ಈದ್ ಸಂಭ್ರಮ ಬೇಡ, ಕಾಶ್ಮೀರಕ್ಕಾಗಿ ಹೋರಾಡಿ: ಪಾಕ್ ಸರ್ಕಾರ
ಇಸ್ಲಾಮಾಬಾದ್, ಆಗಸ್ಟ್ 12: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಿದ್ದು, ಈದ್ ಆಚರಣೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದೆ, ಕಾಶ್ಮೀರಕ್ಕಾಗಿ ಒಂದಾಗುವಂಥ ಕಾರ್ಯಕ್ರಮ ಬಿತ್ತರಿಸುವಂತೆ ಪಾಕ್ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಹೇಳಿದೆ.
ಹಬ್ಬದ ನಿಮಿತ್ತ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಬೇಡ. ಕಾಶ್ಮೀರಕ್ಕಾಗಿ ನಾವೆಲ್ಲರೂ ಒಂದಾಗುವಂಥ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಎಂದು ಅದು ಮಾಧ್ಯಮಕ್ಕೆ ಹೇಳಿದೆ.
ಆದ್ದರಿಂದ ಪಾಕಿಸ್ತಾನದಾದ್ಯಂತ ಈದ್ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇಂಥ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರಿಂದ ಕಾಶ್ಮೀರದ ಜನರ ಭಾವನೆಗೆ ನೋವುಂಟು ಮಾಡಿದಂತಾಗುತ್ತದೆ ಎಂದು ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ!
ಅಷ್ಟೇ ಅಲ್ಲ, ಆಗಸ್ಟ್ 14 ರಂದು ಪಾಕಿಸ್ತಾನಿ ಸ್ವಾತಂತ್ರ್ಯ ದಿನವನ್ನು "ಒಗ್ಗಟ್ಟಿನ ದಿನ" ಎಂದು ಆಚರಿಸಲು ನಿರ್ಧರಿಸಲಾಗಿದೆ. ಇವೆಲ್ಲವೂ ಕಾಶ್ಮೀರಿಗಳಿಗಾಗಿ ಎಂದು ಪಾಕಿಸ್ತಾನ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಭಾರತದ ನಡೆಯಿಂದ ಆಘಾತ ಅನುಭವಿಸಿದ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ದೂರಿತ್ತು.