ಮರಣದಂಡನೆ ವಿರುದ್ಧ ಕುಲಭೂಷಣ್ ಜಾಧವ್ ಮೇಲ್ಮನವಿ ಸಲ್ಲಿಸಲು ಪಾಕ್ ಸಂಸತ್ ಅನುಮೋದನೆ
ಇಸ್ಲಾಮಾಬಾದ್, ಜೂನ್ 11: ಪಾಕಿಸ್ತಾನದಲ್ಲಿ ಬಂಧಿತನಾಗಿದ್ದು ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಮಾಜಿ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ವಿಚಾರವಾಗಿ ಪಾಕಿಸ್ತಾನ ಸಂಸತ್ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ಗೆ ಶಿಕ್ಷೆಯ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕಿಸ್ತಾನ ಸಂಸತ್ ಅಂಗೀಕರಿಸಿದೆ.
ಈ ಬಗ್ಗೆ ಪಾಕಿಸ್ತಾನದ ಪ್ರಮುಖ ಪತ್ರಿಕೆ 'ಡಾನ್' ವರದಿ ಮಾಡಿದ್ದು "ರಾಷ್ಟ್ರೀಯ ಅಸೆಂಬ್ಲಿ 2020ರ ಐಸಿಜೆ (ಇಂಟರ್ನ್ಯಾಶನಲ್ ಕೋರ್ಟ್ ಆಫ್ ಜಸ್ಟೀಸ್) ಮಸೂದೆಯನ್ನು ಗುರುವಾರ ಅಂಗೀಕರಿದೆ. ಈ ಮೂಲಕ ಕುಲಭೂಷಣ್ ಜಾಧವ್ ಅವರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ರಾಯಭಾರ ಕಚೇರಿಯ ನೆರವನ್ನು ಪಡೆಯಲು ಅವಕಾಶವಿದೆ" ಎಂದಿದೆ.
ಪಾಕಿಸ್ತಾನದಲ್ಲಿ ಕೊರೊನಾ 3ನೇ ಅಲೆ ನಿಯಂತ್ರಣದಲ್ಲಿ: 1 ಕೋಟಿ ಮಂದಿಗೆ ಲಸಿಕೆ
ಪಾಕಿಸ್ತಾನ ಸಂಸತ್ನ ಈ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದೆ. ಆದರೆ ಕುಲಭೂಣ್ ಜಾಧವ್ ಅವರಿಗೆ ಭಾರತೀಯ ಅಥವಾ ಯಾವುದಾದಲೂ ತಟಸ್ಥ ದೇಶದ(ಭಾರತ, ಪಾಕಿಸ್ತಾನ ಹೊರತುಪಡಿಸಿದ ದೇಶ ) ವಕೀಲರ ಕಾನೂನು ನೆರವು ನೀಡದಿದ್ದರೆ ಈ ಕಾನೂನಿಗೆ ಅರ್ಥವಿಲ್ಲದಂತೆ ಆಗುತ್ತದೆ. ಭಾರತೀಯ ವಕೀಲರನ್ನು ಪಾಕಿಸ್ತಾನ ಬಯಸದಿದ್ದರೆ ಯಾವುದಾರೂ ಮೂರನೇ ದೇಶದ ವಕೀಲರ ನೆರವನ್ನು ಪಡೆಯಲು ಅವಕಾಶ ನೀಡಬೇಕು ಎಂದು ಭಾರತ ಪ್ರತಿಕ್ರಿಯಿಸಿದೆ.
ಕುಲಭೂಷಣ್ ಜಾಧವ್ ಭಾರತದ ಪರವಾಗಿ ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸುವ ಮೂಲಕ ದುಷ್ಕೃತ್ಯಕ್ಕೆ ಯತ್ನಿಸಿದ್ದರು ಎಂಬ ಗಂಭೀರ ಆರೋಪವನ್ನು ಪಾಕಿಸ್ತಾನ ಹೋರಿಸಿದೆ. ಈ ಪ್ರಕರಣದಲ್ಲಿ ಜಾಧವ್ ತಪ್ಪಿತಸ್ಥ ಎಂದು ಹೇಳಿರುವ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ನೀಡಿದೆ.
ಪಾಕಿಸ್ತಾನ ಕೋರ್ಟ್ನ ಈ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯ ಇಂಟರ್ನ್ಯಾಶನಲ್ ಕೋರ್ಟ್ ಆಫ್ ಜಸ್ಟೀಸ್ನ ಮೊರೆ ಹೋಗಿತ್ತು. ಕುಲಭೂಷಣ್ ಪರವಾಗಿ ತೀರ್ಪುನೀಡಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಮನವಿಯಂತೆ ಜಾಧವ್ಗೆ ರಾಯಭಾರಿ ಕಚೇರಿಯ ನೆರವು ಪಡೆಯಲು ಹಾಗೂ ಶಿಕ್ಷೆಯ ಮರುಪರಿಶೀಲನೆಗೆ ಅವಕಾಶವನ್ನು ನೀಡಿ 2019ರ ಜುಲೈನಲ್ಲಿ ಆದೇಶಿಸಿತ್ತು.