‘ಕೊರೊನಾ’ ಈ ದೇಶಕ್ಕೆ ಬರಲ್ವಂತೆ..! ಅದೇನ್ ಸುಳ್ಳು ಹೇಳ್ತಾನೋ ಸರ್ವಾಧಿಕಾರಿ..?
ಕೊರೊನಾ ವೈರಸ್ ಬಡವರು, ಶ್ರೀಮಂತರು, ಮಧ್ಯಮ ವರ್ಗ ಅಂತಾ ಭೇದ-ಭಾವ ಮಾಡದೆ ಜಗತ್ತಿನ ಪ್ರತಿಯೊಬ್ಬರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಕೊರೊನಾ ಸೋಂಕಿಗೆ ಹೆಚ್ಚಾಗಿ ನಲುಗಿದ್ದು ದುಡ್ಡು ಇರುವ ಶ್ರೀಮಂತ ರಾಷ್ಟ್ರಗಳೇ. ಹೀಗೆ ಇಡೀ ಜಗತ್ತು ಕೊರೊನಾ ಕೂಪದಲ್ಲಿ ನರಳುವಾಗ ಸರ್ವಾಧಿಕಾರಿ ಹೇಳಿಕೆ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಹೌದು, ಉತ್ತರ ಕೊರಿಯಾದಲ್ಲಿ ಈವರೆಗೆ ಒಂದೇ ಒಂದು ಕೇಸ್ ಕೂಡ ಪತ್ತೆಯಾಗಿಲ್ಲ. ನಮ್ಮ ದೇಶಕ್ಕೆ ಕೊರೊನಾ ಬಂದಿಲ್ಲ ಅಂತಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತ ಹಸಿಹಸಿ ಸುಳ್ಳು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಉತ್ತರ ಕೊರಿಯಾ ನೀಡಿರುವ ಮಾಹಿತಿಯಲ್ಲಿ, ಈವರೆಗೆ 30 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಿದ್ರೂ ಒಂದೇ ಒಂದು ಕೇಸ್ ಪತ್ತೆಯಾಗಿಲ್ವಂತೆ! ಬರೋಬ್ಬರಿ ಹತ್ತಿರ ಹತ್ತಿರ 2.5 ಕೋಟಿಯಷ್ಟು ಜನಸಂಖ್ಯೆ ಇರುವ ಉ. ಕೊರಿಯಾದಲ್ಲಿ ಈವರೆಗೂ ಡೆಡ್ಲಿ ಕೊರೊನಾ ಸುಳಿವು ಸಿಕ್ಕಿಲ್ಲ ಎಂಬುದೇ ಹಾಸ್ಯಾಸ್ಪದ.
ಹೀಗೆ ತನ್ನ ಭಂಡಬಾಳು ಗೊತ್ತಾಗದಂತೆ ಕಾಪಾಡಲು, ಸರ್ವಾಧಿಕಾರಿ ಕಿಮ್ ತನ್ನ ಅಧಿಕಾರಿಗಳ ಮೂಲಕ ಸುಳ್ಳು ಹೇಳಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇನ್ನೂ ಅದೆಷ್ಟುದಿನ ನಾಟಕ?
'ಉತ್ತರ ಕೊರಿಯಾ ಬಲಿಷ್ಠವಾಗಿ ಬೆಳೆಯಬೇಕು, ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಬೇಕು, ನಮ್ಮ ಬದುಕು ಬದಲಾಗಬೇಕು' ಹೀಗೆ ಅಲ್ಲಿನ ಜನ ಸಾವಿರಾರು ಕನಸು ಕಾಣುತ್ತಿದ್ದಾರೆ. ಆದ್ರೆ ಕಿಮ್ ಜಾಂಗ್ ಉನ್ ಹಾಗೂ ಆತನ ಪಟಾಲಂ ಎಲ್ಲವನ್ನೂ ಹಾಳು ಮಾಡಿದೆ. ಯುದ್ಧದ ಉನ್ಮಾದ ಹಾಗೂ ದುರಹಂಕಾರದ ನಡುವೆ ಉತ್ತರ ಕೊರಿಯಾ ಇದೀಗ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅದೆಲ್ಲಾ ಬಿಡಿ ಈವರೆಗೂ ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕಿನಿಂದ ಹಲವರು ಮೃತಪಟ್ಟಿರುವ ಆರೋಪವಿದೆ. ಆದರೂ ತನ್ನ ದೇಶದಲ್ಲಿ ಒಂದೇ ಒಂದು ಕೊರೊನಾ ಕೇಸ್ ಕೂಡ ಪತ್ತೆ ಆಗಿಲ್ಲ ಅಂತಿದ್ದಾನೆ ಈ ಸರ್ವಾಧಿಕಾರಿ ಕಿಮ್ ಜಾಂಗ್ ಉನ್.
ಗಡಿ ಮುಚ್ಚಿದ್ದೇ ಎಡವಟ್ಟು!
ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಅಧ್ಯಕ್ಷ ಎನ್ನುವುದಕ್ಕಿಂತ, ಆತ ಒಬ್ಬ ಸರ್ವಾಧಿಕಾರಿ ಎನ್ನುವುದೇ ಸೂಕ್ತ. ಏಕೆಂದರೆ ತನಗೆ ಇರುವ ಅಧಿಕಾರವನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಆಗದ ಕಿಮ್, ಬಾಯಿಗೆ ಬಂದಂತೆ ಆದೇಶ ನೀಡುತ್ತಾರೆ. ಕೊರೊನಾ ವಿಚಾರದಲ್ಲೂ ಕಿಮ್ ಮಾಡಿದ್ದ ಎಡವಟ್ಟು ಉತ್ತರ ಕೊರಿಯಾಗೆ ಮುಳುವಾಗಿದೆ. ಅಂದಹಾಗೆ ಕೊರೊನಾ ನೆಪದಲ್ಲಿ ಉ. ಕೊರಿಯಾ ಗಡಿಯನ್ನು ಕಿಮ್ ಮುಚ್ಚಿದ್ದ. ಇದರಿಂದ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಹಳ್ಳ ಹಿಡಿದಿತ್ತು. ಕಡೆಗೆ ತನ್ನ ಪರಮಾಪ್ತ ರಾಷ್ಟ್ರ ಚೀನಾ ಜೊತೆಗಿನ ವ್ಯಾಪಾರವನ್ನೂ ಸ್ಥಗಿತಗೊಳಿಸಿದ್ದಾನೆ ಸರ್ವಾಧಿಕಾರಿ. ಇದು ಸಾಲದು ಎಂಬಂತೆ ಚಂಡಮಾರುತ, ಪ್ರವಾಹ ಬೆಳೆ ನಾಶಪಡಿಸಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಕೊರಿಯಾದ ಪ್ರಜೆಗಳೇನು ಹೊಟ್ಟೆಗೆ ಕಲ್ಲು ತಿನ್ನಬೇಕಾ..?
‘ಕೊರೊನಾ’ಗಿಂತಲೂ ಕಿಮ್ ಕ್ರೂರಿ!
ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಈ ನಡುವೆ ದೇಶ ಮುನ್ನೆಡೆಸುವಲ್ಲೂ ಕಿಮ್ ವಿಫಲನಾಗಿದ್ದಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆರ್ಥಿಕ ಶಿಸ್ತು ಮರೆತು ತಿಕ್ಕಲುತನ ಮೆರೆದಿದ್ದು ಉತ್ತರ ಕೊರಿಯಾಗೆ ಮುಳುವಾಗುತ್ತಿದೆಯಾ? ಗೊತ್ತಿಲ್ಲ. ಆದರೆ ಸರ್ವಾಧಿಕಾರಿಯ ಅತಿಯಾದ ಶಸ್ತ್ರಾಸ್ತ್ರ ವ್ಯಾಮೋಹವೇ ಈ ಪರಿಸ್ಥಿತಿ ಸೃಷ್ಟಿಸಿರಬಹುದು.
ಕಪ್ ಕಾಫಿಗೆ 7000 ರೂಪಾಯಿ!
ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕೊರಿಯಾ ಆರ್ಥಿಕತೆ ಛಿದ್ರವಾಗಿದೆ. ಇದರ ನೇರ ಪರಿಣಾಮ ಆಹಾರದ ಮೇಲಾಗುತ್ತಿದೆ. ಆಮದು, ಪೂರೈಕೆ, ಉತ್ಪಾದನೆ ಸೇರಿದಂತೆ ಅರ್ಥ ವ್ಯವಸ್ಥೆಯ ಎಲ್ಲಾ ವಿಭಾಗದಲ್ಲೂ ಫ್ಲಾಪ್ ಆಗಿದೆ ಉ.ಕೊರಿಯಾ. ಭೀಕರ ಬರಗಾಲ ಚಂಡಮಾರುತ ಸೇರಿ ನೂರಾರು ಸಮಸ್ಯೆ ಸುಳಿಗೆ ಸಿಲುಕಿ ಸರಿಯಾಗಿ ಆಹಾರ ಉತ್ಪಾದನೆಯೂ ಆಗಿಲ್ಲ. ಹೀಗಾಗಿ ಸದ್ಯ ಉ. ಕೊರಿಯಾದಲ್ಲಿ ಆಹಾರ ಪದಾರ್ಥಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿದ್ದು, 1 ಕಪ್ ಕಾಫಿ ಬೆಲೆ 7000 ರೂಪಾಯಿ ಆಗಿದ್ರೆ, 1 ಕೆ.ಜಿ. ಬಾಳೆಹಣ್ಣಿಗೆ 3500 ರೂಪಾಯಿ ಖರ್ಚು ಮಾಡಬೇಕಿದೆ.
ಬಿಲ್ಡಪ್ ಕಿಮ್ ಎಡವಟ್ಟು..!
ಅಬ್ಬಬ್ಬಾ.. ನ್ಯೂಕ್ಲಿಯರ್ ವೆಪನ್ಸ್ ತೋರಿಸೋದು ಏನು, ಮಿಸೈಲ್ ಉಡಾಯಿಸಿ ವಾರ್ನಿಂಗ್ ಕೊಟ್ಟಿದ್ದೇನು. ಬರೀ ಇಂತಹ ಬಿಲ್ಡಪ್ಗಳೇ ಆಯ್ತು. ಆದ್ರೆ ಪ್ರಜೆಗಳಿಗೆ ತುತ್ತು ಅನ್ನವೂ ಸಿಗದೆ, ಹಸಿವಿನಿಂದ ಸಾಯುವ ಸ್ಥಿತಿ ಬಂದಿದೆ. ಅಷ್ಟಕ್ಕೂ ಕಿಮ್ ಜಾಂಗ್ ಉನ್ ಮಾಡಿಕೊಂಡ ಎಡವಟ್ಟು ಒಂದೆರಡಲ್ಲ. ತನ್ನ ದೇಶದ ಆರ್ಥಿಕತೆ ಮೇಲೆ ಗಮನ ಇಡದೆ, ಸದಾ ಯುದ್ಧದ ಉನ್ಮಾದದಲ್ಲೇ ತೇಲಿದ ಕಿಮ್, ಕೋಟ್ಯಂತರ ಜನರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಉತ್ತರ ಕೊರಿಯಾದಲ್ಲಿ ಕೋಟ್ಯಂತರ ಜನರಿಗೆ ತುತ್ತು ಅನ್ನ ಕೂಡ ಸಿಗುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.