ಕೊರೊನಾ ಹೊಡೆತ: ಭಾರತದಲ್ಲಿ ಮುಂದಿನ ಮೂರು ತಿಂಗಳಲ್ಲಿ 3 ಲಕ್ಷ ಮಕ್ಕಳ ಸಾವು!
ಜಿನಿವಾ, ಮೇ 14: ಕೊರೊನಾ ಲಾಕ್ಡೌನ್ ಪರಿಣಾಮಗಳು ಒಂದೋಂದೆ ಇವಾಗ ಬಿಚ್ಚಿಕೊಳ್ಳುತ್ತಿವೆ. ಅದರಲ್ಲೂ The United Nations Children's Fund (UNICEF) ಹೇಳಿರುವ ಮಕ್ಕಳ ಕುರಿತಾದ ಸಂಗತಿ ಭಯಾನಕವಾಗಿದೆ.
ಲಾಕ್ಡೌನ್ ಪರಿಣಾಮವಾಗಿ ವಿವಿಧ ಕಾರಣಗಳಿಂದ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ 3 ಲಕ್ಷ ಮಕ್ಕಳು ಸಾಯಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. UNICEF ಸಾರ್ವಜನಿಕ ಪ್ರಕಟಣೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.
ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಅಲ್ಲದೇ, ದಕ್ಷಿಣ ಏಷಿಯಾ ದೇಶಗಳು ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಆರು ತಿಂಗಳಲ್ಲಿ ದಕ್ಷಿಣ ಏಷ್ಯಾದಲ್ಲಿ 4,40,000 ಮಕ್ಕಳು ಪ್ರಾಣ ಬಿಡಬಹುದು ಎಂದು ಅಂದಾಜಿಸಿದೆ. ಇದರಿಂದ ಲಾಕ್ಡೌನ್ ಕರಾಳತೆ ಇನ್ನಷ್ಟೇ ತೆರದುಕೊಳ್ಳಲಿದೆಯೇ ಎನ್ನುವ ಸಂಶಯ ಕಾಡುತ್ತಿದೆ.
ಪ್ರತಿದಿನ 2,400 ಮಕ್ಕಳು ಸಾವು
" ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಮುಂದಿನ ಆರು ತಿಂಗಳಲ್ಲಿ ಲಾಕ್ಡೌನ್ ನಂತರದ ಪರಿಣಾಮಗಳಿಂದ 2,400 ಮಕ್ಕಳು ಪ್ರತಿದಿನ ಸಾಯುವ ಸಾಧ್ಯತೆಯಿದೆ, ಏಕೆಂದರೆ ಕೊರೊನಾ ವೈರಸ್ ಪಿಡಗು ಆಯಾ ದೇಶಗಳ ಆರೋಗ್ಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ದಿನನಿತ್ಯದ ತುರ್ತು ಸೇವೆಗಳಿಗೆ ಅಡ್ಡಿಪಡಿಸುತ್ತಿದೆ" ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್
''UNICEF ನ ಈ ಸೂಚನೆ ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಶೋಧಕರ ವಿಶ್ಲೇಷಣೆಯನ್ನು ಆಧರಿಸಿದೆ. ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ 3,00,000, ಪಾಕಿಸ್ತಾನದಲ್ಲಿ 95,000 ಮಕ್ಕಳು, ಬಾಂಗ್ಲಾದೇಶದಲ್ಲಿ 28,000, ಅಫ್ಘಾನಿಸ್ತಾನದಲ್ಲಿ 13,000, ನೇಪಾಳದಲ್ಲಿ 4,000 ಮಕ್ಕಳು ಸಾಯಬಹುದು ಎಂದು ವಿಶ್ಲೇಷಣೆ ಸೂಚಿಸಿದೆ'' ಎಂದು UNICEF ಎಚ್ಚರಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂತು ಮತ್ತೊಂದು ಎಚ್ಚರಿಕೆ ಸಂದೇಶ
ಆರೋಗ್ಯ ಸೇವೆಗಳು ಈಗಾಗಲೇ ಮಂದಗತಿಯಲ್ಲಿವೆ
''ದಕ್ಷಿಣ ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಆರೋಗ್ಯ ಸೇವೆಗಳು ಈಗಾಗಲೇ ಮಂದಗತಿಯಲ್ಲಿವೆ. ಕೊರೊನಾ ಲಾಕ್ಡೌನ್ ಹಾವಳಿಯಿಂದ ವೈದ್ಯಕೀಯ ಸರಬರಾಜು ವ್ಯವಸ್ಥೆಯ ಅಡೆತಡೆಗಳು, ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳಿಗೆ ತೊಂದರೆಯಾಗುವುದರಿಂದ ಮಕ್ಕಳ ಹಾಗೂ ಬಾಣಂತಿಯರ ರಕ್ಷಣೆಯ ಮೇಲೆ ಮತ್ತಷ್ಟು ಹೊಡೆತ ಬೀಳಬಹುದು'' ಎಂದು ಎಚ್ಚರಿಸಿದೆ.
ಪೌಷ್ಠಿಕಾಂಶದ ಸೇವೆಗಳು ಲಭ್ಯವಿರುವುದು ಬಹಳ ಮುಖ್ಯ
"ಬಿಕ್ಕಟ್ಟಿನ ಈ ಅವಧಿಯಲ್ಲಿ ಕುಟುಂಬಗಳಿಗೆ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಸೇವೆಗಳು ಲಭ್ಯವಿರುವುದು ಬಹಳ ಮುಖ್ಯ" ಎಂದು ದಕ್ಷಿಣ ಏಷ್ಯಾದ ಯುನಿಸೆಫ್ ಪ್ರಾದೇಶಿಕ ಆರೋಗ್ಯ ಸಲಹೆಗಾರ ಪಾಲ್ ರಟ್ಟರ್ ಹೇಳಿದ್ದಾರೆ. ನಾವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬಹುದು. ಆದರೆ, ಈ ಹಂತದಲ್ಲಿ ಸರ್ಕಾರಗಳು ಮಕ್ಕಳ, ಬಾಣಂತಿಯರ ರಕ್ಷಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.