ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ಸಾಧ್ಯವಿಲ್ಲ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಏಪ್ರಿಲ್ 3: ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಮಾಲೋಚನೆಯ ಬಳಿಕ ಪ್ರಧಾನಿ ಮಂತ್ರಿ ಕಚೇರಿಯು ಪರ್ಯಾಯವಾಗಿ ಇತರೆ ಅಗ್ಗದ ಮಾರ್ಗಗಳನ್ನು ಹುಡುಕಿಕೊಳ್ಳುವಂತೆ ವಾಣಿಜ್ಯ ಇಲಾಖೆಗೆ ಸೂಚನೆ ರವಾನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ವ್ಯಾಪಾರ ಮುಂದುವರಿಸಲು ಸಾಧ್ಯವಿಲ್ಲ ಎಂಬ ನಿರ್ಧಾರವನ್ನು ಇಮ್ರಾನ್ ಖಾನ್ ಕೈಗೊಂಡಿದ್ದಾರೆ.
ಭಾರತದಿಂದ ಸಕ್ಕರೆ, ಹತ್ತಿ ಆಮದು; ಇದ್ದಕ್ಕಿದ್ದಂತೆ ಯು-ಟರ್ನ್ ಹೊಡೆದ ಪಾಕಿಸ್ತಾನ
ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕು ಎಂಬ ಉನ್ನತಾಧಿಕಾರ ಸಮಿತಿಯೊಂದು ಮಾಡಿದ್ದ ಪ್ರಸ್ತಾವವನ್ನು ಪಾಕಿಸ್ತಾನ ಸಚಿವ ಸಂಪುಟ ತಿರಸ್ಕರಿಸಿತ್ತು.
ಯೂಟರ್ನ್ ಹೊಡೆದಿತ್ತು ಇಮ್ರಾನ್ ಸರ್ಕಾರ
ಶೀಘ್ರವೇ ಭಾರತದಿಂದ ಸಕ್ಕರೆ, ಗೋಧಿ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡೆದಿತ್ತು. ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪಾಕ್ ಸರ್ಕಾರದ ನಡೆಗೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲೇ ಈ ನಿರ್ಧಾರ ಪ್ರಕಟಿಸಿತ್ತು.
ಹಮ್ಮದ್ ಅಜರ್ ಏನು ಹೇಳಿದ್ದರು
ಕಳೆದ ಎರಡು ವರ್ಷಗಳಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದಿಗೆ ನಿಷೇಧ ಹೇರಿದ್ದ ಪಾಕಿಸ್ತಾನ, ಶೀಘ್ರದಲ್ಲೇ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲಿದೆ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ಹೇಳಿದ್ದರು. ಭಾರತದಿಂದ ಸಕ್ಕರೆ ಮತ್ತು ಹತ್ತಿ ವ್ಯಾಪಾರವನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದೇವೆ. ಜೂನ್ ನಿಂದ ಆಮದು ಮಾಡಿಕೊಳ್ಳುತ್ತೇವೆ ಎಂದು ಹಮ್ಮದ್ ಅಜರ್ ತಿಳಿಸಿದ್ದರು. ಆದರೆ ಈ ನಡೆಗೆ ಟೀಕೆ ವ್ಯಕ್ತವಾಗಿತ್ತು.
ಕಾಶ್ಮೀರ ಸಮಸ್ಯೆ ಇನ್ನೂ ಇತ್ಯರ್ಥಗೊಂಡಿಲ್ಲ
ಕಾಶ್ಮೀರ ಸಮಸ್ಯೆ ಇನ್ನೂ ಇತ್ಯರ್ಥಗೊಳ್ಳದ ಕಾರಣ ಭಾರತದೊಂದಿಗೆ ವ್ಯಾಪಾರ ವಹಿವಾಟು ಆರಂಭಿಸುವ ಕುರಿತು ವಿರೋಧ ಕೇಳಿಬಂದಿತ್ತು. ಈ ಕಾರಣದಿಂದಾಗಿ ನಿರ್ಧಾರ ಬದಲಿಸಿರುವುದಾಗಿ ತಿಳಿದುಬಂದಿದೆ.
ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹೇಗಿದೆ?
ಈಗಿನ ಪರಿಸ್ಥಿತಿಯಲ್ಲಿ ದೇಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಿಂದ ಹತ್ತಿ ಹಾಗೂ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಇಸಿಸಿ ಸಲಹೆ ಮಾಡಿತ್ತು.
ಆರ್ಥಿಕ ಹಾಗೂ ವಾಣಿಜ್ಯ ದೃಷ್ಟಿಕೋನದಿಂದ ಆರ್ಥಿಕ ಸಮನ್ವಯ ಸಮಿತಿಯು (ಇಸಿಸಿ) ಅನೇಕ ಪ್ರಸ್ತಾಪಗಳನ್ನು ಮುಂದಿರಿಸಿತ್ತು. ಇಸಿಸಿ ಪರಿಗಣಿಸಿದ ಬಳಿಕ ಅಂತಿಮ ಅನುಮೋದನೆಗಾಗಿ ಸಂಪುಟದ ಮುಂದಿಡಲಾಗಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿತ್ತು.