ಮ್ಯಾಡಿಸನ್ನಲ್ಲಿ ನರೇಂದ್ರ ಮೋದಿ ಮಾಂತ್ರಿಕ ಭಾಷಣ
ನ್ಯೂಯಾರ್ಕ್, ಸೆ.29: ಇಲ್ಲಿನ ಮ್ಯಾನ್ಹಟನ್ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20 ಸಾವಿರಕ್ಕೂ ಅಧಿಕ ಎನ್ನಾರೈಗಳನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದ್ದಾರೆ. 360 ಡಿಗ್ರಿಯಲ್ಲಿ ತಿರುಗುವ ವೇದಿಕೆಯಲ್ಲಿ ಮೋದಿ ಅವರು ಹಿಂದಿಯಲ್ಲಿ ಮಾಡಿದ ಮಾಂತ್ರಿಕ ಭಾಷಣದ ಮೂಲಕ ಇಡೀ ವಿಶ್ವದ ಗಮನ ಮತ್ತೊಮ್ಮೆ ಸೆಳೆದಿದ್ದಾರೆ.
ಮೋದಿ ಮಾಡಲಿರುವ ಭಾಷಣವನ್ನು ಟೈಮ್ಸ್ ಚೌಕದಲ್ಲಿನ ಬೃಹತ್ ಪರದೆಯ ಮೂಲಕ ನೇರಪ್ರಸಾರ ಮಾಡಲಾಯಿತು. ಪರದೆಯ ಕೆಳ ಭಾಗದಲ್ಲಿ ಅವರ ಭಾಷಣದ ಇಂಗ್ಲೀಷ್ ಅನುವಾದ ಪ್ರಸಾರವಾಯಿತು. ಮೋದಿ ಅವರು ತಮ್ಮ ಭಾಷಣಕ್ಕೂ ಮುನ್ನ ಹೊರಗಡೆ ನಿಂತು ಕೊಂಡು ಭಾಷಣ ಕೇಳುತ್ತಿದ್ದವರಲ್ಲಿ ಕ್ಷಮೆಯಾಚಿಸಿದರು.[ಮ್ಯಾಡಿಸನ್ ನಲ್ಲಿ ಮೋದಿ ಭಾಷಣ- ವಿಡಿಯೋ]
ಭಾರತ್ ಮಾತಾಕೀ ಜೈ.. ಅಮೆರಿಕದಲ್ಲಿರುವ ಪ್ರೀತಿಯ ಭಾರತೀಯರೇ, ಅಮೆರಿಕದ ರಾಜಕೀಯ ನೇತಾರರೇ ಮತ್ತು ಭಾರತದಲ್ಲಿ ಹಾಗೂ ಇತರೆ ಕಡೆಯಲ್ಲಿ ಟಿವಿ ಹಾಗೂ ಇಂಟರ್ನೆಟ್ ಮೂಲಕ ಈ ಸಮಾರಂಭವನ್ನು ನೋಡುತ್ತಿರುವ ಎಲ್ಲರಿಗೂ ನವರಾತ್ರಿಯ ಶುಭಾಶಯಗಳು ಎನ್ನುತ್ತಾ ಮೋದಿ ಅವರು ತಮ್ಮ ಭಾಷಣ ಆರಂಭಿಸಿದರು. ಮೋದಿ ಮೋದಿ ಮೋದಿ ಎನ್ನುತ್ತಿದ್ದ ಜನತೆ. [ಯುಎಸ್ ಪ್ರವಾಸದ ವೇಳಾಪಟ್ಟಿ]
ಭಾರತದ
ಏಳಿಗೆಗಾಗಿ
ತಾವು
ಕಂಡಿರುವ
ಕನಸನ್ನು
ಬಿಚ್ಚಿಟ್ಟ
ಮೋದಿ
ಅವರು
ಅಮೆರಿಕದ
ನೆಲದಲ್ಲಿ
ನಿಂತು
21ನೇ
ಶತಮಾನ
ಭಾರತದ್ದು
ಏಷ್ಯಾಕ್ಕೆ
ಸೇರಿದ್ದು
ಎಂದು
ಸಾರುವ
ಛಾತಿ
ತೋರಿದರು.
2020ರ
ಹೊತ್ತಿಗೆ
ಇಡೀ
ವಿಶ್ವಕ್ಕೆ
ಮಾನವ
ಸಂಪನ್ಮೂಲ
ಒದಗಿಸುವ
ಸಾಮರ್ಥ್ಯ
ಭಾರತಕ್ಕೆ
ಮಾತ್ರ
ಇರುತ್ತದೆ.
ಕಾರಣ
ನಮ್ಮದು
ಅತ್ಯಂತ
ಹೆಚ್ಚಿನ
ಪ್ರಮಾಣದಲ್ಲಿ
ಯುವಕರನ್ನು
ಹೊಂದಿರುವ
ದೇಶ
ಎಂದರು.
ಎನ್ನಾರೈಗಳಿಗೆ ಮತದಾನದ ಹಕ್ಕು
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಿಮ್ಮಲ್ಲಿ ಬಹುತೇಕರಿಗೆ ಮತದಾನ ಮಾಡುವ ಅವಕಾಶ ಲಭಿಸಿರಲಿಕ್ಕಿಲ್ಲ. ಆದರೆ ಚುನಾವಣೆಯ ಫಲಿತಾಂಶ ಬಂದ ದಿನ ನಿಮ್ಮಲ್ಲಿ ಹಲವಾರು ಮಂದಿ ಖುಷಿಯಿಂದ ರಾತ್ರಿ ನಿದ್ದೆ ಮಾಡಿಲ್ಲ ಎಂಬುದು ನನಗೆ ಗೊತ್ತಿದೆ.
ಐತಿಹಾಸಿಕ ವಿಜಯವನ್ನು ಭಾರತ ಅದೆಷ್ಟು ಸಂಭ್ರಮದಿಂದ ಆಚರಿಸಿತ್ತೋ ಅದಕ್ಕಿಂತ ಹೆಚ್ಚಿನ ಸಂಭ್ರಮಾಚರಣೆಯನ್ನು ನೀವು ಮಾಡಿದ್ದೀರಿ. ಚುನಾವಣೆ ಸಮಯದಲ್ಲಿ ಭಾರತಕ್ಕೆ ಬಂದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದವರೆಲ್ಲರಿಗೂ ನನ್ನ ಥ್ಯಾಂಕ್ಸ್. ಎನ್ನಾರೈಗಳಿಗೆ ಮತದಾನದ ಹಕ್ಕು ನೀಡುವುದರ ಬಗ್ಗೆ ಎನ್ ಡಿಎ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಚುನಾವಣೆ ಗೆಲ್ಲುವುದು ಜವಾಬ್ದಾರಿಯ ಸಂಕೇತ
30 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆಯಲ್ಲಿ ಗೆಲ್ಲುವುದೆಂದರೆ ಒಂದು ಮಹತ್ತರವಾದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಂತೆ. ಈ ಗೆಲುವು ಅಧಿಕಾರ ಚಲಾಯಿಸುವುದಕ್ಕಲ್ಲ, ಸೇವೆ ಮಾಡುವುದಕ್ಕೆ. ಪ್ರಧಾನಿಯಾದ ಬಳಿಕ ನಾನು 15 ನಿಮಿಷಗಳ ರಜೆಯನ್ನೂ ಪಡೆದಿಲ್ಲ. ನಮ್ಮ ಮೇಲೆ ವಿಶ್ವಾಸವಿರಿಸಿರುವ ನೀವು ತಲೆ ತಗ್ಗಿಸುವಂಥ ಕೆಲಸ ನಮ್ಮ ಸರ್ಕಾರ ಎಂದೂ ಮಾಡುವುದಿಲ್ಲ.
21ನೇ ಶತಮಾನ ಏಷ್ಯಾದ ಶತಮಾನ
ದೇಶದ ಜನ ಬದಲಾವಣೆ ಬಯಸಿದ್ದಾರೆ. ವಿಶ್ವದ ಆರ್ಥಿಕ ಶಕ್ತಿಗೆ ಸಮನಾಗಿ ನಿಲ್ಲುವ ಭರವಸೆ ಪ್ರತಿಯೊಬ್ಬ ಭಾರತೀಯನಿಗೂ ಇದೆ. ನಿಮ್ಮೆಲ್ಲರಿಗೂ ಭಾರತದಿಂದ ಹಲವಾರು ಅಪೇಕ್ಷೆಗಳಿವೆ. ಆ ಅಪೇಕ್ಷೆಗಳನ್ನು ಈಡೇರಿಸುವ ಉದ್ಧೇಶದಿಂದಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 21ನೇ ಶತಮಾನ ಏಷ್ಯಾದ ಶತಮಾನ ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಇದರ ನೇತೃತ್ವವನ್ನು ಭಾರತ ವಹಿಸಿಕೊಳ್ಳುವ ಎಲ್ಲಾ ಸಾಮರ್ಥ್ಯವಿದೆ. ಇದಕ್ಕೆ ನೀವೆಲ್ಲ ಬೆಂಬಲಿಸುತ್ತಿರಿ ಎಂದು ನಂಬಿದ್ದೇನೆ
ಮಾನವ ಸಂಪನ್ಮೂಲ, ಯುವಕರ ದೇಶ
ಭಾರತ ವಿಶ್ವದಲ್ಲೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ನಮ್ಮ ಜನಸಂಖ್ಯೆಯ ಶೇಕಡಾ 65 ರಷ್ಟು ಜನ 35 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಈ ಯುವಶಕ್ತಿಯ ಸದ್ಬಳಕೆಯಿಂದ ನಾವು ಭಾರತವನ್ನು ವಿಶ್ವ ವೇದಿಕೆಯ ನಾಯಕನನ್ನಾಗಿ ಮಾಡುತ್ತೇವೆ. ಭಾರತದ ಬಳಿ ಜನಶಕ್ತಿ ಇದೆ, ಪ್ರಜಾಪ್ರಭುತ್ವ ಇದೆ, ಯುವಶಕ್ತಿ ಇದೆ, ಮತ್ತು ಮುಖ್ಯವಾಗಿ ಬೇಡಿಕೆ ಇದೆ. ಈ ಮೂರು ಸಂಗತಿಗಳನ್ನು ಬಳಸಿ ನಾವು ಭಾರತಕ್ಕೆ ಶಕ್ತಿ ತುಂಬುತ್ತೇವೆ.
ಪ್ರಜಾಪ್ರಭುತ್ವ ಅಮೆರಿಕ ಹಾಗೂ ಭಾರತದ ಶಕ್ತಿ
ಅಮೆರಿಕ ಜಗತ್ತಿನ ಅತೀ ಪುರಾತನ ಪ್ರಜಾಪ್ರಭುತ್ವ ದೇಶ. ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಜಗತ್ತಿನ ಎಲ್ಲ ದೇಶಗಳ ಜನರು ಅಮೆರಿಕದಲ್ಲಿ ನೆಲೆಸಿದ್ದಾರೆ. ಆದರೆ, ಜಗತ್ತಿನ ಪ್ರತಿಯೊಂದು ದೇಶದಲ್ಲೂ ಭಾರತೀಯರು ನೆಲೆಸಿದ್ದಾರೆ. ಸರ್ಕಾರದಿಂದ ಅಭಿವೃದ್ಧಿ ಮಾಡಲಾಗುವುದಿಲ್ಲ. ಬದಲಾಗಿ ಇಡೀ ಜನ ಸಮೂಹ ಸರ್ಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಸ್ವಚ್ಛ ಆಡಳಿತ ಸರ್ಕಾರದ ಹೊಣೆ. ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿ ಪರಿವರ್ತಿಸುವ ಕಾಲ ಇದೀಗ ಬಂದಿದೆ.
ಗಾಂಧಿ ಕಲಿಸಿದ ಪಾಠ ಅನುಷ್ಠಾನ ಮಾಡಬೇಕು
ಗಾಂಧೀಜಿ ಅವರು ಖಾದಿ ವಸ್ತ್ರ ತೊಡುವ ಮೂಲಕ ಆರಂಭಿಸಿದ ಸ್ವಾತಂತ್ರ್ಯ ಹೋರಾಟ ಮುಂದೆ ಜನಾಂದೋಲನವಾಯಿತು. ಈಗ ಅಭಿವೃದ್ಧಿ ಎಂಬ ಜನಾಂದೋಲನ ಆಗಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿದು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಈ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಬೆಳೆಯಲಾರಂಭಿಸಿದೆ. ದೇಶಕ್ಕಾಗಿ ಏನದರೂ ಮಾಡುತ್ತೇನೆ ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಜಾಗೃತಗೊಳಿಸುವುದು ನನ್ನ ಉದ್ದೇಶ. ಗಾಂಧಿ ಅವರ ನಿಜವಾದ ಅರ್ಥದ ದೇಶದ ಸ್ವಾತಂತ್ರ್ಯವೂ ಇದೇ ಆಗಿದೆ.
ಮಂಗಳಯಾನದ ಅತಿ ಕಡಿಮೆ ವೆಚ್ಚದ ತುಲನೆ
ಅಹ್ಮದಾಬಾದಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೆ ಆಟೋದಲ್ಲಿ ಪ್ರತಿ ಕಿ.ಮೀ. ಗೆ ಕನಿಷ್ಠ 10 ರೂಪಾಯಿ ಖರ್ಚಾಗುತ್ತೆ. ಆದರೆ ನಮ್ಮ ವಿಜ್ಞಾನಿಗಳು 65 ಸಾವಿರ ಕೋಟಿ ಕಿ.ಮೀ. ದೂರ ಇರುವ ಮಂಗಳವನ್ನು ಒಂದು ಕಿ.ಮೀಗೆ 7 ರೂಪಾಯಿ ವೆಚ್ಚದಲ್ಲಿ ತಲುಪಿದ್ದಾರೆ. ಇಡೀ ಜಗತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳನ ಕಕ್ಷೆ ತಲುಪಿದ ದೇಶ ಭಾರತ. ಇದನ್ನು ಟ್ಯಾಲೆಂಟ್ ಅನ್ನುತ್ತಿರಾ ಇಲ್ಲವಾ? ನಮ್ಮಲ್ಲಿರುವ ಇಂಥ ಟ್ಯಾಲೆಂಟ್ ಬಳಸಿಕೊಳ್ಳಬೇಕಿದೆ.
ಕೌಶಲ್ಯ ಅಭಿವೃದ್ಧಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ
ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಬೇಕಾದ್ದು ಬಹಳಷ್ಟು ಇದೆ. ನೂತನ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಇಲಾಖೆಯನ್ನೇ ತೆರೆದಿದೆ. ಅಲ್ಲದೇ ವಿಶ್ವದ ಎಲ್ಲ ದೇಶಗಳಿಗೂ ಆಹ್ವಾನ ನೀಡಿ ಈ ಕ್ಷೇತ್ರದಲ್ಲಿ ಅವರಿಗಿರುವ ಅನುಭವವನ್ನು ಎರವಲು ಪಡೆಯಲಾಗುತ್ತಿದೆ.
ಜನಧನ ಯೋಜನೆ ನೂತನ ಮಹತ್ವದ ಸಾಧನೆ
ಪ್ರಧಾನಮಂತ್ರಿ ಜನಧನ ಯೋಜನೆ ನೂತನ ಸರ್ಕಾರದ ಮಹತ್ವದ ಸಾಧನೆ. ಯೋಜನೆ ಪ್ರಾರಂಭವಾದ ಎರಡೇ ವಾರದಲ್ಲಿ ಸುಮಾರು 4 ಕೋಟಿ ಖಾತೆ ತೆರೆಯಲಾಗಿದೆ. ಶೂನ್ಯ ಹೂಡಿಕೆ ಮೂಲಕ ಖಾತೆ ತೆರೆಯುವ ಯೋಜನೆಗೆ ಜನರು ಯಥೇಚ್ಛವಾಗಿ ಹಣ ತೊಡಗಿಸಿದ್ದಾರೆ. 70 ರ ದಶಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಬದಲಾವಣೆಗಿಂತ ಅತಿ ದೊಡ್ಡ ಯಶಸ್ಸು ಇಲ್ಲಿ ಕಾಣಲಾಗಿದೆ.
‘ಮೇಕ್ ಇಂಡಿಯಾ' ಬಂಡವಾಳ ಹೂಡಿಕೆಯಷ್ಟೇ ಅಲ್ಲ
ಭಾರತದಲ್ಲಿ ಅನೇಕ ಸಾಧ್ಯತೆಗಳಿವೆ. ಹೊಸ ಹಾದಿಯನ್ನು ಕಾಣಬಹುದಾಗಿದೆ. ನಾನು ಇತ್ತಿಚೀಗಷ್ಟೇ ಹೊಸ ಕಾರ್ಯಕ್ರಮವೊಂದನ್ನು ಜಾರಿಗೊಳಿಸಿದ್ದೇನೆ. 'ಮೇಕ್ ಇಂಡಿಯಾ' ಬಂಡವಾಳ ಹೂಡಿಕೆಯಷ್ಟೇ ಅಲ್ಲ ಅಪಾರ ಪ್ರಮಾಣದಲ್ಲಿ ಉದ್ಯೋಗ ನೀಡಲಿದೆ. ನಗರ ಪ್ರದೇಶ ಬಿಟ್ಟು ಹಳ್ಳಿಗಳಲ್ಲೇ ಯುವಕರು ನೆಮ್ಮದಿಯಿಂದ ಬದುಕುವ ಯೋಜನೆ ಇದಾಗಿದೆ.
ನಿಮಗೆ ನಾನು ಹಬ್ಬದ ಕೊಡುಗೆ ನೀಡುತ್ತಿದ್ದೇನೆ
PIO ಗಳಿಗೆ ಆನ್ ಅರೈವಲ್ ವೀಸಾ, ಜೀವಮಾನದ ವೀಸಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಪ್ರವಾಸಿ ಅಮೆರಿಕನ್ನರಿಗೂ ಭಾರತದಲ್ಲಿರುವ ಕಾಲ ಅವಧಿಯನ್ನು ವಿಸ್ತರಿಸಲು ಚಿಂತಿಸಲಾಗಿದೆ.
ಬೇಡದ ಕಾನೂನು ಕಿತ್ತು ಹಾಕುವಂತೆ ಹೇಳಿದ್ದೇನೆ
ಈ ಹಿಂದಿನ ಸರ್ಕಾರಗಳು ಕಠಿಣ ಕಾನೂನುಗಳನ್ನು ಮಾಡುವುದರಲ್ಲಿಯೇ ಕಾಲ ಹರಣ ಮಾಡಿವೆ. ಆದರೆ ನಾನು ಎಲ್ಲ ಅನುಪಯುಕ್ತ ಕಾನೂನುಗಳನ್ನು ತೊಡೆದು ಹಾಕುವ ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ಅನುಭವಿಗಳ ಸಮಿತಿಯೊಂದನ್ನು ರಚಿಸಿದ್ದೇನೆ. ಉತ್ತಮ ಆಡಳಿತ ಅಂದ್ರೆ ಸರ್ಕಾರದ ಕೆಲಸ ಸುಲಭವಾಗಿ ನಡೆಯಬೇಕು. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವಂತಿರಬೇಕು. ಹೀಗಾಗಿ ಬೇಡದ ಕಾನೂನುಗಳನ್ನು ಕಿತ್ತು ಹಾಕಲಾಗುತ್ತದೆ. ಜನರ ಉಪಯೋಗಕ್ಕೆ ಬಾರದೇ ಇರುವ ಕಾನೂನು ಯಾರಿಗೆ ಬೇಕು.
ಸಣ್ಣ ವ್ಯಕ್ತಿಗಳಿಗೆ ದೊಡ್ಡ ಕನಸು ಮಾರಬೇಕಿದೆ
ಜನ ನನ್ನನ್ನು ದೊಡ್ಡ ಯೋಜನೆಗಳ ಬಗ್ಗೆ ಮಾತನಾಡಿ ಎಂದು ಕೇಳುತ್ತಾರೆ. ನಾನು ಅವರಿಗೆ ಹೇಳೋದು, ನಾನು ಚಹಾ ಮಾರಿ ಈ ಸ್ಥಾನಕ್ಕೆ ಬಂದಿದ್ದೇನೆ. ನಾನು ಸಾಧಾರಣ ಮನುಷ್ಯ. ಆದ್ದರಿಂದಲೇ ನಾನು ಸಾಧಾರಣ ಕೆಲಸಗಳಿಗೆ ಮನ್ನಣೆ ನೀಡುತ್ತೇನೆ. ಸಣ್ಣ ಸಣ್ಣ ವ್ಯಕ್ತಿಗಳಿಗೆ ದೊಡ್ಡ ದೊಡ್ಡ ಅನುಕೂಲ ಮಾಡಿಕೊಡಲು ನಾನು ಸಿದ್ಧನಾಗಿದ್ದೇನೆ
ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದೇನೆ
ಸ್ವಚ್ಛತಾ ಅಭಿಯಾನದ ಮೂಲಕ ಮಹಾತ್ಮಾ ಗಾಂಧಿಜೀಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಪಣತೊಟ್ಟಿದ್ದೇನೆ. ಭಾರತೀಯರು ಗಂಗಾ ನದಿ ಮೇಲೆ ಇಟ್ಟಿರುವ ನಂಬಿಕೆಯ ಪ್ರತಿರೂಪವಾಗಿ ನಾನು ಗಂಗಾ ಶುದ್ಧೀಕರಣ ಕಾರ್ಯ ಕೈಗೆತ್ತಿಕೊಂಡಿದ್ದೇನೆ. ಅಲ್ಲದೇ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ಗಂಗಾ ಶುದ್ಧೀಕರಣ ಮಾಡುವ ಅವಶ್ಯಕತೆ ಇದೆ. ಭಾರತದ ಶೇಕಡಾ 40 ರಷ್ಟು ಜನಸಂಖ್ಯೆಯ ಆರ್ಥಿಕ ಸ್ಥಿತಿಗತಿ ಗಂಗೆಯ ಮೇಲೆ ಅವಲಂಬಿತವಾಗಿದೆ.
ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು
ನನ್ನ ವೆಬ್ ಸೈಟ್ mygov.in ನಲ್ಲಿ ನೀವು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ತಂತ್ರಜ್ಞಾನದ ಸಹಾಯದಿಂದ ನಾವು ನಮ್ಮ ಶಕ್ತಿಯ ಪ್ರದರ್ಶನ ಮಾಡಬಹುದು. ನಾನು ಸದಾ ನಿಮಗಾಗಿ ಸ್ಪಂದಿಸುತ್ತೇನೆ. ಎಲ್ಲರೂ ಒಂದಾಗಿ ಭಾರತ ಮಾತೆಯ ಸೇವೆ ಮಾಡೋಣ. ಭಾರತ ಮಾತಾ ಕೀ ಜೈ....