ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ
ಇನ್ನೂ ಮದುವೆಯಾಗಿಲ್ಲ, ಮಕ್ಳುಮರಿಗಳನ್ನು ಮಾಡಿಕೊಂಡಿಲ್ಲ, ಮನೆ ತಗೊಂಡಿಲ್ಲ, ಪ್ರೇಯಸಿಗೆ ಮುತ್ತಲ್ಲ ಹೂವನ್ನೂ ಕೊಟ್ಟಿಲ್ಲ, ಕರ್ನಾಟಕದ ಊರೂಗಳನ್ನೆಲ್ಲ ಸುತ್ತಿ ಬಂದಿಲ್ಲ, ಇನ್ನೂ ಏನೇನೋ ಕನಸು ಕಂಡಿದ್ದೆ ಅವ್ಯಾವುವೂ ನನಸಾಗಿಲ್ಲ...
ಅಷ್ಟರಲ್ಲಿ ಜಗತ್ತೇ ಮುಳುಗಿಹೋಗಿಬಿಟ್ಟರೆ ಕಥೆಯೇನು ಎಂದು ಏನೇನೋ ಅಂದುಕೊಂಡು ಆತಂಕದಲ್ಲಿ ಮುಳುಗಿದ್ದವರು ಸ್ವಲ್ಪ ದಿನ ನಿರಾತಂಕವಾಗಿ ಇರಬಹುದು. ಏನೇನು ಕನಸುಗಳನ್ನು ಕಂಡಿದ್ದರೋ ಅವನ್ನೆಲ್ಲ ಅಲ್ಪಕಾಲದಲ್ಲಿಯೇ ಪೂರೈಸಿಕೊಳ್ಳಲು ಪ್ರಯತ್ನ ಮುಂದುವರಿಸಬಹುದು.
ಯಾಕಂದ್ರೆ, ಸೆಪ್ಟೆಂಬರ್ 23ರಂದು ಅನೂಹ್ಯ ಕ್ಷುದ್ರ ಗ್ರಹವೊಂದು ಭೂಮಿಗೆ ಅಪ್ಪಳಿಸಿ ಸರ್ವನಾಶವಾಗಿಬಿಡುತ್ತದೆ, ಜಗತ್ತೇ ಮುಳುಗಿ ಹೋಗಿಬಿಡುತ್ತದೆ ಎಂದು ಇಡೀ ಜಗತ್ತನ್ನೇ ಕತ್ತಲಲ್ಲಿ ತಳ್ಳಲು ಹೊರಟಿದ್ದ ಡೇವಿಡ್ ಮೇಡೆ ಎಂಬ ಭೂಪ, 'ವಸಿ ತಡ್ಕಳ್ಳಿ ಸಾ, ಪ್ರಳಯ ಇಗ್ಲೇ ಆಗಾಕ್ನಿಲ್ಲ, ನಮ್ಮ ಲೈಫು ಇನ್ನೂ ಸ್ವಲ್ಪ ದಿನ ಐತೆ' ಅಂತ ಪ್ರಳಯದ ದಿನವನ್ನು ಮುಂದೂಡಿದ್ದಾನೆ.
ಇನ್ನೂ ಸ್ವಲ್ಪ ದಿನ ನಿರಾತಂಕವಾಗಿ ಇರಬಹುದು ಎಂದು ಹೇಳಿರುವುದು ಯಾಕಂದ್ರೆ, ಪ್ರಳಯವಾಗುವುದೇನೋ ಗ್ಯಾರಂಟಿ, ಆದರೆ ಸೆಪ್ಟೆಂಬರ್ 23ರಂದು ಆಗುವುದಿಲ್ಲ. ಇದು ಕೇವಲ ಆರಂಭ ಮಾತ್ರ. ಇಂದಿನಿಂದ ಸರಣಿ ಸರಣಿ ಅನಾಹುತಗಳು ಶುರುವಾಗುತ್ತವೆ ಎಂದು ಮತ್ತೊಂದು ಬಾಂಬ್ ಹಾಕಿದ್ದಾನೆ ಡೇವಿಡ್ ಮೇಡೆ. ನಂಬ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆತ ಇನ್ನೂ ಏನೇನು ಹೇಳಿದ್ದಾನೆ, ಏನೇನು ಭವಿಷ್ಯವನ್ನು ಕಂಡಿದ್ದಾನೆ ಎನ್ನುವುದನ್ನು ನಿರಾತಂಕವಾಗಿ ಮುಂದೆ ಓದಿರಿ.
ಮೊದಲಿನಂತೆ ಇರಲು ಸಾಧ್ಯವೇ ಇಲ್ಲ
ವಾಷಿಂಗ್ಟನ್ ಪೋಸ್ಟ್ ಗೆ ಆತ ತಿಳಿಸಿರುವುದೇನೆಂದರೆ, ಈ ಜಗತ್ತೇನು ಕೊನೆಯಾಗುವುದಿಲ್ಲ. ಆದರೆ, ಮೊದಲಿನಂತೆ ಇರಲು ಸಾಧ್ಯವೇ ಇಲ್ಲ. ಬರುವ ಅಕ್ಟೋಬರ್ ನಿಂದ ಈ ಭೂಮಿಯ ಬಹುತೇಕ ಭಾಗಗಳು ತನ್ನ ಆಕಾರ ಕಳೆದುಕೊಳ್ಳುತ್ತವೆ, ವಾತಾವರಣ ಇಂದಿನಂತೆ ಇರುವುದಿಲ್ಲ ಇತ್ಯಾದಿ ಇತ್ಯಾದಿ. ಎಲ್ಲಿ ಏನಾಗುತ್ತದೆ ಎಂದು ಆತ ಎಲ್ಲಿಯೂ ನಿಖರವಾಗಿ ಹೇಳಿಲ್ಲ.
ಬೈಬಲ್ ನಲ್ಲಿರುವ ಸಂಕೇತಾಕ್ಷರಗಳು ನುಡಿಯುತ್ತಿವೆ
ನಾನೇನು ಪ್ರಳಯದ ಬಗ್ಗೆ ಬುರುಡೆ ಬಿಡುತ್ತಿಲ್ಲ. ಬೈಬಲ್ ನಲ್ಲಿ ಬರೆದಿರುವ ಪಂಕ್ತಿ, ಬೈಬಲ್ ನಲ್ಲಿ ಇರುವ ಸಂಕೇತಾಕ್ಷರಗಳ ಆಧಾರದ ಮೇಲೆ ಭವಿಷ್ಯವನ್ನು ನುಡಿದಿದ್ದೇನೆ ಎಂದಿದ್ದಾನೆ ಮೇಡೆ. ಇತ್ತೀಚೆಗೆ ಸಂಭವಿಸಿದ ಖಗ್ರಾಸ್ ಸೂರ್ಯಗ್ರಹಣ, ಇರ್ಮಾ, ಹಾರ್ವೆ ಚಂಡಮಾರುತಗಳು ಮುಂಬರುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡಿವೆ ಎಂದಿದ್ದಾನೆ.
ಏಸು ಕ್ರಿಸ್ತ ಬದುಕಿದ್ದು 33 ವರ್ಷ
ಎಲ್ಲಕ್ಕಿಂತ ಪ್ರಮುಖವಾಗಿದ್ದೇನೆಂದರೆ ಸಂಖ್ಯೆ 33. ಏಸು ಕ್ರಿಸ್ತ ಬದುಕಿದ್ದು 33 ವರ್ಷ. ಯಹೂದಿಗಳ ದೇವರು ಎಲೋಹಿಮ್ ಹೆಸರನ್ನು ಬೈಬಲ್ ನಲ್ಲಿ 33 ಬಾರಿ ನಮೂದಿಸಲಾಗಿದೆ. 33 ಸಂಖ್ಯಾಶಾಸ್ತ್ರದ ಪ್ರಕಾರ ಅತ್ಯಂತ ಪ್ರಮುಖವಾದ ಸಂಖ್ಯೆ. ನಾನು ಬೈಬಲ್ ಮತ್ತು ಖಗೋಳಶಾಸ್ತ್ರವನ್ನು ಕೂಡಿಸಿ ಈ ಪ್ರಳಯದ ನಿರ್ಣಯಕ್ಕೆ ಬಂದಿದ್ದೇನೆ ಎಂದು ಆತ ನಿಟ್ಟುಸಿರು ಬಿಟ್ಟಿದ್ದಾನೆ.
ಭೂಕಂಪ, ಜ್ವಾಲಾಮುಖಿ, ಸುನಾಮಿ
ನಿಬಿರು ಎಂಬ ಪ್ಲಾನೆಟ್ ಎಕ್ಸ್ ಸೆಪ್ಟೆಂಬರ್ 23ರಂದು ಭೂಮಿಯ ಸಮೀಪದಿಂದ ಹಾಯ್ದು ಹೋಗುತ್ತದಂತೆ. ಇದರಿಂದಾಗಿ ಭಯಂಕರ ಭೂಕಂಪ, ಜ್ವಾಲಾಮುಖಿ, ಸುನಾಮಿಗಳು ಸಂಭವಿಸುತ್ತವಂತೆ. ಪ್ಲಾನೆಟ್ ಎಕ್ಸ್ ಎಂಬುದೇ ಇಲ್ಲ, ಇನ್ನು ಪ್ರಳಯವೆಲ್ಲಿ ಸಂಭವಿಸುತ್ತದೆ ಎಂದು ನಾನಾ ವಿಜ್ಞಾನಿಗಳು ಮೇಡೆಯ ವ್ಯಾಖ್ಯಾನ ನೋಡಿ ಜೋರಾಗಿ ನಕ್ಕಿದ್ದಾರೆ.
ಇದೊಂದು ಸುಳ್ಳುಸುದ್ದಿ ನಂಬಬೇಡಿ
ನಿಜವಾದ ಕ್ರೈಸ್ತರು ಈ ಸುಳ್ಳು ಸುದ್ದಿಯನ್ನು ಅಜೀಬಾತ್ ನಂಬಬಾರದು ರೋಮನ್ ಪ್ರೊಟೆಸ್ಟಂಟ್ ಮತ್ತು ಕ್ಯಾಥೋಲಿಕ್ ಪಂಗಡದವರು ಕ್ರೈಸ್ತ ಬಾಂಧವರಿಗೆ ಕರೆ ನೀಡಿದ್ದಾರೆ. ಹಲವಾರು ವಿಶ್ವವಿದ್ಯಾಲಯದ ಪ್ರೊಫೆಸರುಗಳು, ವಿಜ್ಞಾನಿಗಳು ಮೇಡೆಯ ಮಾತನ್ನು ನಂಬಬೇಡಿ, ಆತ ಬರೀ ಬುರುಡೆ ಬಿಡುತ್ತಿದ್ದಾನೆ ಎಂದು ಜನರನ್ನು ಎಚ್ಚರಿಸಿದ್ದಾರೆ.
ನಮ್ಮ ಲೋಕಲ್ ಜ್ಯೋತಿಷಿಗಳು ಏನು ಹೇಳುತ್ತಾರೆ?
ಪ್ರಳಯದ ಬಗ್ಗೆ ಇಷ್ಟೆಲ್ಲ ಮಾತುಗಳು, ಚರ್ಚೆಗಳು ನಡೆಯುತ್ತಿರುವಾಗ ಟಿವಿಯಲ್ಲಿ ದಿನನಿತ್ಯ ಕಾಣಿಸಿಕೊಳ್ಳುವ ಜ್ಯೋತಿಷಿಗಳು, ಗಿಣಿಶಾಸ್ತ್ರ ಇಲಿಶಾಸ್ತ್ರ ಹೇಳುವವರು, ಬ್ರಹ್ಮಾಂಡ ಸುತ್ತುವ ಗುರೂಜಿಗಳು, ತಾಳೆಗರಿ ಓದಿ ಭವಿಷ್ಯ ನುಡಿಯುವವರು, ದರ್ಪಣ ವೀಳ್ಯದೆಲೆ ಆಧರಿಸಿ ಭವಿಷ್ಯ ಹೇಳುವವರು ಯಾಕೆ ಏನನ್ನೂ ಹೇಳುತ್ತಿಲ್ಲ?