ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ
ಕಠ್ಮಂಡು, ಮೇ 25: ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ ಈಗ ಕೋವಿಡ್ 19 ಸೋಂಕು ಹಬ್ಬಲು ಭಾರತದಿಂದ ಬಂದಿರುವ ಪ್ರಯಾಣಿಕರು ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದೆ.
"ಭಾರತದಿಂದ ನೇಪಾಳಕ್ಕೆ ಬರುವವರಿಗೆ ಸರಿಯಾದ ಪರೀಕ್ಷೆ ನಡೆಸದ ಕಾರಣ ನೇಪಾಳದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ" ಎಂದು ಓಲಿ ಹೇಳಿದ್ದಾರೆ. ನೇಪಾಳ ತನ್ನ ನೆಲದಿಂದ ಚೀನಾಕ್ಕೆ ಸಂಪರ್ಕ ಕಲ್ಪಿಸಲು ಸಮಾನಾಂತರವಾಗಿ ರಸ್ತೆ ನಿರ್ಮಾಣದಲ್ಲಿ ತೊಡಗಿರುವ ಸುದ್ದಿ ಬಂದ ಬೆನ್ನಲ್ಲೇ ನೇಪಾಳದ ಪ್ರಧಾನ ಮಂತ್ರಿ ಕೆಪಿ ಶರ್ಮ ಓಲಿ ಅವರು ಹೀಗೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ
"ನೇಪಾಳದಲ್ಲಿ ಕೊವಿಡ್ 19 ಮರಣ ಪ್ರಮಾಣ ಕಡಿಮೆ ಇದೆ ಹೀಗಾಗಿ ಯಾರೂ ಗಾಬರಿಯಾಗುವ ಅಗತ್ಯವಿಲ್ಲ, ಭಾರತದಿಂದ ಬರುವವರಿಗೆ ಸರಿಯಾಗಿ ಕೊವಿಡ್ 19 ಪರೀಕ್ಷೆ ನಡೆಸುತ್ತಿಲ್ಲ, ಹೀಗಾಗಿ ನೇಪಾಳದಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ" ಎಂದಿದ್ದಾರೆ. ನೇಪಾಳದಲ್ಲಿ ಸೋಮವಾರದಂದು 79 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 682 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.
ಭಾರತದಿಂದ ನೇಪಾಳಕ್ಕೆ ಅಕ್ರಮವಾಗಿ ನುಗ್ಗುವವರ ಸಂಖ್ಯೆ ಅಧಿಕವಾಗಿರುವುದರಿಂದ ಸೋಂಕು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ. ಗಡಿಭಾಗದ ಸ್ಥಳೀಯ ರಾಜಕಾರಣಿಗಳು ಆಡಳಿತಗಾರರ ಭ್ರಷ್ಟಾಚಾರದಿಂದ ಅಕ್ರಮ ನುಸುಳುವಿಕೆ ನಿರಂತರವಾಗಿದೆ. ಇದನ್ನು ನೇಪಾಳ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಪಿಎಂ ಓಲಿ ಹೇಳಿಕೆ ಈ ಅಕ್ರಮ ವಲಸೆ, ನುಸುಳುವಿಕೆಯತ್ತ ಬೊಟ್ಟು ಮಾಡುತ್ತದೆ. ಚೀನಾ, ಇಟಲಿಗಿಂತ ಭಾರತದಲ್ಲಿ ಕೋವಿಡ್ 19 ಮಾರಕವಾಗಿ ಪರಿಣಮಿಸುತ್ತಿದೆ ಎಂದು ಈ ಮುಂಚೆ ಓಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.