ಯುದ್ಧದಿಂದ ಬೀದಿಪಾಲಾದ ಸಾವಿರಾರು ಸಂತ್ರಸ್ತರಿಗೆ ಚಳಿಯ ಚಿಂತೆ
ಛಿದ್ರ ಛಿದ್ರವಾಗಿರುವ ಮನೆಗಳು, ಮುಚ್ಚಿ ಹೋಗಿರುವ ರಸ್ತೆಗಳು, ಆಕಾಶ ತಲೆಮೇಲೆ ಬಿದ್ದಂತೆ ಭಾಸವಾದರೂ ಜೀವನ ನಡೆಸಬೇಕಾದ ಅನಿವಾರ್ಯತೆ. ಅಷ್ಟಕ್ಕೂ ಇದು 2ನೇ ಮಹಾಯುದ್ಧದ ದೃಶ್ಯಗಳಲ್ಲ, ನಗೊರ್ನೊ-ಕರಬಾಖ್ ಪ್ರದೇಶಕ್ಕಾಗಿ ಕಚ್ಚಾಡಿದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರ ಕೃತ್ಯದ ಪರಿಣಾಮ. ತಿಂಗಳ ಹಿಂದಷ್ಟೇ ಅಲ್ಲಿ ಎಲ್ಲವೂ ಸೌಖ್ಯವಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಸಾಗಿತ್ತು. ಆದರೆ ಯಾವಾಗ ಯುದ್ಧ ಆರಂಭವಾಯಿತೋ, ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಗಡಿ ಪ್ರದೇಶಗಳು ಅಲ್ಲಾಡಿ ಹೋಗಿವೆ.
ಒಬ್ಬರ ಮೇಲೊಬ್ಬರು ಜನುಮ ಜನುಮದ ಶತ್ರುಗಳಂತೆ ಶೆಲ್, ರಾಕೆಟ್ ಹಾರಿಸಿದ್ದಾರೆ. ಆದರೆ ಇಲ್ಲಿ ಯಾವುದೇ ರಾಜಕೀಯ ನಾಯಕನ ಮನೆಯೂ ಕೆಡವಿಲ್ಲ. ಬದಲಾಗಿ ಬಡವನ ಗುಡಿಸಲು ಬೀದ್ದಿವೆ. ಸಾವಿರಾರು ಕನಸು ಹೊತ್ತು ಕಟ್ಟಿದ್ದ ಮನೆಗಳು ನೆಲಸಮವಾಗಿವೆ. ಅರ್ಮೇನಿಯ, ಅಜೆರ್ಬೈಜಾನ್ ಸರ್ಕಾರದ ಮಾಹಿತಿ ಪ್ರಕಾರ ಈವರೆಗೂ 633 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಆದರೆ ಲೆಕ್ಕವೇ ಸಿಗದಷ್ಟು ಜನ ಕಾಣೆಯಾಗಿದ್ದಾರೆ.
ಯುದ್ಧಕ್ಕೆ ಸಿದ್ಧವಾಯ್ತಾ ರಷ್ಯಾ, ಮಾತು ಕೇಳದವರಿಗೆ ಶಾಕ್..!
ಸಾವಿರ ಸಾವಿರ ಮಂದಿ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿ ಮಣ್ಣಾಗಿದ್ದಾರೆ. ಹೀಗೆ ಲೆಕ್ಕ ಕೊಡುವ ಎರಡೂ ದೇಶಗಳ ನಾಯಕರು ತಮ್ಮದಲ್ಲದ ತಪ್ಪಿಗೆ ಪ್ರಾಣಬಿಟ್ಟಿರುವ ಅಮಾಯಕರನ್ನು ಲೆಕ್ಕಕ್ಕೇ ಸೇರಿಸುತ್ತಿಲ್ಲ. ತುಂಡು ಭೂಮಿಗಾಗಿ ಲಕ್ಷಾಂತರ ಜನರನ್ನು ಬೀದಿಪಾಲು ಮಾಡಿ, ಸಾವಿರಾರು ಜನರನ್ನು ಬಲಿ ನೀಡಲಾಗಿದೆ. ಆದರೂ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಯುದ್ಧ ನಿಲ್ಲಿಸಲು ತಯಾರಿಲ್ಲ.
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.
ರಷ್ಯಾ ಹೇಳಿದರೂ ಯುದ್ಧ ನಿಲ್ಲಲಿಲ್ಲ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ರಷ್ಯಾ ಒಂದು ಸುತ್ತಿನ ಶಾಂತಿ ಮಾತುಕತೆ ನಡೆಸಿದೆ. ಖುದ್ದು ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸಲು ಅಖಾಡ ಪ್ರವೇಶ ಮಾಡಿದ್ದರು. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದ್ದವು. ಆದರೆ ಹೀಗೆ ಕದನ ವಿರಾಮಕ್ಕೆ ಒಪ್ಪಿದ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೆ ದಾಳಿ, ಪ್ರತಿದಾಳಿ ನಡೆದಿದೆ. ಹೀಗಾಗಿ ರಷ್ಯಾ ನಡೆಸಿದ ಸಂಧಾನ ವಿಫಲವಾಗಿದೆ. ಈಗಲೂ ಎರಡೂ ದೇಶಗಳ ಮಧ್ಯೆ ಗುಂಡಿನ ಕಾಳಗ ನಡೆಯುತ್ತಿದ್ದು, ಸಣ್ಣ ಸಣ್ಣ ಮಕ್ಕಳ ಜೊತೆ ಕುಟುಂಬಗಳು ಅಲ್ಲಿಂದ ಗುಳೆ ಹೊರಟಿವೆ. ಗುಳೆ ಹೊರಡುವವರ ಮೇಲೂ ಅಟ್ಯಾಕ್ ನಡೆಯುತ್ತಿದೆ.
ಯುದ್ಧ ನಿಲ್ಲಿಸುವ ಪ್ರಯತ್ನ ವಿಫಲ, ಸೈನಿಕರು ಸೇರಿ ಸಾವಿರಾರು ಮಂದಿ ಬಲಿ
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
ಮುನ್ನುಗ್ಗಿ ಬರಲಿದೆಯಾ ರಷ್ಯಾ ಮಿಲಿಟರಿ..?
ರಷ್ಯಾ ನಡೆಸಿರುವ ಸಂಧಾನಕ್ಕೆ ಎರಡೂ ದೇಶಗಳು ಬೆಲೆ ನೀಡಿಲ್ಲ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆ ನಡೆಸಲಿದ್ದಾರಾ ಎಂಬ ಕುತೂಹಲ ಇಡೀ ಜಗತ್ತನ್ನು ಕಾಡುತ್ತಿದೆ. ದಂಡಂ ದಶಗುಣಂ ಎನ್ನುವ ಹಾಗೆ, ಮಾತಿಗೆ ಬಗ್ಗದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ಗೆ ಬಂದೂಕಿನ ಮೂಲಕ ಉತ್ತರ ನೀಡುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪುಟಿನ್ ಸೇನೆ ಅಖಾಡ ಪ್ರವೇಶಕ್ಕೆ ಇದೀಗ ಸನ್ನಿವೇಶ ಸಿದ್ಧವಾಗಿದ್ದು, ರಷ್ಯಾ ಅಧ್ಯಕ್ಷ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಒಂದಂತೂ ಸತ್ಯ, ಅಕಸ್ಮಾತ್ ರಷ್ಯಾ ಸೇನೆ ಅಖಾಡಕ್ಕೆ ಇಳಿದರೆ ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಕ್ಷೆಯಿಂದಲೇ ಅಳಿಸಿ ಹೋಗುವುದು ಪಕ್ಕಾ.