ಯುದ್ಧಕ್ಕೂ ಮೊದಲೇ ಉತ್ತರ ಕೊರಿಯಾ ಎಸ್ಕೇಪ್? ಸರ್ವಾಧಿಕಾರಿ ನಿರ್ಧಾರ ಕೇಳಿ ಶಾಕ್!
ಜಗತ್ತಿನಲ್ಲಿ ಐತಿಹಾಸಿಕ ಹಾಗೂ ಬಹುದೊಡ್ಡ ಮಹತ್ವಪೂರ್ಣ ಕ್ರೀಡಾ ಕೂಟ ಎಂಬುದಿದ್ದರೆ ಅದು ಒಲಿಂಪಿಕ್ಸ್ ಮಾತ್ರ. ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆ. ಇದಕ್ಕಾಗಿ ಹಲವು ವರ್ಷ ಕಠಿಣ ಪರಿಶ್ರಮ ಪಡುತ್ತಾರೆ ಕ್ರೀಡಾಪಟುಗಳು. ಆದರೆ ಇಂತಹದ್ದೊಂದು ಮಹತ್ವದ ಕ್ರೀಡಾ ಕೂಟದಿಂದಲೇ ಉತ್ತರ ಕೊರಿಯಾ ಹಿಂದಕ್ಕೆ ಸರಿದೆ. ಅದು 'ಕೊರೊನಾ' ಕಾರಣಕ್ಕೆ ಅಂತೆ.
ಹೌದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಅಬ್ಬರದ ಎದುರು ಇಡೀ ಜಗತ್ತು ತತ್ತರಿಸಿದೆ. ಕ್ರೀಡಾ ಲೋಕವಂತೂ ಭಾರಿ ಹಿನ್ನಡೆ ಅನುಭವಿಸಿದೆ. ಹಾಗೇ ಕಳೆದ ವರ್ಷ ಜಪಾನ್ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ ಕೊರೊನಾ ಕಾರಣಕ್ಕೆ ನಿಂತು ಹೋಗಿತ್ತು. ಹೀಗಾಗಿ ಇದೇ ವರ್ಷ ಒಲಿಂಪಿಕ್ಸ್ ನಡೆಸಲು ಸಕಲ ಸಿದ್ಧತೆಗಳು ಸಾಗಿವೆ.
ಜುಲೈ 23ರಿಂದ ಆಗಸ್ಟ್ 8ರವರೆಗೂ ಜಪಾನ್ನಲ್ಲಿ ಒಲಿಂಪಿಕ್ಸ್ ಭರ್ಜರಿಯಾಗಿ ನಡೆಸಲು ಜಪಾನ್ ರಾಜಧಾನಿ ಟೋಕಿಯೊ ಸಿದ್ಧವಾಗಿದೆ. ಆದರೆ ಈ ಸಂದರ್ಭದಲ್ಲೇ ಕೊರೊನಾ ಕಾರಣ ನೀಡಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಆಡಳಿತ 'ಒಲಿಂಪಿಕ್ಸ್'ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.
16 ಚಿನ್ನ ಗೆದ್ದಿದೆ ಉ. ಕೊರಿಯಾ..!
ಉತ್ತರ ಕೊರಿಯಾ ಈವರೆಗೆ 13 ಬಾರಿ ‘ಒಲಿಂಪಿಕ್ಸ್' ಕ್ರೀಡಾ ಕೂಟದಲ್ಲಿ ಭಾಗವಹಿಸಿದೆ. ಈ ಪೈಕಿ ಒಟ್ಟು 16 ಚಿನ್ನದ ಪದಕ, 17 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕಗಳು ಸೇರಿದಂತೆ ಒಟ್ಟು 56 ಪದಕಗಳನ್ನು ಗೆದ್ದಿದೆ. ಮುಖ್ಯವಾಗಿ ವೇಯ್ಟ್ಲಿಫ್ಟಿಂಗ್ ಮತ್ತು ಕುಸ್ತಿ ವಿಭಾಗದಲ್ಲಿ ಉತ್ತರ ಕೊರಿಯಾ ಕ್ರೀಡಾಪಟುಗಳು ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಎರಡೂ ವಿಭಾಗದಿಂದ 8 ಚಿನ್ನದ ಪದಕಗಳು ಕೊರಿಯಾ ಖಾತೆಗೆ ಸೇರಿದೆ. ಆದರೆ ದಿಢೀರ್ ಉತ್ತರ ಕೊರಿಯಾ ಆಡಳಿತ ಕೈಗೊಂಡಿರುವ ನಿರ್ಧಾರ ಕ್ರೀಡಾಪಟುಗಳಿಗೂ ಶಾಕ್ ನೀಡಿದೆ.
ಒಲಿಂಪಿಕ್ ಸಮಿತಿಯ ನಿರ್ಧಾರ
ಉತ್ತರ ಕೊರಿಯಾದ ಕ್ರೀಡಾ ಸಚಿವ ಕಿಮ್ ಇಲ್ ಗುಕ್ ನೇತೃತ್ವದಲ್ಲಿ ನಡೆದ ಉತ್ತರ ಕೊರಿಯಾ ಒಲಿಂಪಿಕ್ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವಾಲಯದ ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಕೊರಿಯಾ, ಕೊರೊನಾ ಬಿಕ್ಕಟ್ಟಿನಿಂದ ಉತ್ತರ ಕೊರಿಯಾ ಕ್ರೀಡಾಪಟುಗಳನ್ನು ರಕ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಆದರೆ ಉತ್ತರ ಕೊರಿಯಾದ ಈ ನಿರ್ಧಾರದ ಬಗ್ಗೆ ಜಗತ್ತಿನ ಯಾವುದೇ ದೇಶ ಪ್ರತಿಕ್ರಿಯೆ ನೀಡಿಲ್ಲ. ಒಲಿಂಪಿಕ್ ಸಮಿತಿ ಕೂಡ ಈ ಬಗ್ಗೆ ಮಾತನಾಡಿಲ್ಲ.
‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!
ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಆದರೆ ಇಂತಹ ಸರ್ವಾಧಿಕಾರಿ, ಟ್ರಂಪ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದು, ಇದೆಲ್ಲಾ ಜಗತ್ತಿನ ಎದುರು ಕಿಮ್ ಆಡುತ್ತಿರುವ ನಾಟಕ ಎಂಬುದು ಕಿಮ್ ವಿರೋಧಿಗಳ ಆರೋಪ.
ಅಧಿಕಾರಿಗಳನ್ನು ಕೊಲೆ ಮಾಡುವುದು ಮಾಮೂಲು..!
ತನ್ನ ವಿರೋಧಿಗಳನ್ನು ಕೊಲೆ ಮಾಡಿಸುವುದು ಕಿಮ್ ಜಾಂಗ್ ಉನ್ಗೆ ನೀರು ಕುಡಿದಷ್ಟೇ ಸುಲಭ. ಏಕೆಂದರೆ ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತ ಇದೆ. ಹೀಗಾಗಿ ಕಿಮ್ ನಿರ್ಧಾರ ಪ್ರಶ್ನೆ ಮಾಡಲು ಯಾರೂ ಮುಂದಾಗುವುದಿಲ್ಲ. ಈ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕಿಮ್ ಜಾಂಗ್ ಉನ್ ಮತ್ತವನ ಪಟಾಲಂ ಕಂಡ ಕಂಡವರನ್ನು ಹತ್ಯೆ ಮಾಡುತ್ತದೆ. ಈ ಹಿಂದೆ ಸಭೆಯಲ್ಲಿ ನಿದ್ದೆ ಮಾಡಿದ್ದ ಎಂಬ ಕಾರಣಕ್ಕೆ ಅಧಿಕಾರಿಯೊಬ್ಬನನ್ನು ಕಿಮ್ ಬರ್ಬರವಾಗಿ ಕೊಲೆ ಮಾಡಿಸಿದ್ದ. ಅಲ್ಲದೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಕ್ವಾರಂಟೈನ್ನಲ್ಲಿದ್ದ ಅಧಿಕಾರಿ ಆದೇಶ ಮೀರಿ ಸ್ವಿಮ್ಮಿಂಗ್ ಮಾಡಿದ್ದಕ್ಕೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.