ಮಾನವೀಯತೆ ಮೆರೆದ ಒನ್ಇಂಡಿಯಾ ಓದುಗರು!
ಶಾರ್ಜಾ, ಸೆ. 12 : ಇದನ್ನು ಮಾನವೀಯತೆಯಾದರೂ ಅನ್ನಿ, ಪವಾಡವಾದರೂ ಅನ್ನಿ. ಜೈಲು ಸೇರಿ, ಹೆಂಡತಿ ಮಕ್ಕಳಿಂದ ದೂರವಾಗಿ ಪಡಬಾರದ ಕಷ್ಟ ಪಡುತ್ತಿದ್ದ ಸತೀಶ್ ಎಂಬ ತಮಿಳುನಾಡಿನ ವ್ಯಕ್ತಿ ವಿದೇಶಿ ನೆಲದಲ್ಲಿ ತಾನು ಮತ್ತೆ ಕುಟುಂಬದೊಂದಿಗೆ ಸೇರುತ್ತೇನೆಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಆದರೆ ಸತೀಶ ತನ್ನ ಹೆಂಡತಿ ಸುಂದರಿ ಮತ್ತು ಮಕ್ಕಳೊಂದಿಗೆ ಸೇರಲು ಸಾಧ್ಯವಾಗಿದ್ದು ಒನ್ಇಂಡಿಯಾ ಓದುಗರಿಂದ.
ಅಚ್ಚರಿಯೆಂದರೆ, ಜೈಲು ಸೇರಿದ್ದ ಸತೀಶ, ಜನರು ನೀಡಿದ ಹಣದ ಸಹಾಯದಿಂದ ಜೈಲಿಂದ ಹೊರಬಂದು ಹೆಂಡತಿ ಮಕ್ಕಳನ್ನು ಸೇರುವಲ್ಲಿ ಶಾರ್ಜಾದಲ್ಲಿರುವ ಕನ್ನಡಿಗರ ಕೈವಾಡವೂ ಇದೆ. 'ಬೆಂಗಳೂರು' ಎಂಬ ಹೆಸರಿನ ಹೋಟೆಲ್ ನಡೆಸುತ್ತಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು, ಯಾವುದೇ ಹಣದ ಅಪೇಕ್ಷೆಯಿಲ್ಲದೆ ಸತೀಶನ ಕುಟುಂಬಕ್ಕೆ ಉಚಿತವಾಗಿ ಊಟೋಪಚಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನಡೆದಿದ್ದೇನು? : ಮಾಲಿಕನ ತಪ್ಪಿನಿಂದಾಗಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ತಂಜಾವೂರಿನ ಸತೀಶ ಜೈಲು ಸೇರಬೇಕಾಯಿತು. ಶಾರ್ಜಾದಲ್ಲಿ ವಾಹನ ಚಾಲಕನಾಗಿರುವ ಸತೀಶನ ಹೆಂಡತಿ ಸುಂದರಿ ಮತ್ತು ಮೂವರು ಚಿಕ್ಕ ಮಕ್ಕಳು ಹಣವಿಲ್ಲದೆ ಕಂಗಾಲಾದರು. ಆಗ ಒನ್ಇಂಡಿಯಾ ತಮಿಳು ಪೋರ್ಟಲ್ ಪ್ರಕಟಿಸಿದ ಈ ಲೇಖನ ಓದಿ ನೆರವಿನ ಪ್ರವಾಹವೇ ಹರಿದುಬಂದಿತು.
ಮಂಗಳೂರಿನ ಹೋಟೆಲ್ ಮಾಲಿಕರು ಆಹಾರವನ್ನು ಸತೀಶನ ಕುಟುಂಬಕ್ಕೆ ಒದಗಿಸಿದರೆ, ಇತರರು ಹಣದ ಸಹಾಯಹಸ್ತ ಚಾಚಿದರು. ಮೊಹಮ್ಮದ್ ಆಳ್ವಿ ಎಂಬ ವಕೀಲರು ಮುಂದೆ ಬಂದು ಸತೀಶನನ್ನು ಜೈಲಿನಿಂದ ಬಿಡಿಸುವಲ್ಲಿ ಸಫಲರಾದರು. ಸತೀಶ್ ಮತ್ತು ಆತನ ಕುಟುಂಬದ ಪರಿಸ್ಥಿತಿ ಅರಿತಿದ್ದ ವಕೀಲರು ಸತೀಶನಿಂದ ಬಿಡಿಕಾಸನ್ನೂ ಪಡೆಯಲಿಲ್ಲ.
ಜೈಲಿನಿಂದ ಹೊರಬಂದು ಕುಟುಂಬವನ್ನು ಸೇರಿಕೊಂಡಾಗ ಸತೀಶನ ಕಣ್ಣೀರು ಕಟ್ಟೆಯೊಡೆದಿತ್ತು. ಸಹಾಯಹಸ್ತ ಚಾಚಿತ ಎಲ್ಲ 'ಅಪರಿಚಿತ' ಬಂಧುಗಳಿಗೆ ಅವರು ಕೃತಜ್ಞತೆ ಅರ್ಪಿಸಿದರು ಮತ್ತು ಒನ್ಇಂಡಿಯಾ ಸಹಾಯವನ್ನು ನೆನೆಯಲು ಮರೆಯಲಿಲ್ಲ. ನಂತರ ಒನ್ಇಂಡಿಯಾ ಓದುಗರು ಕೂಡ ವಕೀಲ ಆಳ್ವಿಯನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದರು.
ವ್ಯಾನ್ ಡ್ರೈವರ್ ಆಗಿರುವ ಸತೀಶ್ ಅವರ ಕುಟುಂಬಕ್ಕೆ ಈಗಲೂ ನೆರವಿನ ಅಗತ್ಯವಿದೆ. ಸಹಾಯಮಾಡಲಿಚ್ಛಿಸುವವರು 055 53 89 276 / 050 52 72 691 ಸಂಖ್ಯೆಗೆ ಕರೆ ಮಾಡಿ ನೆರವು ನೀಡಬಹುದು. ಈ ಸಂದರ್ಭದಲ್ಲಿ ಸತೀಶ್ ಗೆ ನೆರವು ನೀಡಿದ ಎಲ್ಲ ಓದುಗರಿಗೆ ಒನ್ಇಂಡಿಯಾ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಇಡೀ ಜಗತ್ತಿನಲ್ಲಿ ಸಾಮೂಹಿಕ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಕೆಮಿಕಲ್ ಯುದ್ಧ, ಹೊಲಸು ರಾಜಕೀಯದಾಟವೇ ತುಂಬಿರುವಾಗ, ಮಾನವೀಯತೆಯನ್ನು ಮೆರೆಸುವಂಥ ಇಂಥ ಸುದ್ದಿಗಳು ನಿಜಕ್ಕೂ ಹೃದಯವನ್ನು ತಟ್ಟುತ್ತವೆ. ಮಾನವೀಯತೆಗೆ ಜಗತ್ತಿನಲ್ಲಿ ಇನ್ನೂ ಸ್ಥಾನವಿದೆ ಎಂಬ ಸಂದೇಶವನ್ನು ಸಾರುತ್ತದೆ.