ಸರ್ವಾಧಿಕಾರಿ ನಾಡಲ್ಲಿ ಪ್ರಜೆಗಳಿಗೆ ತಿನ್ನಲು ತುತ್ತು ಅನ್ನ ಸಿಗುತ್ತಿಲ್ಲ, ಯಾಕೆ ಗೊತ್ತಾ..?
ಅಬ್ಬಬ್ಬಾ.. ನ್ಯೂಕ್ಲಿಯರ್ ವೆಪನ್ಸ್ ತೋರಿಸೋದು ಏನು, ಮಿಸೈಲ್ ಉಡಾಯಿಸಿ ವಾರ್ನಿಂಗ್ ಕೊಟ್ಟಿದ್ದೇನು. ಬರೀ ಇಂತಹ ಬಿಲ್ಡಪ್ಗಳೇ ಆಯ್ತು. ಆದ್ರೆ ಪ್ರಜೆಗಳಿಗೆ ತುತ್ತು ಅನ್ನವೂ ಸಿಗದೆ, ಹಸಿವಿನಿಂದ ಸಾಯುವ ಸ್ಥಿತಿ ಬಂದಿದೆ. ಅಷ್ಟಕ್ಕೂ ಕನ್ಫ್ಯೂಸ್ ಆಗಬೇಡಿ, ನಾವಿಲ್ಲಿ ಹೇಳ್ತಿರೋದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ.
ಮೊದಲೇ 'ಕೊರೊನಾ' ಅಬ್ಬರದ ನಡುವೆ ಆದಾಯ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಕ್ಕೂ ಅಲ್ಲೋಲ, ಕಲ್ಲೋಲ ಉಂಟಾಗಿದೆ. ಒಂದು ಕಡೆ ಕೊರೊನಾ ಪೆಟ್ಟು ಕೊಟ್ಟರೆ, ಮತ್ತೊಂದು ಕಡೆ ಪ್ರಕೃತಿಯೇ ಕಾಟ ಕೊಡುತ್ತಿದೆ. ಚಂಡಮಾರುತ, ಪ್ರವಾಹಗಳ ಪರಿಣಾಮ ಉ. ಕೊರಿಯಾದಲ್ಲಿ ಆಹಾರಕ್ಕೆ ತೀವ್ರ ಕೊರತೆ ಎದುರಾಗಿದೆ. ಈ ಬಗ್ಗೆ ಸ್ವತಃ ಕಿಮ್ ಜಾಂಗ್ ಉನ್ ಎಚ್ಚರಿಕೆ ಮಾತುಗಳನ್ನಾಡಿದ್ದು, ಕೋಟ್ಯಂತರ ಜನರಿಗೆ ಅನ್ನ-ನೀರು ಸಿಗೋದೂ ಅನುಮಾನವಾಗಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ತೂಕ ಇಳಿಕೆ: ಆರೋಗ್ಯ ಸಮಸ್ಯೆ ಬಗ್ಗೆ ಊಹಾಪೋಹ
ಪದೇ ಪದೆ ಕಿರಿಕ್ ಮಾಡಿಕೊಂಡು, ನ್ಯೂಕ್ಲಿಯರ್ ವೆಪನ್ ಸಂಶೋಧನೆಗೆ ಮುಂದಾಗುವ ಕಿಮ್ ಜಾಂಗ್ ಉನ್ ತನ್ನ ದೇಶಕ್ಕೆ ತಾನೇ ವಿಲನ್ ಆಗುತ್ತಿದ್ದಾನೆ. ಹಲವು ದೇಶಗಳು ಕ್ಷಿಪಣಿ ಪರೀಕ್ಷೆ ಹಿನ್ನೆಲೆ ಉತ್ತರ ಕೊರಿಯಾ ಮೇಲೆ ನಿಷೇಧ ಹೇರಿದ್ದು, ಆರ್ಥಿಕ ಸಂಕಷ್ಟದಲ್ಲಿ ಉ. ಕೊರಿಯಾ ವಿಲವಿಲನೆ ಒದ್ದಾಡುತ್ತಿದೆ. ಇಷ್ಟು ಸಾಲದು ಎಂಬಂತೆ ಈಗ ಆಹಾರಕ್ಕೂ ಭಾರಿ ಅಭಾವ ಸೃಷ್ಟಿಯಾಗಿದೆ.
ಗಡಿ ಮುಚ್ಚಿದ್ದೇ ಎಡವಟ್ಟು..!
ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಅಧ್ಯಕ್ಷ ಎನ್ನುವುದಕ್ಕಿಂತ, ಆತ ಒಬ್ಬ ಸರ್ವಾಧಿಕಾರಿ ಎನ್ನುವುದೇ ಸೂಕ್ತ. ಏಕೆಂದರೆ ತನಗೆ ಇರುವ ಅಧಿಕಾರವನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಆಗದ ಕಿಮ್, ಬಾಯಿಗೆ ಬಂದಂತೆ ಆದೇಶ ನೀಡುತ್ತಾರೆ. ಕೊರೊನಾ ವಿಚಾರದಲ್ಲೂ ಕಿಮ್ ಮಾಡಿದ್ದ ಎಡವಟ್ಟು ಉತ್ತರ ಕೊರಿಯಾಗೆ ಮುಳುವಾಗಿದೆ. ಅಂದ ಹಾಗೆ ಕೊರೊನಾ ನೆಪದಲ್ಲಿ ಉ. ಕೊರಿಯಾ ಗಡಿಯನ್ನು ಕಿಮ್ ಮುಚ್ಚಿದ್ದ. ಇದರಿಂದ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಹಳ್ಳ ಹಿಡಿದಿತ್ತು. ಕಡೆಗೆ ತನ್ನ ಪರಮಾಪ್ತ ರಾಷ್ಟ್ರ ಚೀನಾ ಜೊತೆಗಿನ ವ್ಯಾಪಾರವನ್ನೂ ಸ್ಥಗಿತಗೊಳಿಸಿದ್ದಾನೆ ಸರ್ವಾಧಿಕಾರಿ. ಇದು ಸಾಲದು ಎಂಬಂತೆ ಚಂಡಮಾರುತ, ಪ್ರವಾಹ ಬೆಳೆ ನಾಶಪಡಿಸಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಕೊರಿಯಾದ ಪ್ರಜೆಗಳೇನು ಹೊಟ್ಟೆಗೆ ಕಲ್ಲು ತಿನ್ನಬೇಕಾ..?
ಕಿಮ್ಗೆ ಭಯ ಬಂತಾ..?
ಯಾರು ಏನ್ ಹೇಳಿದ್ರೂ ಕೊಲೆ, ರಕ್ತಪಾತ ನಡೆಸುತ್ತಿದ್ದ ಕಿಮ್ ಜಾಂಗ್ ಉನ್ಗೆ ಈಗ ಭಯ ಬಂದಿದ್ಯಾ..? ಹೌದು, ಇಂತಹದ್ದೊಂದು ಟ್ರಿಲಿಯನ್ ಡಾಲರ್ ಪ್ರಶ್ನೆ ಕಿಮ್ ಭಾಷಣ ಕೇಳಿದ ಮೇಲೆ ಮೂಡುತ್ತಿದೆ. ಉತ್ತರ ಕೊರಿಯಾದ 'ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ' ಅಂದ್ರೆ ಆಡಳಿತ ಪಕ್ಷದ ಕೇಂದ್ರೀಯ ಸಮಿತಿ ನಡೆಸಿದ ಸಭೆಯಲ್ಲಿ ಮಾತನಾಡಿದ ಕಿಮ್, ಭಯದ ಮಾತುಗಳನ್ನಾಡಿದ್ದಾರೆ. ಉ. ಕೊರಿಯಾ ಈ ವರ್ಷ ಆರ್ಥಿಕವಾಗಿ ದೊಡ್ಡ ದೊಡ್ಡ ಸವಾಲು ಎದುರಿಸಬೇಕಿದೆ ಎಂದಿದ್ದಾರೆ. ಅದರಲ್ಲೂ ತಮ್ಮ ದೇಶದ ಕೃಷಿ ವಲಯ ಸಂಪೂರ್ಣ ನೆಲಕಚ್ಚಿದೆ ಎಂಬುದನ್ನ ಮರು ಮಾತನಾಡದೆ ಒಪ್ಪಿದ್ದಾರೆ ಕಿಮ್. ಇದು ಕಿಮ್ ಒಳಗಿನ ಭಯ ತೋರಿಸುತ್ತಿದೆ.
ಇದುವರೆಗೂ ಈ ದೇಶದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳಿಲ್ಲವಂತೆ!
ಸೈನಿಕರ ಬಳಿಯೂ ವಸೂಲಿ..!
ಅಂದಹಾಗೆ ಉ. ಕೊರಿಯಾ ಸೇನೆ ಸೈನಿಕರಿಗೆ 'ಧಾನ್ಯ ಸಂಗ್ರಹ ರಜೆ' ಕೊಟ್ಟು ಮನೆಗೆ ಕಳುಹಿಸುತ್ತಿದೆ. ಹಾಗಂತ ಧಾನ್ಯ ಸಂಗ್ರಹ ರಜೆಯನ್ನ ಸುಗ್ಗಿ ಹಬ್ಬ ಅಂದುಕೊಳ್ಳಬೇಡಿ. ಧಾನ್ಯ ಸಂಗ್ರಹ ರಜೆ ಅಂದ್ರೆ ಸೈನಿಕರಿಂದ ವಸೂಲಿ ಅಂತಾ ಅರ್ಥ, ಅಚ್ಚರಿಯಾದ್ರೂ ಇದು ಸತ್ಯ. ಬರೀ ಯುದ್ಧದ ಮಾತನ್ನೇ ಆಡುತ್ತಾ, ಕಂಡ ಕಂಡವರ ಮೇಲೆ ಕ್ರೌರ್ಯ ತೋರುತ್ತಿರುವ ಸರ್ವಾಧಿಕಾರಿ ಕಿಮ್ಗೆ ಪ್ರಜೆಗಳ ಬಗ್ಗೆ ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ. ಪ್ರಜೆಗಳನ್ನು ಬಿಡಿ ಉ. ಕೊರಿಯಾದ ಸೇನೆ ಕೂಡ ಇಂಥದ್ದೇ ಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ವಿಲವಿಲ ಒದ್ದಾಡುತ್ತಿರುವ ಉ. ಕೊರಿಯಾ ಸೇನೆಗೂ ಅನುದಾನ ಒದಗಿಸುತ್ತಿಲ್ಲ. ಹೀಗಾಗಿ ಸೇನಾಧಿಕಾರಿಗಳು ಸೈನಿಕರಿಂದಲೇ ವಸೂಲಿಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!
ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಈ ನಡುವೆ ದೇಶ ಮುನ್ನೆಡೆಸುವಲ್ಲೂ ಕಿಮ್ ವಿಫಲನಾಗಿದ್ದಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆರ್ಥಿಕ ಶಿಸ್ತು ಮರೆತು ತಿಕ್ಕಲುತನ ಮೆರೆದಿದ್ದು ಉತ್ತರ ಕೊರಿಯಾಗೆ ಮುಳುವಾಗುತ್ತಿದೆಯಾ? ಗೊತ್ತಿಲ್ಲ. ಆದರೆ ಸರ್ವಾಧಿಕಾರಿಯ ಅತಿಯಾದ ಶಸ್ತ್ರಾಸ್ತ್ರ ವ್ಯಾಮೋಹವೇ ಈ ಪರಿಸ್ಥಿತಿ ಸೃಷ್ಟಿಸಿರಬಹುದು.