ಅಕ್ಟೋಬರ್ ನಲ್ಲಿ ಭಾರತ-ಪಾಕಿಸ್ತಾನ ಮಹಾಯುದ್ಧ, ಪಾಕ್ ಸಚಿವ ನುಡಿದ ಭವಿಷ್ಯ
ಇಸ್ಲಾಮಾಬಾದ್, ಆಗಸ್ಟ್ 28: "ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯಲಿದೆ" ಎಂದು ಪಾಕಿಸ್ತಾನ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಭವಿಷ್ಯ ನುಡಿದಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
"ಉಭಯ ದೇಶಗಳ ನಡುವೆ ಈಗಿರುವ ಪರಿಸ್ಥಿತಿಯನ್ನು ನೋಡಿದರೆ ಅಕ್ಟೋಬರ್ ಹೊತ್ತಿಗೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕೆ ಪಾಕಿಸ್ತಾನ ಸಿದ್ಧವಾಗಿದೆ" ಎಂದು ಶೇಖ್ ರಶೀದ್ ಹೇಳಿದ್ದಾರೆ.
ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ: ಅಬ್ಬರಿಸಿದ ಇಮ್ರಾನ್ ಖಾನ್
ಮಂಗಳವಾರ ನಡೆದ ಪಾಕ್ ಸಚಿವ ಸಂಪುಟ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಾಯು ಮಾರ್ಗಗಳನ್ನೂ ಮುಚ್ಚುವ ಬಗ್ಗೆ ಇಮ್ರಾನ್ ಖಾನ್ ಉಲ್ಲೇಖಿಸಿದ್ದರು. ಜೊತೆಗೆ ಕೇವಲ ವಾಯುಮಾರ್ಗ ಮಾತ್ರವಲ್ಲದೆ, ಭಾರತದಿಂದ ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ತೆರಳುವ ಭೂ ಮಾರ್ಗವನ್ನೂ ಮುಚ್ಚುವ ಬಗ್ಗೆ ಇಮ್ರಾನ ಖಾನ್ ಯೋಚಿಸುತ್ತಿದ್ದಾರೆ ಎಂದು ಪಾಕ್ ಸಚಿವ ಫವಾದ್ ಹುಸೇನ್ ಹೇಳಿದ್ದರು.
"ಮೋದಿ ಆರಂಭಿಸಿದ್ದಾರೆ, ನಾವು ಮುಗಿಸುತ್ತೇವೆ" ಎನ್ನುವ ಮೂಲಕ ಯುದ್ಧದ ಸೂಚನೆ ನೀಡಿದ್ದರು.
ಇತ್ತೀಚೆಗಷ್ಟೇ ಪಾಕಿಸ್ತಾನಿ ಟಿವಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, "ಪಾಕಿಸ್ತಾನ ಯಾವತ್ತೂ ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದೆ. ಆದರೆ ಭಾರತ ನಮ್ಮನ್ನು ದಿವಾಳಿ ಮಾಡಲು ಯತ್ನಿಸುತ್ತಿದೆ. ಎಷ್ಟೋ ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಸನ್ನಿಹಿತವಾಗಿದೆ" ಎಂದು ಇಮ್ರಾನ್ ಖಾನ್ ಹೇಳಿದ್ದರು.
ಮೋದಿ ಶುರು ಮಾಡಿದರು, ನಾವು ಮುಗಿಸುತ್ತೇವೆ: ಪಾಕಿಸ್ತಾನ
'ಎರಡೂ ರಾಷ್ತ್ರಗಳ ಬಳಿ ಅಣ್ವಸ್ತ್ರವಿದೆ ಎಂಬುದು ನೆನಪಿರಲಿ. ಅಣುಯುದ್ಧದಲ್ಲಿ ಯಾವ ರಾಷ್ಟ್ರವೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ' ಎಂದು ಇಮ್ರಾನ್ ಖಾನ್ ಹೇಳಿದ್ದರು.