆ.
ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥರಾಗಿದ್ದ 38 ವರ್ಷದ ಡೇನಿಯಲ್ ಪರ್ಲ್ ಅವರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಅಲ್ ಖೈದಾ ಸಂಘಟನೆ ನಡುವೆ ಇರುವ ಸಂಬಂಧದ ಬಗ್ಗೆ ತನಿಖಾ ವರದಿ ಬರೆಯಲು 2002ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಅವರನ್ನು ಅಪಹರಿಸಿ ಶಿರಚ್ಛೇದ ಮಾಡಲಾಗಿತ್ತು.
ಕೆನಡಾದಲ್ಲಿ ಕರೀಮಾ ಬಲೂಚ್ ನಿಗೂಢ ಸಾವು: ಯಾರಿದು ಬಲೂಚಿಸ್ತಾನ ಹೋರಾಟಗಾರ್ತಿ?
ಬ್ರಿಟನ್ನಲ್ಲಿ ಜನಿಸಿದ ಅಲ್ಕೈದಾ ಮುಖಂಡ ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಆತನ ಮೂವರು ಸಹಚರರನ್ನು ಈ ಪ್ರಕರಣದಲ್ಲಿ ಬಂಧಿಸಿ ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿತ್ತು.