ಸೆ. 2ರಂದು ಕುಲಭೂಷಣ್ ಜಾಧವ್ ದೂತಾವಾಸ ಸಂಪರ್ಕಕ್ಕೆ ಪಾಕ್ ಒಪ್ಪಿಗೆ
ಇಸ್ಲಾಮಾಬಾದ್ (ಪಾಕಿಸ್ತಾನ), ಸೆಪ್ಟೆಂಬರ್ 1: ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿ ಆಗಿದ್ದ ಭಾರತದ ನೌಕಾ ಸೇನೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗೆ ಸೆಪ್ಟೆಂಬರ್ ಎರಡನೇ ತಾರೀಕಿನಂದು ದೂತಾವಾಸ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ವಿದೇಶಾಂಗ ಕಚೇರಿಯ ವಕ್ತಾರ ಮೊಹ್ಮದ್ ಫೈಸಲ್ ಭಾನುವಾರ ಮಾತನಾಡಿ, ದೂತಾವಾಸ ಸಂಪರ್ಕಕ್ಕೆ ಪಾಕಿಸ್ತಾನ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.
ಕುಲಭೂಷಣ್ ಜಾಧವ್ ತೀರ್ಪು ಏನೇನೋ ಅಂದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ
ದೂತಾವಾಸ ಸಂಬಂಧಕ್ಕೆ ವಿಯೆನ್ನಾ ಒಪ್ಪಂದದಲ್ಲಿ ಇರುವ ಅಂಶಗಳ ಪ್ರಕಾರ, ಅಂತರ ರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹಾಗೂ ಪಾಕಿಸ್ತಾನದ ಕಾನೂನು ಪ್ರಕಾರ ನಲವತ್ತೊಂಬತ್ತು ವಯಸ್ಸಿನ ಕುಲಭೂಷಣ್ ಜಾಧವ್ ರಿಗೆ ದೂತಾವಾಸ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಕುಲಭೂಷಣ್ ಜಾಧವ್ ಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ ಈ ವಾದವನ್ನು ನಿರಾಕರಿಸುತ್ತಾ ಬಂದಿರುವ ಭಾರತ, ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರು ಇರಾನ್ ನಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಅಲ್ಲಿಂದ ಅವರನ್ನು ಅಪಹರಿಸಿದ ಪಾಕಿಸ್ತಾನ, ಸುಳ್ಳು ಆರೋಪ ಹೊರೆಸಿ, ಮರಣದಂಡನೆ ವಿಧಿಸಿದೆ ಎಂದು ಹೇಳುತ್ತಾ ಬಂದಿದೆ.