ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು
ನವದೆಹಲಿ, ಏ.2: ಯುದ್ಧಪೀಡಿತ ಯೆಮನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ರಕ್ಷಿಸಿ, ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ 22 ಕನ್ನಡಿಗರೂ ಒಟ್ಟು ಸೇರಿದಂತೆ 350 ಜನರನ್ನು ಭಾರತಕ್ಕೆ ಕರೆತರಲಾಗಿದೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿರುವ ಕೇಂದ್ರ ಸರ್ಕಾರ ಮೊದಲ ಹಂತದ ಕಾರ್ಯಾಚರಣೆ ನಡೆಸಿದೆ. ಮಂಗಳವಾರ ತಡರಾತ್ರಿ ಯೆಮನ್ನ ಏಡನ್ ನಗರದ ಸಮೀಪ 349 ಭಾರತೀಯರನ್ನು ರಕ್ಷಿಸಲಾಗಿತ್ತು.[ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರು]
ನಂತರ ರಕ್ಷಣೆ ಮಾಡಿದವರನ್ನು ಪಕ್ಕದ ಜಿಬೌಟಿಗೆ ಕರೆತರಕಲಾಯಿತು. ಸಂತ್ರಸ್ತರ ಜತೆ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಸಮಾಲೋಚನೆ ನಡೆಸಿದರು. ಬಳಿಕ 349 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಬುಧವಾರ ರಾತ್ರಿ ಭಾರತಕ್ಕೆ ಬಂದಿಳಿದವು.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ, ರಕ್ಷಣೆ ಮಾಡಿದವರಲ್ಲಿ 206 ಜನ ಕೇರಳದವರು, ತಮಿಳುನಾಡಿನ 40, ಮಹಾರಾಷ್ಟ್ರದ 31, ಪಶ್ಚಿಮ ಬಂಗಾಳದ 23, ದೆಹಲಿಯ 22 ಜನ ಸೇರಿದಂತೆ ವಿವಿಧ ರಾಜ್ಯದ ಜನರಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ತಿಳಿಸಿದರು. [ರಕ್ಷಣಾ ಕಾರ್ಯದ ಮತ್ತಷ್ಟು ಚಿತ್ರಗಳು]
190 ಜನರನ್ನು ಮುಂಬೈಗೆ ಮತ್ತು 170 ಜನರ ಮತ್ತೊಂದು ತಂಡವನ್ನು ಕೊಚ್ಚಿಗೆ ಕರೆತರಲಾಯಿತು. 1 ವಿಮಾನ ಬುಧವಾರ ರಾತ್ರಿ 2 ಗಂಟೆ ಸುಮಾರಿಗೆ ಕೊಚ್ಚಿ ತಲುಪಿದರೆ, ಮತ್ತೊಂದು ವಿಮಾನ ಬುಧವಾರ ರಾತ್ರಿ 3.25ರ ಸುಮಾರಿಗೆ ಮುಂಬೈ ತಲುಪಿತು.[ಭಾರತೀಯರ ರಕ್ಷಣೆ ವಿಡಿಯೋ ನೋಡಿ]
ಈ ನಡುವೆ ಯೆಮನ್ನಿಂದ ಭಾರತೀಯರನ್ನು ಕರೆತರಲು ಕೊಚ್ಚಿಯಿಂದ ತೆರಳಿರುವ ಎರಡು ಪ್ರಯಾಣಿಕ ಹಡಗುಗಳಿಗೆ ಕಡಲ್ಗಳ್ಳರ ಹಾವಳಿ ಇರುವ ಸೋಮಾಲಿಯಾ ಕರಾವಳಿಯಲ್ಲಿ ರಕ್ಷಣೆ ಒದಗಿಸಲು ಮುಂಬೈನಿಂದ ಎರಡು ನೌಕೆಗಳನ್ನು ಕೂಡ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ.