ಪಾಕಿಸ್ತಾನದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕೆ ಅಡ್ಡಿ ಆತಂಕ ದೂರ
ಇಸ್ಲಾಮಾಬಾದ್, ಜುಲೈ 09: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಹಿಂದೂ ದೇಗುಲ ನಿರ್ಮಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ಇಲ್ಲಿನ ನ್ಯಾಯಾಲಯವೊಂದು ತಳ್ಳಿ ಹಾಕಿದೆ. ಆದರೆ, ದೇಗುಲ ನಿರ್ಮಾಣಕ್ಕೆ ಇದ್ದ ಅಡ್ಡಿ ದೂರಾಗಿದೆ ಎನ್ನುವಷ್ಟರಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಉನ್ನತಮಟ್ಟದ ಸಮಿತಿಗೆ ಸರ್ಕಾರ ಸೂಚಿಸಿದೆ.
Recommended Video
ದೇಗುಲ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಅಮೀರ್ ಫಾರೂಕ್ ಅವರನ್ನೊಳಗೊಂಡ ಏಕ ಸದಸ್ಯ ಇಸ್ಲಾಮಾಬಾದ್ ಹೈಕೋರ್ಟ್ ಪೀಠವು ಅರ್ಜಿಗಳನ್ನು ತಳ್ಳಿ ಹಾಕಿದೆ. ಹಿಂದೂ ಪಂಚಾಯತ್ ತನ್ನ ಸ್ವಂತ ಹಣದಿಂದ ದೇವಾಲಯ ಕಟ್ಟಲು ಯಾವುದೇ ಅಡ್ಡಿಇಲ್ಲ ಎಂದು ತಿಳಿಸಿದೆ.
ಪಾಕ್ ಹಿಂದೂ ದೇಗುಲ ಧ್ವಂಸಕ್ಕೆ ಕೋರ್ಟ್ ತಡೆ
ರಾಜಧಾನಿಯ ಎಚ್ - 9 ಆಡಳಿತ ವಿಭಾಗದಲ್ಲಿ 20 ಸಾವಿರ ಚದರಡಿ(ಸುಮಾರು 0.5 ಎಕರೆ) ಜಾಗದಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್ ಚಂದ್ ಮಾಲ್ಹಿ ಅವರು ಇತ್ತೀಚೆಗೆ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಪಿಎಂಎಲ್ - ಕ್ಯೂ ಪಕ್ಷ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿ, ದೇವಾಲಯ ನಿರ್ಮಿಸುವುದು ಇಸ್ಲಾಂ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದೆ. 2017ರಲ್ಲೇ ಈ ಜಾಗದಲ್ಲಿ ಧಾರ್ಮಿಕ ಕೇಂದ್ರ ನಿರ್ಮಾಣಕ್ಕಾಗಿ ಜಾಗ ಮಂಜೂರಾಗಿದೆ. ಸಾರ್ವಜನಿಕರ ಹಣ ಬಳಸದೆ ದೇಗುಲ ನಿರ್ಮಿಸಬಹುದು ಎಂದು ಸಚಿವ ಬಷೀರ್ ಹೇಳಿದ್ದಾರೆ. 220 ಮಿಲಿಯನ್ ಜನಸಂಖ್ಯೆಯುಳ್ಳ ಪಾಕಿಸ್ತಾನದಲ್ಲಿ 3.5 ಮಿಲಿಯನ್ ಅಥವಾ ಶೇ 1.6 ರಷ್ಟು ಮಾತ್ರ ಹಿಂದುಗಳಿದ್ದು, ಸಿಖ್, ಕೈಸ್ತರ ಜೊತೆ ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆಲೆ ನೀಡಲಾಗುವುದು ದೇಶದ ಎಲ್ಲಾ ನಾಗರಿಕರನ್ನು ಸಮಾನ ದೃಷ್ಟಿಯಿಂದ ಕಾಣಲಾಗುತ್ತಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.