ನದಿ ನೀರು ಹಂಚಿಕೆ ನಿಲ್ಲಿಸಿದರೂ ಅಡ್ಡಿಯಿಲ್ಲ : ಪಾಕಿಸ್ತಾನದ ಉದ್ಧಟತನ
ಇಸ್ಲಾಮಾಬಾದ್, ಫೆಬ್ರವರಿ 22: ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಳ್ಳಲು ನದಿ ನೀರು ಹರಿಯುವುದನ್ನು ಬಂದ್ ಮಾಡಲು ಭಾರತ ಮುಂದಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ದೊಡ್ಡ ಬಾಂಬ್ ಸಿಡಿಸಿದ್ದರು. ಇದಕ್ಕೆ ಪಾಕಿಸ್ತಾನದಿಂದ ದುರಹಂಕಾರದಿಂದ ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಖವಾಜಾ ಶುಮೈಲ್ ಅವರು ಡಾನ್ ಪತ್ರಿಕೆ ಜತೆ ಮಾತನಾಡಿ, ನದಿ ನೀರು ಹಂಚಿಕೆ ನಿಲ್ಲಿಸಲು ಭಾರತ ಮುಂದಾಗಿರುವ ಸುದ್ದಿಯಿದೆ. ನಾವು ಈ ಭಾರತದ ನಿರ್ಣಯವನ್ನು ಪ್ರತಿರೋಧಿಸುವುದಿಲ್ಲ ಹಾಗೂ ನಮಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಪೂರ್ವ ನದಿಗಳ ನೀರು ಹಂಚಿಕೆ ಕುರಿತಂತೆ ಸಿಂಧು ನದಿ ಒಪ್ಪಂದಕ್ಕೆ ನಾವು ಬದ್ಧವಾಗಿದ್ದೇವೆ' ಎಂದಿದ್ದಾರೆ.
ಪುಲ್ವಾಮಾ ದಾಳಿ ಪರಿಣಾಮ: ಪಾಕಿಸ್ತಾನದ ಮೇಲೆ 'ಜಲ ಬಾಂಬ್'
ಆದರೆ, ಒಂದು ವೇಳೆ ಪಶ್ಚಿಮ ನದಿಗಳಾದ ಛೆನಾಬ್, ಸಿಂಧು, ಝೇಲಂ ನದಿಗಳ ತಂಟೆಗೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರದಾಳಿ
ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೊರ ಹೆದ್ದಾರಿಯಲ್ಲಿ 78ಕ್ಕೂ ಅಧಿಕ ಸೇನಾ ವಾಹನಗಳಲ್ಲಿ 2473ಕ್ಕೂ ಅಧಿಕ ಸೇನಾ ಸಿಬ್ಬಂದಿ ತೆರಳುವಾಗ ಪಾಕಿಸ್ತಾನ ಬೆಂಬಲಿತ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ದಾಳಿ ನಡೆಸಿದ. ಸೇನಾ ವಾಹನಕ್ಕೆ ಸ್ಫೋಟಕ ತುಂಬಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೋದಿಗೆ ಬತ್ತಿದ ಸರಸ್ವತಿ ನದಿ ಉಕ್ಕುವಂತೆ ಮಾಡುವಾಸೆ
ಪೂರ್ವ ನದಿಗಳ ಶೇ 6 ರಷ್ಟು ಪಾಲು ಪಾಕಿಸ್ತಾನಕ್ಕೆ
ಕಣಿವೆ ರಾಜ್ಯದ ಪ್ರಮುಖ ನದಿಗಳ ಪೈಕಿ ಸಟ್ಲೇಜ್, ಬೀಯಸ್, ರಾವಿ ಸಂಪೂರ್ಣವಾಗಿ ಭಾರತದ ಪಾಲಿಗೆ ದಕ್ಕಿದರೆ, ಝೇಲಂ ಹಾಗೂ ಇಂಡಸ್(ಸಿಂಧು) ಪಾಕಿಸ್ತಾನಕ್ಕೆ ಸಿಗಲಿದೆ. ಶೇ 94ರಷ್ಟು ಜಲ ಸಂಪತ್ತು ಭಾರತದಲ್ಲಿ ಬಳಕೆಯಾದರೆ, ಮಿಕ್ಕ ಪಾಲು ಪಾಕಿಸ್ತಾನಕ್ಕೆ ಹರಿಯಲಿದೆ. ಪಂಜಾಬಿನಲ್ಲಿ ಶಹಾಪುರ್ ಕಂಡಿ ಅಣೆಕಟ್ಟು, ಸಟ್ಲೇಜ್ ಬೀಯಸ್ ಯೋಜನೆ ಹಾಗೂ ಊಜ್ ಅಣೆಕಟ್ಟು ಈ ಪ್ರದೇಶದ ಪ್ರಮುಖ ಯೋಜನೆಗಳಾಗಿವೆ.
ನದಿ ನೀರು ಯೋಜನೆಗಳಿಗೂ ಅಡ್ಡಿ ಪಡಿಸಿದ್ದ ಪಾಕಿಸ್ತಾನ
ಝೇಲಂ ಮತ್ತು ಚೆನಬ್ ನದಿ ವ್ಯಾಪ್ತಿಯ ಕಿಶನ್ ಗಂಗಾ ಹಾಗೂ ರಾಟ್ಲೆಯಲ್ಲಿ ಯೋಜನೆಗೆ ಅನುಮತಿ ಸಿಕ್ಕಿದೆ. ಯೋಜನೆಯನ್ನು ಪಾಕಿಸ್ತಾನ ವಿರೋಧಿಸುತ್ತಾ ಬಂದಿತ್ತು. ಕಿಶನ್ಗಂಗಾದಲ್ಲಿ 330 ಮೆಗಾವಾಟ್ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿರುವ ಭಾರತಕ್ಕೆ ಷರತ್ತುಬದ್ಧ ಅನುಮತಿಯನ್ನು ವಿಶ್ವಬ್ಯಾಂಕ್ ನೀಡಿದ್ದರಿಂದ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ.
1960ರ ಸಿಂಧೂ ಜಲ ಒಪ್ಪಂದ
ಸಿಂಧೂ ಜಲ ಒಪ್ಪಂದಕ್ಕೆ ಧಕ್ಕೆಯಾಗಲಿದೆ ಸಿಂಧೂ ಜಲ ಒಪ್ಪಂದ(1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಯಿತು) ಅನ್ವಯ ಝೇಲಂ ಹಾಗೂ ಚೆನಾಬ್ ಎರಡು ನದಿಗಳನ್ನು 'ಪಶ್ಚಿಮದ ನದಿಗಳು' ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ನದಿಗಳ ನೀರನ್ನು ಪಾಕಿಸ್ತಾನ ಸಹ ಯಾವುದೇ ಷರತ್ತುಗಳು ಇಲ್ಲದೆ ಬಳಸಬಹುದು. ಆದ್ದರಿಂದ ಎರಡು ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.