1 ಕಪ್ ಕಾಫಿ 7000 ರೂಪಾಯಿ, 1 ಕೆ.ಜಿ. ಬಾಳೆಹಣ್ಣು ಜಸ್ಟ್ 3500 ರೂಪಾಯಿ..!
1 ಕಪ್ ಕಾಫಿ ಕುಡಿಯೋಕೆ ನೀವು ಎಷ್ಟು ಖರ್ಚು ಮಾಡಬಹುದು? ಮಾಮೂಲಿ ಅಂದ್ರೆ 10 ರೂಪಾಯಿ. ಬಿಡು ಒಂದಷ್ಟು ಕಾಸ್ಟ್ಲೀ ಅಂದ್ರೂ 200 ರೂಪಾಯಿ ಅಂತಾ ಇಟ್ಕೊಳಿ. ಆದ್ರೆ ಇದನ್ನೆಲ್ಲಾ ಮೀರಿಸೋ ಕಾಫಿ ಇಲ್ಲಿದೆ. ಹಾಗಂತಾ ಈ ಕಾಫಿ ಸ್ಪೆಷಲ್ ಏನಲ್ಲ..! ಮಾಮೂಲಿ ಕಾಫಿಗೆ 7 ಸಾವಿರ ರೂಪಾಯಿ ಕೊಡಬೇಕು. 'ಅರೆರೆ.. ಯಾಕಿಷ್ಟು ರೇಟ್ ಆ ಕಾಫಿ' ಅಂತಾ ಜಾಸ್ತಿ ಯೋಚಿಸಬೇಡಿ. ಯಾಕಂದ್ರೆ ಇದು ಉ. ಕೊರಿಯಾದ ಆರ್ಥಿಕತೆ ಉಡೀಸ್ ಆಗಿರುವುದರ ಪರಿಣಾಮ.
Recommended Video
ಹೌದು, ಪ್ರತಿಬಾರಿ 'ಬಾಂಬ್ ಹಾಕ್ತೀನಿ.. ಹಾಕೇ ಬಿಡ್ತೀನಿ' ಅಂತಾ ಜಗತ್ತಿಗೆ ಹೆದರಿಸುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ದೇಶವನ್ನೇ ಬೀದಿಗೆ ಬೀಳುವಂತೆ ಮಾಡಿದ್ದಾನೆ. ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕೊರಿಯಾ ಆರ್ಥಿಕತೆ ಛಿದ್ರವಾಗಿದೆ.
ಇದರ ನೇರ ಪರಿಣಾಮ ಆಹಾರ ಪದಾರ್ಥಗಳ ಮೇಲಾಗುತ್ತಿದೆ. ಆಮದು, ಪೂರೈಕೆ, ಉತ್ಪಾದನೆ ಸೇರಿದಂತೆ ಅರ್ಥ ವ್ಯವಸ್ಥೆಯ ಎಲ್ಲಾ ವಿಭಾಗದಲ್ಲೂ ಉ.ಕೊರಿಯಾ ಮಣ್ಣುಮುಕ್ಕಿದೆ. ಭೀಕರ ಬರಗಾಲ, ಚಂಡಮಾರುತ ಸೇರಿದಂತೆ ನೂರಾರು ಸಮಸ್ಯೆ ಸುಳಿಗೆ ಸಿಲುಕಿ ಸರಿಯಾಗಿ ಆಹಾರ ಉತ್ಪಾದನೆಯೂ ಆಗಿಲ್ಲ.
ಹೀಗಾಗಿ ಸದ್ಯ ಉ. ಕೊರಿಯಾದಲ್ಲಿ ಆಹಾರ ಪದಾರ್ಥಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿದ್ದು, 1 ಕಪ್ ಕಾಫಿ ಬೆಲೆ 7000 ರೂಪಾಯಿ ಆಗಿದ್ರೆ, 1 ಕೆ.ಜಿ. ಬಾಳೆಹಣ್ಣು ಕೊಳ್ಳಲು ಬರೋಬ್ಬರಿ 3500 ರೂಪಾಯಿ ಖರ್ಚು ಮಾಡಬೇಕಿದೆ.
ನಿಮಗೆ ಜಿಂಬಾಬ್ವೆ ನೆನಪಾಯ್ತಾ..?
ಅಂದಹಾಗೆ ಉ. ಕೊರಿಯಾ ಸ್ಥಿತಿ ಕೇಳಿದ ಬಹುತೇಕರಿಗೆ ಜಿಂಬಾಬ್ವೆ ನೆನಪಾಗಿರಬೇಕು. ಏಕೆಂದರೆ 2008ರಿಂದ ಇಂತಹದ್ದೇ ದುರಂತ ಸ್ಥಿತಿ ಎದುರಿಸಿತ್ತಿದೆ ಆಫ್ರಿಕಾದ ಬಡರಾಷ್ಟ್ರ ಜಿಂಬಾಬ್ವೆ. ಅಲ್ಲಿ ಕೂಡ ಇದೇ ರೀತಿ ಅಧ್ಯಕ್ಷನ ಮೂರ್ಖತನದ ಪರಿಣಾಮ 1 ಪೌಂಡ್ ಬ್ರೆಡ್ಗೆ 1 ಚೀಲದಲ್ಲಿ ದುಡ್ಡು ಕೊಂಡೊಯ್ಯುವ ಸ್ಥಿತಿ ಎದುರಾಗಿತ್ತು. ಈಗ ಉತ್ತರ ಕೊರಿಯಾ ಕೂಡ ಇದೇ ರೀತಿ ಆಗಿದೆ. ಆರ್ಥಿಕ ತಜ್ಞರು ಹೇಳುವಂತೆ ಇನ್ನು ಕೆಲವೇ ದಿನಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದ್ದು, ಉ.ಕೊರಿಯಾ ಆರ್ಥಿಕವಾಗಿ ದಿವಾಳಿಯಾಗುವ ಅಪಾಯವಿದೆಯಂತೆ. ಸ್ವತಃ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಕೂಡ ತನ್ನ ದೇಶದ ಪರಿಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾನೆ.
ಬಿಲ್ಡಪ್ ಕಿಮ್ ಎಡವಟ್ಟು..!
ಅಬ್ಬಬ್ಬಾ.. ನ್ಯೂಕ್ಲಿಯರ್ ವೆಪನ್ಸ್ ತೋರಿಸೋದು ಏನು, ಮಿಸೈಲ್ ಉಡಾಯಿಸಿ ವಾರ್ನಿಂಗ್ ಕೊಟ್ಟಿದ್ದೇನು. ಬರೀ ಇಂತಹ ಬಿಲ್ಡಪ್ಗಳೇ ಆಯ್ತು. ಆದ್ರೆ ಪ್ರಜೆಗಳಿಗೆ ತುತ್ತು ಅನ್ನವೂ ಸಿಗದೆ, ಹಸಿವಿನಿಂದ ಸಾಯುವ ಸ್ಥಿತಿ ಬಂದಿದೆ. ಅಷ್ಟಕ್ಕೂ ಕಿಮ್ ಜಾಂಗ್ ಉನ್ ಮಾಡಿಕೊಂಡ ಎಡವಟ್ಟು ಒಂದೆರಡಲ್ಲ. ತನ್ನ ದೇಶದ ಆರ್ಥಿಕತೆ ಮೇಲೆ ಗಮನ ಇಡದೆ, ಸದಾ ಯುದ್ಧದ ಉನ್ಮಾದದಲ್ಲೇ ತೇಲಿದ ಕಿಮ್, ಕೋಟ್ಯಂತರ ಜನರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಉತ್ತರ ಕೊರಿಯಾದಲ್ಲಿ ಕೋಟ್ಯಂತರ ಜನರಿಗೆ ತುತ್ತು ಅನ್ನ ಕೂಡ ಸಿಗುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಗಡಿ ಮುಚ್ಚಿದ್ದೇ ಎಡವಟ್ಟು..!
ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಅಧ್ಯಕ್ಷ ಎನ್ನುವುದಕ್ಕಿಂತ, ಆತ ಒಬ್ಬ ಸರ್ವಾಧಿಕಾರಿ ಎನ್ನುವುದೇ ಸೂಕ್ತ. ಏಕೆಂದರೆ ತನಗೆ ಇರುವ ಅಧಿಕಾರವನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಆಗದ ಕಿಮ್, ಬಾಯಿಗೆ ಬಂದಂತೆ ಆದೇಶ ನೀಡುತ್ತಾರೆ. ಕೊರೊನಾ ವಿಚಾರದಲ್ಲೂ ಕಿಮ್ ಮಾಡಿದ್ದ ಎಡವಟ್ಟು ಉತ್ತರ ಕೊರಿಯಾಗೆ ಮುಳುವಾಗಿದೆ. ಅಂದಹಾಗೆ ಕೊರೊನಾ ನೆಪದಲ್ಲಿ ಉ. ಕೊರಿಯಾ ಗಡಿಯನ್ನ ಕಿಮ್ ಮುಚ್ಚಿದ್ದ. ಇದರಿಂದ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಹಳ್ಳ ಹಿಡಿದಿತ್ತು. ಕಡೆಗೆ ತನ್ನ ಪರಮಾಪ್ತ ರಾಷ್ಟ್ರ ಚೀನಾ ಜೊತೆಗಿನ ವ್ಯಾಪಾರವನ್ನೂ ಸ್ಥಗಿತಗೊಳಿಸಿದ್ದಾನೆ ಸರ್ವಾಧಿಕಾರಿ. ಇದು ಸಾಲದು ಎಂಬಂತೆ ಚಂಡಮಾರುತ, ಪ್ರವಾಹ ಬೆಳೆ ನಾಶಪಡಿಸಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಕೊರಿಯಾದ ಪ್ರಜೆಗಳೇನು ಹೊಟ್ಟೆಗೆ ಕಲ್ಲು ತಿನ್ನಬೇಕಾ..?
ಕಿಮ್ಗೆ ಭಯ ಬಂತಾ..?
ಯಾರು ಏನ್ ಹೇಳಿದ್ರೂ ಕೊಲೆ, ರಕ್ತಪಾತ ನಡೆಸುತ್ತಿದ್ದ ಕಿಮ್ ಜಾಂಗ್ ಉನ್ಗೆ ಈಗ ಭಯ ಬಂದಿದ್ಯಾ..? ಹೌದು, ಇಂತಹದ್ದೊಂದು ಟ್ರಿಲಿಯನ್ ಡಾಲರ್ ಪ್ರಶ್ನೆ ಕಿಮ್ ಭಾಷಣ ಕೇಳಿದ ಮೇಲೆ ಮೂಡುತ್ತಿದೆ. ಉತ್ತರ ಕೊರಿಯಾದ ‘ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ' ಅಂದ್ರೆ ಆಡಳಿತ ಪಕ್ಷದ ಕೇಂದ್ರೀಯ ಸಮಿತಿ ನಡೆಸಿದ ಸಭೆಯಲ್ಲಿ ಮಾತನಾಡಿದ ಕಿಮ್, ಭಯದ ಮಾತುಗಳನ್ನಾಡಿದ್ದಾರೆ. ಉ. ಕೊರಿಯಾ ಈ ವರ್ಷ ಆರ್ಥಿಕವಾಗಿ ದೊಡ್ಡ ದೊಡ್ಡ ಸವಾಲು ಎದುರಿಸಬೇಕಿದೆ ಎಂದಿದ್ದಾರೆ. ಅದರಲ್ಲೂ ತಮ್ಮ ದೇಶದ ಕೃಷಿ ವಲಯ ಸಂಪೂರ್ಣ ನೆಲಕಚ್ಚಿದೆ ಎಂಬುದನ್ನ ಮರು ಮಾತನಾಡದೆ ಒಪ್ಪಿದ್ದಾರೆ ಕಿಮ್. ಇದು ಕಿಮ್ ಒಳಗಿನ ಭಯ ತೋರಿಸುತ್ತಿದೆ.
ಸೈನಿಕರ ಬಳಿಯೂ ವಸೂಲಿ..!
ಅಂದಹಾಗೆ ಉ. ಕೊರಿಯಾ ಸೇನೆ ಸೈನಿಕರಿಗೆ ‘ಧಾನ್ಯ ಸಂಗ್ರಹ ರಜೆ' ಕೊಟ್ಟು ಮನೆಗೆ ಕಳುಹಿಸುತ್ತಿದೆ. ಹಾಗಂತ ಧಾನ್ಯ ಸಂಗ್ರಹ ರಜೆಯನ್ನ ಸುಗ್ಗಿ ಹಬ್ಬ ಅಂದುಕೊಳ್ಳಬೇಡಿ. ಧಾನ್ಯ ಸಂಗ್ರಹ ರಜೆ ಅಂದ್ರೆ ಸೈನಿಕರಿಂದ ವಸೂಲಿ ಅಂತಾ ಅರ್ಥ, ಅಚ್ಚರಿಯಾದ್ರೂ ಇದು ಸತ್ಯ. ಬರೀ ಯುದ್ಧದ ಮಾತನ್ನೇ ಆಡುತ್ತಾ, ಕಂಡ ಕಂಡವರ ಮೇಲೆ ಕ್ರೌರ್ಯ ತೋರುತ್ತಿರುವ ಸರ್ವಾಧಿಕಾರಿ ಕಿಮ್ಗೆ ಪ್ರಜೆಗಳ ಬಗ್ಗೆ ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ. ಪ್ರಜೆಗಳನ್ನು ಬಿಡಿ ಉ. ಕೊರಿಯಾದ ಸೇನೆ ಕೂಡ ಇಂಥದ್ದೇ ಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ವಿಲವಿಲ ಒದ್ದಾಡುತ್ತಿರುವ ಉ. ಕೊರಿಯಾ ಸೇನೆಗೂ ಅನುದಾನ ಒದಗಿಸುತ್ತಿಲ್ಲ. ಹೀಗಾಗಿ ಸೇನಾಧಿಕಾರಿಗಳು ಸೈನಿಕರಿಂದಲೇ ವಸೂಲಿಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.