ಭೂಮಿಗೆ ಬಾಂಬ್ ಇಟ್ಟಿದ್ದಾಯ್ತು, ಈಗ ಸಮುದ್ರ ನಾಶ ಮಾಡಲು ತಯಾರಿ?
ಹೇಳಿ ಹೇಳಿ ಸಾಕಾಯ್ತು, ಕೇಳಿ ಕೇಳಿ ಸುಸ್ತಾಯ್ತು. ಇನ್ನೇನಿದ್ರೂ ವಿಜ್ಞಾನಿಗಳು ರೊಚ್ಚಿಗೇಳುವುದು ಬಾಕಿ ಇದೆ. 'ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ, ಗೋರ್ಕಲ್ಲ ಮೇಲೆ ಮಳೆ ಸುರಿದರಾ ಕಲ್ಲು, ನೀರ್ಕೊಂಬುದುಂಟೆ ಸರ್ವಜ್ಞ' ಮಹಾಕವಿ ಸರ್ವಜ್ಞರ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ವಿಜ್ಞಾನಿಗಳು ಬೇಡ ಬೇಡ ಎನ್ನುತ್ತಾ ಎಚ್ಚರಿಕೆ ಕೊಡುತ್ತಿದ್ದರೂ, ಮನುಷ್ಯ ಮಾತ್ರ ತನ್ನ ಗಡಿ ಮೀರಿ ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಈ ಮೂಲಕ ತನಗೆ ಏನೂ ಆಗಲಾರದು, ಏನೇ ಆದರೂ ನೋಡಿ ಬಿಡುವ ಎಂಬ ಮನಸ್ಥಿತಿಯಲ್ಲಿದ್ದಾನೆ.
ಅಷ್ಟಕ್ಕೂ ಈ ಮಾತು ಯಾಕಪ್ಪಾ ಅಂದ್ರೆ ಆಧುನಿಕ ಮಾನವ ಅಭಿವೃದ್ಧಿ ಹೆಸರಲ್ಲಿ ಭೂಮಿಯನ್ನ ಹಾಳು ಮಾಡಿದ್ದಾಗಿದೆ. ಈಗಾಗಲೇ ನೆಲದ ಮೇಲೆ ಇರುವುದನ್ನು ಬಗೆದು, ತಿಂದು ತೇಗಿದ್ದಾಗಿದೆ. ಇದೀಗ ಕೆಲವು ದುರಾಸೆ ಕಣ್ಣುಗಳು ಸಾಗರದ ಮೇಲೂ ಬಿದ್ದಿದೆ. ಹೌದು, ಸಾಗರದ ಆಳದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ಎಂದು ಒಂದು ಪುಟ್ಟ ರಾಷ್ಟ್ರ ದೊಡ್ಡ ಬೇಡಿಕೆ ಇಟ್ಟಿದೆ.
ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಒಂದು ಸಣ್ಣ ಚುಕ್ಕಿಯಂತೆ ಕಾಣುವ 'ನೌರು' ಎಂಬ ರಾಷ್ಟ್ರಕ್ಕೆ ವಿನಾಶಕಾರಿ ಐಡಿಯಾ ಹೊಳೆದಿದೆಯಂತೆ! ಇದಕ್ಕಾಗಿ ವಿಶ್ವಸಂಸ್ಥೆ ಬಳಿಯೂ 'ನೌರು' ರಾಷ್ಟ್ರ ಒತ್ತಾಯ ಮಾಡುತ್ತಿದ್ದು, 2 ವರ್ಷದ ಒಳಗೆ ನಮಗೆ ಒಪ್ಪಿಗೆ ನೀಡಿ ಎಂದು ಬೆದರಿಕೆ ತಂತ್ರ ಮುಂದೊಡ್ಡಿದೆ.
ದಿವಾಳಿ ರಾಷ್ಟ್ರಕ್ಕೆ ದುರಾಸೆ..!
ನೌರು ಎಂಬ ದ್ವೀಪರಾಷ್ಟ್ರ ಅದೆಷ್ಟು ಚಿಕ್ಕದು ಎಂದರೆ, ಇಡೀ ಜಗತ್ತಿನಲ್ಲೇ ಅತಿ ಪುಟ್ಟ ಗಣರಾಜ್ಯವಾಗಿದೆ. ಅರೆರೆ ಇಷ್ಟು ಪುಟ್ಟ ರಾಷ್ಟ್ರಕ್ಕೆ ಅಷ್ಟು ದೊಡ್ಡ ದುರಾಸೆ ಬರಲು ಕಾರಣವೇನು? ಹೀಗೆ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು, ಅದಕ್ಕೆ ಉತ್ತರ ಇಲ್ಲಿದೆ. ಸುಮಾರು 21 ಚದರ ಕಿಲೋ ಮೀಟರ್, ಅಂದರೆ ನಮ್ಮ ರಾಜ್ಯದ ಲೆಕ್ಕದಲ್ಲಿ ಒಂದು ತಾಲೂಕು ಇರುವಷ್ಟು ಜಾಗದಲ್ಲಿ ನೌರು ದೇಶ ಹರಡಿಕೊಂಡಿದೆ. ಆದರೆ ನೌರು ದೇಶದ ಸುತ್ತಲೂ ಜಗತ್ತಿನಲ್ಲೇ ಅತಿದೊಡ್ಡದಾದ ಸಾಗರ ಹರಡಿದೆ. ಹೇಗಿದ್ದರೂ ನೌರು ದೇಶ ದಿವಾಳಿಯಾಗಿದ್ದು, ತನ್ನ ಸುತ್ತಮುತ್ತ ಸಮುದ್ರದ ಆಳದಲ್ಲಿ ನೆಲ ಬಗೆದು ಗಣಿಗಾರಿಕೆ ನಡೆಸಲು ಪ್ರಯತ್ನಿಸುತ್ತಿದೆ.
ಈಗಾಗಲೇ ಎಲ್ಲಾ ಹಾಳಾಗಿದೆ..!
ನೌರು ರಾಷ್ಟ್ರದ ಬಗ್ಗೆ ಹಲವು ಕುತೂಹಲಗಳು ತೆರೆದುಕೊಳ್ಳುತ್ತವೆ. ಅಂದಹಾಗೆ ‘ನೌರು' ಅಧಿಕೃತ ರಾಜಧಾನಿ ಇಲ್ಲದೇ ಇರುವ ಪ್ರಪಂಚದ ಏಕೈಕ ದೇಶ! ಇಲ್ಲಿನ ಜನಸಂಖ್ಯೆ 13 ಸಾವಿರ ದಾಟಿಲ್ಲ! ಆದರೆ ಇಲ್ಲಿದ್ದ ಅಷ್ಟೂ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲಾಗಿದೆ. ನೌರು ಫಾಸ್ಫೇಟ್ ಶಿಲೆ ಆಧಾರಿತ ದ್ವೀಪವಾಗಿದೆ. ಆದರೆ ಇದೇ ಫಾಸ್ಫೇಟ್ ನೌರುಗೆ ಮುಂದೆ ಮುಳುವಾಗಿ ಹೋಗುತ್ತದೆ. ಗೊಬ್ಬರದಲ್ಲಿ ಫಾಸ್ಫೇಟ್ ಉಪಯೋಗಿಸುವ ಕಾರಣ ಫಾಸ್ಫೇಟ್ ಗಣಿಗಾರಿಕೆ ಅತಿ ದೊಡ್ಡ ಉದ್ಯಮವಾಗಿ ಬೆಳೆದಿತ್ತು. ಆದರೆ ಅಲ್ಲಿನ ಸರ್ಕಾರ ಹಾಗೂ ಅಲ್ಲಿ ಗಣಿಗಾರಿಕೆ ನಡೆಸಿದವರು ಮನಸ್ಸಿಗೆ ಬಂದಂತೆ ನೆಲ ಬಗೆದರು. ಇದರಿಂದ ನೌರು ಬೀದಿಪಾಲಾಗುವ ಪರಿಸ್ಥಿತಿ ಬಂತು. ಒಂದು ಕಾಲದಲ್ಲಿ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದ್ದ ನೌರು ಈಗ ಬಡರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಬೇರೆಯವರ ಸಹಾಯಕ್ಕಾಗಿ ಕಾಯುತ್ತಿದೆ. ಹೀಗಾಗಿ ಸಾಗರ ಆಳದಲ್ಲಿ ಗಣಿಗಾರಿಕೆ ನಡೆಸಿ, ದುಡ್ಡು ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ದಿವಾಳಿಯಾದ ದ್ವೀಪರಾಷ್ಟ್ರ..!
ನೌರು ದ್ವೀಪದ ಪಾಡು ಹೇಗಿದೆ ಎಂದರೆ, ಅಲ್ಲಿನ ಆರ್ಥಿಕ ಸ್ಥಿತಿ ಹಳ್ಳಹಿಡಿದು ಹೋಗಿದೆ. ಸದ್ಯಕ್ಕೆ ಆಸ್ಟ್ರೇಲಿಯಾ ನೀಡುವ ಪುಡಿಗಾಸು ಆ ದೇಶವನ್ನ ಕಾಪಾಡುತ್ತಿದೆ. ಅಗತ್ಯ ವಸ್ತುಗಳನ್ನು ಹೊರಗಿನಿಂದಲೇ ತರಿಸಿಕೊಳ್ಳಬೇಕಿದೆ. ಇದ್ದ ನೆಲದಲ್ಲಿ ಗಣಿಗಾರಿಕೆ ಮಾಡಿ, ಕೃಷಿಗೂ ಯೋಗ್ಯವಲ್ಲದಂತೆ ನೆಲ ಹಾಳು ಮಾಡಿದ್ದಾರೆ. ಅಷ್ಟೋ, ಇಷ್ಟೋ ತೆಂಗಿನ ಮರ ಕಾಣುತ್ತವೆ. ಇದು ಬಿಟ್ರೆ ಮೀನುಗಾರಿಕೆ ಮೇಲೂ ಫಾಸ್ಫೇಟ್ ಮೈನಿಂಗ್ ಪ್ರಭಾವ ಬೀರಿಬಿಟ್ಟಿದೆ. ಈ ಕಾರಣಕ್ಕೆ ಹೇಗಾದರೂ ಮಾಡಿ ದುಡ್ಡು ಮಾಡಲು ಅಲ್ಲಿನ ಸರ್ಕಾರ ಪರದಾಡುತ್ತಿದೆ. ಅಕಸ್ಮಾತ್ ಸಾಗರದ ಆಳದಲ್ಲಿ ಗಣಿಗಾರಿಕೆ ನಡೆಸಲು ‘ನೌರು'ಗೆ ಪರ್ಮಿಷನ್ ಸಿಕ್ಕರೆ, ಜಲಚರಗಳ ಕಥೆ ಮುಗಿದು ಹೋಗುತ್ತದೆ.
Recommended Video
ವಿಜ್ಞಾನಿಗಳು ಏನ್ ಹೇಳ್ತಾರೆ..?
ವಿಜ್ಞಾನ ಲೋಕಕ್ಕೂ ತಾಳ್ಮೆ ಮುಗಿದು ಹೋಗಿರಬಹುದು. ದಿನದಿಂದ ದಿನಕ್ಕೆ ಎದುರಾಗುತ್ತಿರುವ ಪ್ರಾಕೃತಿಕ ವಿಕೋಪಗಳು, ತಾಪಮಾನ ಏರಿಕೆ, ಕಾಡ್ಗಿಚ್ಚು, ಹಿಮ ಕರಗುತ್ತಿರುವುದು, ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ ನೆಲವನ್ನೇ ನುಂಗುತ್ತಿರುವುದು. ಹೀಗೆ ಒಂದಾ.. ಎರಡಾ.. ಇಷ್ಟು ಸಮಸ್ಯೆಗಳು ಸಾಲುವುದಿಲ್ಲ ಎಂಬಂತೆ ಮತ್ತೆ ಪ್ರಕೃತಿಗೆ ತೊಂದರೆ ನೀಡುತ್ತಿದ್ದಾನೆ ಮಾನವ. ವಿಜ್ಞಾನಿಗಳು ಹೇಳುವ ಪ್ರಕಾರ ಅಕಸ್ಮಾತ್ ಸಾಗರದ ಆಳದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟರೆ, ಅಂದೇ ಮಾನವನ ವಿನಾಶಕ್ಕೆ ಮುನ್ನುಡಿ ಬರೆಯಬಹುದು.