ನೇಪಾಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!
ಭಾರತದ ನೆರೆಯ ದೇಶ ನೇಪಾಳ ಕೂಡ ಹಿಂದೂ ರಾಷ್ಟ್ರವಾಗಿದೆ. ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿದ್ದು, ನೇಪಾಳದಲ್ಲಿ ಹಿಂದೂ ಧರ್ಮಿಯರೇ ಬಹುಸಂಖ್ಯಾತರು. ಹೀಗಾಗಿಯೇ ನೇಪಾಳವನ್ನು ದೇಗುಲಗಳ ನಾಡು ಎಂದೂ ಕರೆಯುತ್ತಾರೆ.
ಇದೀಗ ಈ ದೇಗುಲಗಳ ಸಾಲಿಗೆ ಮತ್ತೊಂದು ದೇಗುಲ ಕೂಡ ಸೇರ್ಪಡೆಯಾಗಲಿದೆ. ಹೌದು, ನೇಪಾಳದ ಅಯೋಧ್ಯಪುರಿಯಲ್ಲಿ ಶ್ರೀರಾಮನ ಬೃಹತ್ ದೇಗುಲ ನಿರ್ಮಾಣ ಕಾರ್ಯಕ್ಕೆ ನೇಪಾಳ ಸರ್ಕಾರ ಹಣ ಬಿಡುಗಡೆ ಮಾಡಿದೆ. ದೇಗುಲ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ. ಹಣವನ್ನು ವೆಚ್ಚ ಮಾಡುತ್ತಿದೆ ನೇಪಾಳ ಸರ್ಕಾರ. ಅಂದಹಾಗೆ ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮೂಡಿದ್ದು ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಈಗಾಗಲೇ ಬಿದ್ದು ಹೋಗಿದೆ.
ಈ ನಡುವೆ ಕೊರೊನಾ ಕಾರಣದಿಂದ ಆರ್ಥಿಕವಾಗಿ ನೇಪಾಳ ನಲುಗಿದೆ. ಆದರೂ ದೇಗುಲ ನಿರ್ಮಾಣಕ್ಕೆ ಹಿಂದಿನ ಬಜೆಟ್ನಲ್ಲಿ ಮಾತು ಕೊಟ್ಟಂತೆ ನೇಪಾಳ ಸರ್ಕಾರ ಹಣ ರಿಲೀಸ್ ಮಾಡಿದೆ. ಅಯೋಧ್ಯಪುರಿಯಲ್ಲಿ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಬಹುದು ಎಂಬುದರ ಬಗ್ಗೆ ನೇಪಾಳ ಸರ್ಕಾರ ನಿಖರವಾಗಿ ಮಾಹಿತಿ ನೀಡಿಲ್ಲ.
ಪಶುಪತಿನಾಥ ದೇಗುಲದ ಅಭಿವೃದ್ಧಿ
ವಿಶ್ವ ಪಾರಂಪರಿಕ ತಾಣ ಪಶುಪತಿನಾಥ ದೇಗುಲದ ಅಭಿವೃದ್ಧಿಗೂ ನೇಪಾಳ ಸರ್ಕಾರ ಹಣ ಕೊಟ್ಟಿದೆ. ಸದ್ಯ ನೇಪಾಳ ಭಾರಿ ತೊಂದರೆಯಲ್ಲಿದೆ, ಇದರ ಜೊತೆಗೆ ಸರ್ಕಾರ ಕೂಡ ಬಿದ್ದು ಹೋಗಿದೆ. ಹೀಗಾಗಿ ಕೊರೊನಾ ವಿರುದ್ಧ ಗೆದ್ದು ನಿಲ್ಲಲು ಪ್ರವಾಸಿ ತಾಣಗಳ ಅಭಿವೃದ್ಧಿ ಮುಖ್ಯವಾಗಿದೆ. ಹೀಗಾಗಿ ದೇಗುಲಗಳ ಜೊತೆ ಪ್ರವಾಸಿ ತಾಣಗಳ ಅಭಿವೃದ್ಧಿಗೂ ನೇಪಾಳ ಸರ್ಕಾರ ಹಣ ಕೊಟ್ಟಿದೆ. ಸ್ಥಳೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿ ಜೊತೆ ರಸ್ತೆ ಮಾರ್ಗಗಳ ಅಭಿವೃದ್ಧಿ ಹಾಗೂ ಪ್ರವಾಸಿಗರನ್ನು ಸೆಳೆಯುವ ಯೋಜನೆಗಳಿಗೆ ಅಸ್ತು ಎಂದಿದೆ ನೇಪಾಳ.
ವಿಶ್ವಾಸ ಮತ ಸೋತಿದ್ದ ಸರ್ಕಾರ..!
ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದ ಓಲಿಗೆ 136 ಮತ ಬೇಕಿತ್ತಾದ್ರೂ ಸಿಕ್ಕಿದ್ದು 93 ಮತ ಮಾತ್ರ. ಈ ಮೂಲಕ ಓಲಿ ಸೋಲುಕಂಡು ಸರ್ಕಾರ ಬಿದ್ದು ಹೋಗಿತ್ತು. ಆ ಘಟನೆ ಬಳಿಕ ಮತ್ತಷ್ಟು ರಾಜಕೀಯ ಹೈಡ್ರಾಮಾ ನಡೆದು, ಕಡೆಗೆ ಹೊಸ ಚುನಾವಣೆಗೆ ಆದೇಶ ಹೊರಡಸಿದ್ದ ನೇಪಾಳ ಅಧ್ಯಕ್ಷೆ ಬಿಡಿಯಾ ದೇವಿ ಓಲಿ ಅವರನ್ನೇ ತಾತ್ಕಾಲಿಕವಾಗಿ ಪ್ರಧಾನಿ ಪಟ್ಟದಲ್ಲಿ ಕೂರಿಸಿದ್ದಾರೆ.
ವಿಶ್ವಾಸ ಮತ ಏಕೆ..?
ಅಂದಹಾಗೆ ಓಲಿ ಪ್ರತಿನಿಧಿಸುತ್ತಿದ್ದ ಸಿಪಿಎನ್-ಯುಎಂಎಲ್ ಹಾಗೂ ಪುಷ್ಪಕಮಲ್ ದಹಾಲ್ (ಪ್ರಚಂಡ) ನೇತೃತ್ವದ ಸಿಪಿಎನ್ (ಮಾವೋವಾದಿ) ಮೈತ್ರಿಕೂಟ ಸರ್ಕಾರವನ್ನ ರಚಿಸಿದ್ದವು. ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪ್ರಚಂಡ ನೇತೃತ್ವದ ಪಕ್ಷ ಹಿಂಪಡೆದಿತ್ತು. ಇಷ್ಟಲ್ಲದೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧವೇ ಸರ್ಕಾರದ ಮಿತ್ರಪಕ್ಷಗಳು ರೊಚ್ಚಿಗೆದ್ದಿದ್ದವು. ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಲಾಗಿತ್ತು. ಪ್ರಧಾನಿ ಓಲಿ ಶಿಫಾರಸಿನ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿ ಅಧಿವೇಶನ ಕರೆದಿದ್ದರು. ಓಲಿ ಸಂಸತ್ ಕೆಳಮನೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿ ಸೋಲು ಕಂಡಿದ್ದಾರೆ.
ಪಕ್ಷದಿಂದಲೇ ಉಚ್ಛಾಟನೆ ಆಗಿದ್ದರು
2017ರಲ್ಲಿ ನೇಪಾಳ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು. ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ ಆಡಳಿತರೂಢ ಎನ್ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿ, ಓಲಿ ಬೆಂಬಲ ಕಳೆದುಕೊಂಡರು. ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್ಸಿಪಿ)ವನ್ನು ಬಿಟ್ಟು, ಬಂಡಾಯಗಾರ ಮಾವೋವಾದಿಗಳ ಓಲೈಸುತ್ತಾ ಬಂದ ಆರೋಪದಡಿ ಕೆ.ಪಿ ಶರ್ಮಾ ಓಲಿ ಅವರನ್ನು ಜನವರಿಯಲ್ಲಿ ಉಚ್ಛಾಟನೆ ಮಾಡಲಾಗಿತ್ತು. ಕಮ್ಯೂನಿಸ್ಟ್ ಪಕ್ಷ ಅಧಿಕೃತವಾಗಿ ಈ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿತ್ತು.
‘ಕೊರೊನಾ’ ಕಾರಣವೂ ಇದೆ
ಮಹಾಮಾರಿ ಕೊರೊನಾ ಜಗತ್ತನ್ನು ಕಾಡುತ್ತಿರುವಂತೆ ನೇಪಾಳವನ್ನೂ ಕಾಡುತ್ತಿದೆ. ನೇಪಾಳದಲ್ಲಿ ಸುಮಾರು 4 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ಸಾವಿರಾರು ಜನ ಪ್ರಾಣಬಿಟ್ಟಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಕೆ.ಪಿ.ಶರ್ಮಾ ಓಲಿ ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಇತ್ತು. ಓಲಿ ಕೊರೊನಾ ಮತ್ತು ಪಕ್ಷ ಎರಡನ್ನೂ ನಿಭಾಯಿಸುವಲ್ಲಿ ಸೋತಿದ್ದಾರೆಂದು ಆರೋಪಿಸಲಾಗಿತ್ತು. ಎಲ್ಲದರ ಪರಿಣಾಮ ಕೆ.ಪಿ.ಶರ್ಮಾ ಓಲಿ ಸಂಸತ್ನಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ನೇಪಾಳದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮೂಡಿದ್ದು, ಕೊರೊನಾ ಕಂಟಕದ ನಡುವೆ ಜನರು ಮತ್ತಷ್ಟು ಗೊಂದಲಕ್ಕೆ ಸಿಲುಕುವಂತಾಗಿದೆ.