ಸರ್ವಾಧಿಕಾರಿ ಘೋಷಣೆ: ಕೊರೊನಾ ವೈರಸ್ ವಿರುದ್ಧದ ಯುದ್ಧ ಗೆದ್ದ ಉತ್ತರ ಕೊರಿಯಾ!
ಪ್ಯೂಂಗ್ಯಾಂಗ್, ಆಗಸ್ಟ್ 11: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೆದ್ದಿರುವುದಾಗಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಘೋಷಿಸಿದ್ದಾರೆ. ಕೋವಿಡ್-19 ಪಿಡುಗಿಗೆ ದಕ್ಷಿಣ ಕೊರಿಯಾವನ್ನು ದೂಷಿಸಿದ ಅರು, ಮಾರಣಾಂತಿಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಜಾರಿಗೊಳಿಸಿದ ಕೋವಿಡ್-19 ಕಠಿಣ ಕ್ರಮಗಳನ್ನು ಸಡಿಲಗೊಳಿಸುವುದಾಗಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಸಾಂಕ್ರಾಮಿಕ ಪಿಡುಗಿನ ವಿರುದ್ಧ ಉತ್ತರ ಕೊರಿಯಾ ಉಕ್ಕಿನಂತಹ ನಿಯಂತ್ರಣ ಗೋಡೆಯನ್ನು ಕಟ್ಟಿದೆ. ಈ ಹಂತದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಆದೇಶಿಸಿದ್ದಾರೆ.
ವಿದೇಶಿಗರೇ ಭಾರತಕ್ಕೆ ಬರುವ ಮೊದಲು ಈ ಮಾರ್ಗಸೂಚಿ ಓದಿರಿ
ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಅಟ್ಟಹಾಸ ತೋರುತ್ತಿದ್ದ ಸಂದರ್ಭದಲ್ಲಿ ಉತ್ತರ ಕೊರಿಯಾ ಅದೆಷ್ಟು ಪ್ರಕರಣಗಳು ವರದಿ ಮಾಡುತ್ತಿತ್ತು ಎಂಬ ಅಂಕಿ-ಅಂಶಗಳೇ ಪತ್ತೆ ಆಗುತ್ತಿರಲಿಲ್ಲ. ಈ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು.
ಜ್ವರದಿಂದ ಬಳಲುತ್ತಿರುವ ರೋಗಿಗಳ ದೈನಂದಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 47 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಜುಲೈ 29 ರಿಂದ ಈಚೆಗೆ ಯಾವುದೇ ಹೊಸ ಕೋವಿಡ್19 ಪ್ರಕರಣಗಳು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.
ಬುಧವಾರ ನಡೆದ ಸಭೆಯಲ್ಲಿ ಹೊಸ ನೀತಿಯ ಘೋಷಣೆ
ಉತ್ತರ ಕೊರಿಯಾದ ಮಾಧ್ಯಮಗಳ ಪ್ರಕಾರ, ಬುಧವಾರ ಅಧಿಕಾರಿಗಳ ಜೊತೆಗೆ ನಡೆದ ಗೌಪ್ಯ ಸಭೆಯಲ್ಲಿ ನಾಯಕ ಕಿಮ್ ಜಾಂಗ್ ಉನ್, ಕೊವಿಡ್-19 ಹೊಸ ನೀತಿಯ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ಇದೇ ವೇಳೆ ಕಿಮ್ ಜಾಂಗ್ ಉನ್ ಸಹೋದರಿ, ಕಿಮ್ ಯೋ ಜಾಂಗ್ ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾವೂ ಕೂಡ ಜ್ವರದ ಲಕ್ಷಣದಿಂದ ಬಳಲಿದ ಬಗ್ಗೆ ಉಲ್ಲೇಖಿಸಿದ್ದು, ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕಿನ ಸಮಸ್ಯೆ ಎದುರಿಸಿದ ಬಗ್ಗೆ ಬಹಿರಂಗಪಡಿಸಿದರು.
ವಿಶ್ರಾಂತಿ ತೆಗೆದುಕೊಂಡಿರಲಿಲ್ಲ ಕಿಮ್ ಜಾಂಗ್ ಉನ್
ಸ್ವತಃ ಕಿಮ್ ಜಾಂಗ್ ಉನ್ ತೀವ್ರ ಜ್ವರದಿಂದ ಬಳಲುವುದರ ಜೊತೆಗೆ ಅಸ್ವಸ್ಥಗೊಂಡಿದ್ದರು. ಆದರೆ ಸಾಂಕ್ರಾಮಿಕ ಪಿಡುಗಿನ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಸಮರ್ಥವಾಗಿ ಎದುರಿಸಲು ಪಣ ತೊಟ್ಟಿದ್ದ ಅವರು, ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಸಮಯವೇ ಸಿಕ್ಕಿರಲಿಲ್ಲ. ತಮ್ಮ ಸಹೋದರನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕೂ ಸಾಧ್ಯವಾಗಿರಲಿಲ್ಲ ಎಂದು ಸಹೋದರಿ ಕಿಮ್ ಯೋ ಜಾಂಗ್ ಹೇಳಿದರು. ಅದಾಗ್ಯೂ, ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ಏಕಾಏಕಿ ಕೊರೊನಾ ವೈರಸ್ ಸೋಂಕು ಹರಡುವುದಕ್ಕೆ ಪಕ್ಕದ ದಕ್ಷಿಣ ಕೊರಿಯಾವನ್ನು ದೂಷಿಸಿದರು.
ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಗೆ ಆವಾಜ್
"ದಕ್ಷಿಣ ಕೊರಿಯಾದಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ. ಇದಕ್ಕೆ ಪ್ರತೀಕಾರವಾಗಿ ದಕ್ಷಿಣ ಕೊರಿಯಾದ ಅಧಿಕಾರಿಗಳನ್ನೂ ಅಳಿಸುವುದಾಗಿ ಬೆದರಿಕೆ ಹಾಕಿದರು. ನಮ್ಮ ಪ್ರತೀಕಾರವು ತೀರಾ ಮಾರಣಾಂತಿಕವಾಗಿ ಇರುತ್ತದೆ ಎಂದು ಕಿಂಗ್ ಯೋ ಜಾಂಗ್ ಹೇಳಿದರು. ಉತ್ತರ ಕೊರಿಯಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಕೊರಿಯಾದ ಸಚಿವಾಲಯವು, ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ದೂಷಿಸಿದರು.
ವ್ಯಾಪಾರ ವಹಿವಾಟು ಪುನಾರಂಭಕ್ಕೆ ಯೋಜನೆ
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಉತ್ತರ ಕೊರಿಯಾ ಗೆಲುವು ಸಾಧಿಸಿದೆ ಎಂಬ ಘೋಷಣೆ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಒಂದು ಕೋವಿಡ್-19 ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಏಕತೆಯನ್ನು ಮೂಡಿಸುವುದು. ಇದರ ಜೊತೆಗೆ ತಮ್ಮ ಜೊತೆಗೆ ಕೊರೊನಾ ವೈರಸ್ ಮುಕ್ತವಾಗಿರುವ ರಾಷ್ಟ್ರಗಳು ವ್ಯಾಪಾರ ವಹಿವಾಟು ಅನ್ನು ಮುಂದುವರಿಸಲು ಅವಕಾಶವಿದೆ ಎಂಬ ಸಂದೇಶವನ್ನು ರವಾನಿಸುವುದೇ ಆಗಿದೆ. ಮುಖ್ಯವಾಗಿ ಚೀನಾದೊಂದಿಗೆ ವಹಿವಾಟು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಸಿಯೋಲ್ನಲ್ಲಿರುವ ಉತ್ತರ ಕೊರಿಯನ್ ಅಧ್ಯಯನಗಳ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಯಾಂಗ್ ಮೂ-ಜಿನ್ ಹೇಳಿದ್ದಾರೆ.