ನೇಪಾಳ ಸಂಸತ್ತು ವಿಸರ್ಜಿಸಿದ ರಾಷ್ಟ್ರಪತಿ - ನವೆಂಬರ್ನಲ್ಲಿ ಚುನಾವಣೆ
ಕಠ್ಮಂಡು, ಮೇ 22: ನೇಪಾಳ ಸರ್ಕಾರವನ್ನು ಅಲ್ಲಿನ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಶನಿವಾರ ವಿಸರ್ಜಿಸಿದ್ದು ನವೆಂಬರ್ನಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಿಗದಿ ಮಾಡಿದ್ದಾರೆ.
ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿದ್ದು ಈ ವಿಶ್ವಾಸಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಸೋತ ಹಿನ್ನೆಲೆ ಪ್ರಧಾನಿ ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ಬಂದಿತ್ತು. ನೇಪಾಳ ಸಂಸತ್ತಿನ ಕೆಳಮನೆಯಲ್ಲಿ 275 ಸದಸ್ಯರು ಇದ್ದು, ವಿಶ್ವಾಸ ಮತ ಪಡೆದು ಅಧಿಕಾರ ಮುಂದುವರೆಸಲು ಕನಿಷ್ಠ 136 ಮತಗಳು ಬೇಕಾಗಿತ್ತು. ಆದರೆ ಪ್ರಧಾನಿ ಒಲಿಗೆ 93 ಮತಗಳು ಮಾತ್ರ ಲಭಿಸಿತ್ತು. ಪ್ರಮುಖವಾಗಿ 124 ಸದಸ್ಯರು ಒಲಿ ವಿರುದ್ಧ ಮತಹಾಕಿದ್ದು 15 ಸದಸ್ಯರು ತಟಸ್ಥರಾಗಿದ್ದರು.
ನೇಪಾಳದಲ್ಲಿ ಅತಂತ್ರ ಸ್ಥಿತಿ, ಸರ್ಕಾರ ರಚನೆಗೆ ಸಿಕ್ಕಾಪಟ್ಟೆ ಸರ್ಕಸ್!
ಈ ಹಿನ್ನೆಲೆ ನೇಪಾಳ ಸಂವಿಧಾನದ 76 (2)ನೇ ವಿಧಿಯ ಅನ್ವಯ ಹೊಸ ಸರ್ಕಾರ ರಚನೆಗೆ ನೇಪಾಳ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಮೂರು ದಿನಗಳ ಸಮಯವಕಾಶ ನೀಡಿದ್ದರು. ಆದರೆ ಈ ಗಡುವು ಮುಗಿದರೂ ಯಾವುದೇ ಪಕ್ಷ ಸರ್ಕಾರ ರಚಿಸದ ಹಿನ್ನೆಲೆ ಮತ್ತೆ ಓಲಿಯನ್ನೇ ಉಸ್ತುವಾರಿ ಪ್ರಧಾನಿಯನ್ನಾಗಿ ಮಾಡಲಾಗಿತ್ತು.
ಬಳಿಕ ಶುಕ್ರವಾರದವರೆಗೆ ನೀಡಲಾದ ಗಡುವಿನಲ್ಲಿ ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿಯಾಗಲಿ, ವಿರೋಧ ಪಕ್ಷದ ನಾಯಕರಾಗಲಿ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಹಿನ್ನೆಲೆ ಈಗ ರಾಷ್ಟ್ರಪತಿ ನೇಪಾಳ ಸಂಸತ್ತನ್ನೇ ವಿಸರ್ಜಿಸಿ ನವೆಂಬರ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಮಧ್ಯರಾತ್ರಿ ಹೊರಡಿಸಿರುವ ರಾಷ್ಟ್ರಪತಿಗಳ ಪ್ರಕಟಣೆಯಲ್ಲಿ, ರಾಷ್ಟ್ರಪತಿಗಳು ಸಂಸತ್ತನ್ನು ವಿಸರ್ಜಿಸಿದ್ದಾರೆ. ಹೊಸ ಸರ್ಕಾರದ ರಚನೆಗಾಗಿ ಮೊದಲ ಹಂತದ ಸಾರ್ವತ್ರಿಕ ಚುನಾವಣೆಯು ನವೆಂಬರ್ 12 ರಂದು ಹಾಗೂ ಎರಡನೇ ಹಂತದ ಚುನಾವಣೆಯು ನವೆಂಬರ್ 19 ರಂದು ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ. ಹಾಗೆಯೇ ಉಸ್ತುವಾರಿ ಪ್ರಧಾನಿ ಒಲಿ ನೇತೃತ್ವದ ಸಂಪುಟದ ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೂಡಾ ರಾಷ್ಟ್ರಪತಿಗಳ ಪ್ರಕಟಣೆ ತಿಳಿಸಿದೆ.
ಬಾಯಿಗೆ ಬಿತ್ತು ಲಡ್ಡು..! ಬಹುಮತ ಸಿಗದಿದ್ದರೂ 'ಓಲಿ' ಮತ್ತೊಮ್ಮೆ ಪ್ರಧಾನಿ..!
ಇನ್ನು 2020 ರ ಡಿಸೆಂಬರ್ನಲ್ಲಿ ಕೆಪಿ ಶರ್ಮಾ ಒಲಿ ಸಂಪುಟವನ್ನು ವಿಸರ್ಜನೆ ನಿರ್ಧಾರದ ವಿರುದ್ದ ಭಾರೀ ಆಕ್ರೋಶ ಎದ್ದಿತ್ತು. ಈ ಆದೇಶ ಅಸಂವಿಧಾನಿಕ ಎಂದು 2021 ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಈ ನಡುವೆ ನೇಪಾಳದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನೇಪಾಳವು ಕೊರೊನಾ ಎರಡನೇ ಅಲೆಯಲ್ಲಿ ಹೈರಾಣಾಗಿದ್ದು ಈ ನಡುವೆ ರಾಜಕೀಯ ಬೆಳವಣಿಗೆಗಳು ಜನರನ್ನು ಸಂಕಷ್ಟಕ್ಕೆ ದೂಡಿದೆ.
ನೇಪಾಳದಲ್ಲಿ 4,88,645 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5,847 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ನೇಪಾಳದಲ್ಲಿ ಮೇ 7 ರಿಂದ ಮೇ 20 ರವರೆಗಿನ 14 ದಿನಗಳ ಕಾಲಾವಧಿಯಲ್ಲೇ 1,20,065 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
(ಒನ್ಇಂಡಿಯಾ ಸುದ್ದಿ)