‘ದೊಡ್ಡಣ್ಣ’ನ ಮಾತಿಗೂ ಕೇರ್ ಮಾಡಲಿಲ್ಲ ಈ ಮೊಂಡರು..!
ಅಮೆರಿಕದ ಮಾತಿಗೆ ಒಂದು ಬೆಲೆ ಇತ್ತು, ಅಮೆರಿಕ ಮಧ್ಯಪ್ರವೇಶ ಮಾಡಿದ ನಂತರ ಅದೆಷ್ಟೋ ವಿವಾದಗಳು ಸಂಧಾನದಲ್ಲೇ ಬಗೆಹರಿದ ಉದಾಹರಣೆಗಳು ಇದ್ದವು. ಆದರೆ ಈಗ ಕಾಲ ಬದಲಾಗಿದೆ ಆಗಿದೆ. ಅಮೆರಿಕ ಮಾತಿಗೆ ಬೆಲೆ ಅಷ್ಟಕ್ಕಷ್ಟೇ ಎಂಬಂತಾಗಿದೆ. ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧವೇ ಇದಕ್ಕೆ ತಾಜಾ ಉದಾಹರಣೆ.
ಕೋಳಿ ಜಗಳದಂತೆ ಶುರುವಾದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವಿನ ಕಾಳಗಕ್ಕೆ 3 ತಿಂಗಳು ತುಂಬಿದೆ. ಆದರೂ ಯುದ್ಧ ನಿಲ್ಲಿಸಲು ಎರಡೂ ರಾಷ್ಟ್ರಗಳ ನಾಯಕರು ಸಿದ್ಧರಿಲ್ಲ. ಮೊದಲಿಗೆ ರಷ್ಯಾ, ನಂತರ ಅಮೆರಿಕ ಹೀಗೆ ದೊಡ್ಡ ದೊಡ್ಡ ರಾಷ್ಟ್ರಗಳ ಮಾತಿಗೂ ಈ ಎರಡೂ ರಾಷ್ಟ್ರಗಳು ಬೆಲೆ ನೀಡುತ್ತಿಲ್ಲ. ಅತ್ತ ಹೋಗಿ ಸಂಧಾನ ಎಂದು ಸಭೆ ನಡೆಸೋದು, ಹೀಗೆ ಸಂಧಾನ ನಡೆದು ಗಂಟೆಗಳು ಕಳೆಯುವುದರ ಒಳಗಾಗಿ ಮತ್ತೆ ದಾಳಿ-ಪ್ರತಿದಾಳಿ ನಡೆಸೋದು ಮಾಮೂಲಾಗಿ ಹೋಗಿದೆ.
ರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯ
ಕಳೆದ ವಾರವಷ್ಟೇ ಅಮೆರಿಕದ ಜೊತೆಯಲ್ಲಿ ಸಂಧಾನಕ್ಕೆ ಸಹಿ ಹಾಕಿದ್ದ ಅರ್ಮೇನಿಯ, ಅಜೆರ್ಬೈಜಾನ್ ನಾಯಕರು ಅದನ್ನೆಲ್ಲಾ ಮರೆತುಹೋಗಿದ್ದಾರೆ. ಈ ಮೂಲಕ ಮತ್ತೆ ಗಡಿಯಲ್ಲಿ ಯುದ್ಧ ಆರಂಭಿಸಿ, ಮತ್ತೆ ಜನರ ನೆಮ್ಮದಿ ಕೆಡಿಸಿದ್ದಾರೆ. ಅಮೆರಿಕ ಚುನಾವಣೆ ಸಂದರ್ಭದಲ್ಲಿ ಯುದ್ಧ ನಿಲ್ಲಿಸಿದ ಕೀರ್ತಿ ಗಳಿಸುವ ಟ್ರಂಪ್ ಅಸೆಗೆ ಭಗ್ನವಾಗಿದೆ.
ರಷ್ಯಾ ಕನಸು ನನಸಾಯ್ತು, ಅಮೆರಿಕಗೆ ಶಾಕ್ ಸಿಕ್ಕಿತು..!
ಒಂದಾನೊಂದು ಕಾಲದಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಸೋವಿಯತ್ ರಷ್ಯಾ ಭಾಗವಾಗಿದ್ದವು. ಆದರೆ ಸೋವಿಯತ್ ರಷ್ಯಾ ವಿಭಜನೆ ಬಳಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬೇರೆ ಬೇರೆ ದೇಶಗಳಾಗಿ ಹಂಚಿ ಹೋದವು. ಒಂದು ಕಾಲದಲ್ಲಿ ತಮ್ಮದೇ ದೇಶದ ಭಾಗವಾಗಿದ್ದ ಎರಡೂ ದೇಶಗಳು ಸಂಧಾನಕ್ಕಾಗಿ ದೂರದ ಅಮೆರಿಕ ಬಳಿ ಹೋಗುವುದು ಪುಟಿನ್ಗೆ ಬಿಲ್ಕುಲ್ ಇಷ್ಟವಿರಲಿಲ್ಲ. ಇದಕ್ಕೆಲ್ಲಾ ಕೇರ್ ಮಾಡದೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಅಮೆರಿಕ ನೇತೃತ್ವದಲ್ಲಿ ಕದನ ವಿರಾಮಕ್ಕೆ ಒಪ್ಪಿದ್ದರು. ಆದರೆ ಹೀಗೆ ಒಪ್ಪಿ ಒಂದೆರಡು ದಿನಗಳು ಕಳೆಯುವುದರ ಒಳಗೆ ಮತ್ತೆ ಜಗಳ ಆರಂಭಿಸಿವೆ. ಅಮೆರಿಕದ ಮಾತಿಗೂ ಬೆಲೆ ನೀಡಿಲ್ಲ, ಇದು ರಷ್ಯಾಗೆ ಒಳಗೊಳಗೆ ಖುಷಿ ಕೊಟ್ಟಿದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್ಗೆ ನಾಗರಿಕತ್ವ..!
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
ಮುನ್ನುಗ್ಗಿ ಬರಲಿದೆಯಾ ರಷ್ಯಾ ಮಿಲಿಟರಿ..?
ರಷ್ಯಾ ನಡೆಸಿರುವ ಸಂಧಾನಕ್ಕೆ ಎರಡೂ ದೇಶಗಳು ಬೆಲೆ ನೀಡಿಲ್ಲ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆ ನಡೆಸಲಿದ್ದಾರಾ ಎಂಬ ಕುತೂಹಲ ಇಡೀ ಜಗತ್ತನ್ನು ಕಾಡುತ್ತಿದೆ. ದಂಡಂ ದಶಗುಣಂ ಎನ್ನುವ ಹಾಗೆ, ಮಾತಿಗೆ ಬಗ್ಗದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ಗೆ ಬಂದೂಕಿನ ಮೂಲಕ ಉತ್ತರ ನೀಡುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪುಟಿನ್ ಸೇನೆ ಅಖಾಡ ಪ್ರವೇಶಕ್ಕೆ ಇದೀಗ ಸನ್ನಿವೇಶ ಸಿದ್ಧವಾಗಿದ್ದು, ರಷ್ಯಾ ಅಧ್ಯಕ್ಷ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಒಂದಂತೂ ಸತ್ಯ, ಅಕಸ್ಮಾತ್ ರಷ್ಯಾ ಸೇನೆ ಅಖಾಡಕ್ಕೆ ಇಳಿದರೆ ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಕ್ಷೆಯಿಂದಲೇ ಅಳಿಸಿ ಹೋಗುವುದು ಪಕ್ಕಾ.