3ನೇ ಮಹಾಯುದ್ಧಕ್ಕೆ ಇಸ್ರೇಲ್ ಭೂಮಿಯಲ್ಲೇ ಮೊಳಗಿತಾ ರಣಕಹಳೆ?
ಪವಿತ್ರ ಸ್ಥಳ ಜೆರುಸಲೇಂ ಪ್ರದೇಶದಲ್ಲಿ ಕೋಳಿ ಜಗಳದಂತೆ ಆರಂಭವಾದ ಹಿಂಸಾಚಾರ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. 5 ದಿನದ ಹಿಂದೆ 'ಅಲ್ ಅಖ್ಸಾ' ಮಸೀದಿ ಆವರಣದಲ್ಲಿ ಪ್ಯಾಲೆಸ್ತೇನ್ ಪ್ರತಿಭಟನಾಕಾರರು ಮತ್ತು ಇಸ್ರೇಲ್ ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಇದಾಗ ಬಳಿಕ ಹಿಂಸಾಚಾರ ನಡೆದು, ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
Recommended Video
ಇಬ್ಬರ ಜಗಳದಲ್ಲಿ ಉಗ್ರರು ಲಾಭ ಮಾಡಿಕೊಳ್ಳುತ್ತಿದ್ದು, ಹಮಾಸ್ ಉಗ್ರರ ಗ್ಯಾಂಗ್ ಪ್ಯಾಲೆಸ್ತೇನ್ ಗಡಿಯಿಂದ ಇಸ್ರೇಲ್ ಮೇಲೆ 200ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದಾರೆ. ಹಲವರು ಮೃತಪಟ್ಟಿದ್ದರೂ ಈವರೆಗೆ ಸಿಕ್ಕಿರುವ ಲೆಕ್ಕ ಮಾತ್ರ 36 ಜನರದ್ದು. 300 ಕ್ಕೂ ಹೆಚ್ಚುಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದ್ಕಡೆ ಪರಿಸ್ಥಿತಿಯ ಗಂಭೀರತೆ ಅರಿತುಕೊಂಡ ಇಸ್ರೇಲ್ ಪ್ರಧಾನಿ, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಎಲ್ಲೆಂದರಲ್ಲಿ ದಿಢೀರ್ ರಾಕೆಟ್ಗಳು ಹಾರಿ ಬರುತ್ತಿದ್ದು, ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಗಡಿ ಭಾಗದ ಜನರು ಜೀವ ಕೈಲಿಡಿದು ಬದುಕುವ ಸ್ಥಿತಿ ಎದುರಾಗಿದೆ. ಅಲ್ಲದೆ ಇಸ್ರೇಲ್ ಮಿತ್ರ ರಾಷ್ಟ್ರಗಳು ಈ ಘಟನೆಯನ್ನು ಖಂಡಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.
ಭಾರತ ಮೂಲದ ಮಹಿಳೆ ಸಾವು
ಹಮಾಸ್ ಉಗ್ರರು ನಡೆಸಿರುವ ದಾಳಿಯಲ್ಲಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕೇರಳದ ಇಡುಕ್ಕಿಯ ಸೌಮ್ಯ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ಭಾಗ ಅಶ್ಕೆಲೋನ್ನಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಹಮಾಸ್ ನಡೆಸಿದ ದಾಳಿಯಿಂದ ಸೌಮ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಉಗ್ರರ ಗ್ಯಾಂಗ್ ಸೋಮವಾರದಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿತ್ತು. ನಿನ್ನೆಯಿಂದ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿದೆ. ಹಲವು ದಶಕಗಳ ಕಾಲ ಹಮಾಸ್ ಹಾಗೂ ಇಸ್ರೇಲ್ ನಡುವೆ ಘೋರ ಕಾಳಗ ನಡೆಯುತ್ತಾ ಬಂದಿದೆ.
ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನನು ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನ ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಪಡಿಸಿಕೊಳ್ಳಲು ಇಸ್ರೇಲ್ಗೆ ಇದು ಅನಿವಾರ್ಯವೂ ಆಗಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ. ಇದು ಸಹಜವಾಗಿಯೆ ಇಸ್ರೇಲ್ ವಿರೋಧಿ ರಾಷ್ಟ್ರಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಸ್ರೇಲ್ನಲ್ಲಿ ಈಗಾಗಲೇ ಪ್ರಧಾನಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕೋಮು ಗಲಭೆಗಳೂ ಆರಂಭವಾಗಿದ್ದು ದ್ವೇಷ ಭಾವನೆಯನ್ನು ಕೆರಳುವಂತೆ ಮಾಡಿದೆ.
|
ಶಾಂತಿ ನೆಲೆಸುವುದೇ ಇಲ್ವಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ. ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಪಟ್ಟರೂ ವರ್ಕೌಟ್ ಆಗುತ್ತಿಲ್ಲ.