ಮತ್ತೆ ಕ್ಷಿಪಣಿ ಉಡಾಯಿಸಿದ ಕೊರಿಯಾ ಸರ್ವಾಧಿಕಾರಿ, ಜಪಾನ್ ಗೆ ನಡುಕ
ಟೋಕಿಯೋ, ಸೆಪ್ಟೆಂಬರ್ 15: ಅಣ್ವಸ್ತ್ರ ಪರೀಕ್ಷೆಯ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಠಿಣ ನಿರ್ಬಂಧಗಳನ್ನು ಹೇರಿದ್ದರೂ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಮಾತ್ರ ಬುದ್ಧಿ ಬಂದಿಲ್ಲ.
ನಿನ್ನೆಯಷ್ಟೇ ಜಪಾನ್ ನನ್ನು ಮುಳುಗಿಸುವುದಾಗಿ ಅಬ್ಬರಿಸಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಂದು ಜಪಾನ್ ಮೇಲಿನಿಂದ ಕ್ಷಿಪಣಿ ಉಡಾಯಿಸಿ ಅಟ್ಟಹಾಸ ಮೆರೆದಿದ್ದಾನೆ. ಈತನ ದಿನಕ್ಕೊಂದು ವೃತ್ತಾಂತಕ್ಕೆ ಜಪಾನ್ ಥರ ಥರ ನಡುಗುತ್ತಿದೆ.
ಇಂದು ಬೆಳಿಗ್ಗೆ ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ನ ಸುನಾನ್ ಜಿಲ್ಲೆಯಿಂದ ಹಾರಿದ ಖಂಡಾಂತರ ಕ್ಷಿಪಣಿ ಜಪಾನಿನ ಹೊಕೈಡೊ ಬಂದರನ್ನು ದಾಟಿಕೊಂಡು ಹೋಗಿ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ. ಇದೇ ರೀತಿ ಕೆಲವು ವಾರಗಳ ಹಿಂದೆಯೂ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೆಪ್ಟಂಬರ್ 3ರ ಅಣ್ವಸ್ತ್ರ ಪರೀಕ್ಷೆಯ ನಂತರ ಉತ್ತರ ಕೊರಿಯಾದ ಮೇಲೆ ಕಠಿನ ನಿರ್ಬಂಧಗಳನ್ನು ಹೇರಿದ್ದರೂ ಬಗ್ಗದೇ ಇರುವುದು ಅಮೆರಿಕಾ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ತಂದಿದೆ.
ಕ್ಷಿಪಣಿ ಉಡಾವಣೆ ಬೆನ್ನಿಗೆ ತಕ್ಷಣವೇ ತುರ್ತು ಭದ್ರತಾ ಮಂಡಳಿ ಸಭೆ ಕರೆಯುವಂತೆ ವಿಶ್ವಸಂಸ್ಥೆಗೆ ದಕ್ಷಿಣ ಕೊರಿಯಾ ಕೇಳಿಕೊಂಡಿದೆ.